ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿಯಲ್ಲಿನ ಹಲಸು ರುಚಿ ಬಣ್ಣದ ಮತ್ತು ಸುವಾಸನೆ ಎಲ್ಲೆಡೆ ಪ್ರಸಿದ್ದಿ. ಗ್ರಾಮೀಣ ರಸ್ತೆಗಳ ಬದಿಯಲ್ಲಿ ಸಾಲು ಸಾಲಾಗಿ ರಾಶಿಹಾಕಿರುವ ಹಲಸುಗಳು ಪ್ರಯಾಣಿಕರ ಗಮನ ಸೆಳೆಯುತ್ತಿದ್ದು, “ತೂಬಗೆರೆ ಹಲಸು ಬಂದಿದೆ” ಎಂಬ ಮಾತು ಕೇಳುತ್ತಿದ್ದಂತೆಯೇ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಿಂದ ಜನರು ನೇರವಾಗಿ ಗ್ರಾಮಗಳತ್ತ ಮುಖ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ತೂಬಗೆರೆ ಹೋಬಳಿಯ ಕಾಚಹಳ್ಳಿ, ಮೆಳೇಕೋಟೆ, ನೆಲ್ಲುಕುಂಟೆ, ಸೋತೇನಹಳ್ಳಿ ನೆಲ್ಲುಗುದಿಗೆ ಲಘುಮೇನಹಳ್ಳಿ ತುರುವನಹಳ್ಳಿ ಸೇರಿದಂತೆ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೂರಾರು ವರ್ಷಗಳ ಹಳೆಯ ಹಲಸಿನ ಮರಗಳು ಇಂದಿಗೂ ಸಮೃದ್ಧವಾಗಿ ಫಲ ನೀಡುತ್ತಿವೆ. ಸುಮಾರು10 ಕೆ ಜಿ ಯಿಂದ 30 - 40 ಕೆ ಜಿ. ಯಷ್ಟು ತೂಕ ಹೊಂದಿದ ತೂಬಗೆರೆ ತನ್ನದೇ ಆದ ವಿಶಿಷ್ಟ ರುಚಿಯನ್ನು ಹೊಂದಿದೆ. ನವಂಬರ್ ನಿಂದ ಜೂನ್ ಜುಲೈ ವರೆವಿಗೂ ಈ ಬೆಳೆ ಲಭ್ಯವಿದೆ.ರೈತರ ಮನೆಗಳ ಮುಂಭಾಗ, ತೋಟಗಳ ಅಂಚು ಹಾಗೂ ಹೊಲಗಳ ಮಧ್ಯೆ ಕಾಣಸಿಗುವ ಬೃಹತ್ಹಲಸಿನ ಮರಗಳು ಈ ಭಾಗದ ಕೃಷಿ ಪರಂಪರೆಯ ಸಾಕ್ಷಿಗಳಾಗಿವೆ. ಕೆಲವು ಮರಗಳು ಹಲವು ತಲೆಮಾರುಗಳಿಂದ ಉಳಿದು ಬಂದಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ರಾಜ್ಯದ ಬೇರೆ ಭಾಗಗಳಲ್ಲಿ ಹೆಚ್ಚಿನ ಇಳುವರಿಯಿಂದ ಹಲಸಿನ ಬೆಲೆ ಕುಸಿತ ಕಂಡರೂ, ತೂಬಗೆರೆ ಹಲಸು ಮಾತ್ರ ತನ್ನ ವಿಶಿಷ್ಟ ರುಚಿ, ಕೇಸರಿ ಬಣ್ಣ ಹಾಗೂ ಸುವಾಸನೆಯಿಂದ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿದೆ. ಇಲ್ಲಿನ ಕೆಂಪು ಮಣ್ಣು, ತೇವಾಂಶಯುಕ್ತ ಹವಾಮಾನ ಹಾಗೂ ಪ್ರಕೃತಿಯ ಅನುಕೂಲಕರ ವಾತಾವರಣವೇ ಹಲಸಿನ ಸಿಹಿತನಕ್ಕೆ ಕಾರಣ ಎಂದು ರೈತರು ಅಭಿಪ್ರಾಯಪಡುತ್ತಾರೆ. “ತೂಬಗೆರೆ ಚಂದ್ರ ಹಲಸು” ಎಂಬ ಹೆಸರಿನಿಂದಲೇ ಈ ಭಾಗದ ಹಲಸು ರಾಜ್ಯದಾದ್ಯಂತ ಪ್ರಸಿದ್ಧಿಯಾಗಿದೆ.
ಬೇಸಿಗೆ ಮಳೆ ಬಿದ್ದ ನಂತರ ಹಣ್ಣಿನ ಮಾಗುವಿಕೆಯಲ್ಲಿ ವಿಶೇಷ ಬದಲಾವಣೆ ಕಂಡುಬರುವುದರಿಂದ ತೂಬಗೆರೆ ಭಾಗದಲ್ಲಿ ಮಳೆಗಾಲದ ಆರಂಭದಲ್ಲೇ ಹಲಸಿನ ಸೀಸನ್ಜೋರಾಗಿರುತ್ತದೆ. ಈ ಸಮಯದಲ್ಲಿ ಮರಗಳಲ್ಲಿ ಮಾಗುವ ಹಲಸುಗಳು ಹೆಚ್ಚಿನ ಸಿಹಿತನ, ಗಾಢ ಕೇಸರಿ ಬಣ್ಣ ಮತ್ತು ವಿಶಿಷ್ಟ ಸುವಾಸನೆ ಹೊಂದಿರುವುದರಿಂದ ಗ್ರಾಹಕರು ವಿಶೇಷವಾಗಿ ಹುಡುಕಿಕೊಂಡು ಬರುತ್ತಾರೆ. ಮಳೆಯ ತೇವಾಂಶವೇ ಹಲಸಿನ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಬೆಳೆಗಾರರು ಹೇಳುತ್ತಾರೆ.
ಈ ಭಾಗದಲ್ಲಿ ಶಿವರಾತ್ರಿ ಹಲಸು, ಚಂದ್ರ ಹಲಸು, ಕೆಂಪು ರುದ್ರಾಕ್ಷಿ ಹಲಸು, ಹಳದಿ ರುದ್ರಾಕ್ಷಿ ಹಲಸು, ಬಿತ್ತನೆ ಏಕಾದಶಿ ಹಲಸು ಸೇರಿದಂತೆ ಹಲವು ಅಪರೂಪದ ತಳಿಗಳು ಬೆಳೆಯಲಾಗುತ್ತಿವೆ. ಕೆಲವು ತಳಿಗಳಿಗೆ ಗಾಢ ಸಿಹಿತನವಿದ್ದರೆ, ಕೆಲವು ತಳಿಗಳಿಗೆ ವಿಶಿಷ್ಟ ಸುವಾಸನೆ ಮತ್ತು ಆಕರ್ಷಕ ಬಣ್ಣವೇ ವಿಶೇಷತೆ. ಹಣ್ಣು ಕತ್ತರಿಸಿದ ತಕ್ಷಣವೇ ಹರಡುವ ಸುವಾಸನೆ ಗ್ರಾಹಕರನ್ನು ಸೆಳೆಯುತ್ತದೆ.
ತೂಬಗೆರೆ ಭಾಗದ ರಸ್ತೆಗಳಲ್ಲಿ ಈಗ ಎಲ್ಲೆಡೆ ಹಲಸಿನ ವ್ಯಾಪಾರವೇ ಕಂಡುಬರುತ್ತಿದೆ. ರೈತರು ತಮ್ಮ ತೋಟಗಳಿಂದ ನೇರವಾಗಿ ಹಣ್ಣುಗಳನ್ನು ತಂದು ಮಾರಾಟ ಮಾಡುತ್ತಿದ್ದು, ಮಧ್ಯವರ್ತಿಗಳ ಹಾವಳಿಯಿಂದ ದೂರವಾಗಿ ಉತ್ತಮ ಆದಾಯ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಗ್ರಾಮೀಣ ರಸ್ತೆಗಳ ಪಕ್ಕದಲ್ಲಿ ತಾತ್ಕಾಲಿಕ ಅಂಗಡಿಗಳನ್ನು ನಿರ್ಮಿಸಿ ಹಲಸು ಮಾರಾಟ ಮಾಡುವ ದೃಶ್ಯ ಸಾಮಾನ್ಯವಾಗಿದೆ.
ಸ್ಥಳೀಯ ಮಾರುಕಟ್ಟೆಗಳಲ್ಲಿ ಮಧ್ಯವರ್ತಿಗಳ ಕಾಟ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ 2008ರಲ್ಲಿ ತೂಬಗೆರೆ ಹಲಸು ಬೆಳೆಗಾರರು ಪ್ರತ್ಯೇಕ ಸಂಘವನ್ನು ರಚಿಸಿದರು. ಆರಂಭದಲ್ಲಿ ಕೇವಲ ₹4 ಲಕ್ಷ ವಾರ್ಷಿಕ ವಹಿವಾಟು ಹೊಂದಿದ್ದ ಸಂಘ, ಇದೀಗ ಲಾಭದತ್ತ ಮುನ್ನಡೆಯುತ್ತಿದೆ. ಪ್ರಸ್ತುತ ತೂಬಗೆರೆಯಲ್ಲಿ ಸುಮಾರು 150 ಟನ್ಹಲಸು ಉತ್ಪಾದನೆ ಆಗುತ್ತಿದ್ದು, ವಾರ್ಷಿಕ ವಹಿವಾಟು ₹30 ಲಕ್ಷದಿಂದ ₹35 ಲಕ್ಷದವರೆಗೆ ಏರಿಕೆಯಾಗಿದೆ. ಸಂಘದಲ್ಲಿ ಸುಮಾರು 180 ಮಂದಿ ಬೆಳೆಗಾರರಿದ್ದು, ಉಡುಪಿ, ಮಂಗಳೂರು, ಮೈಸೂರು ಹಾಗೂ ಬೆಂಗಳೂರಿನ ಲಾಲ್ಬಾಗ್ನಲ್ಲಿ ನಡೆಯುವ ಹಲಸು ಮೇಳಗಳಲ್ಲಿ ಭಾಗವಹಿಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.
ನಗರ ಪ್ರದೇಶಗಳ ಗ್ರಾಹಕರು ತೂಬಗೆರೆ ಹಲಸಿನ ರುಚಿಗೆ ಮಾರು ಹೋಗುತ್ತಿದ್ದು, ಪ್ರತಿವರ್ಷ ಬೇಡಿಕೆ ಹೆಚ್ಚುತ್ತಿರುವುದು ರೈತರಲ್ಲಿ ಹೊಸ ವಿಶ್ವಾಸ ಮೂಡಿಸಿದೆ. ಇತ್ತೀಚೆಗೆ ಹಲಸಿನ ವಿವಿಧ ತಳಿಗಳಿಗೆ ವಿಶೇಷ ಗುರುತು ಹಾಗೂ ಪೇಟೆಂಟ್ಮಾನ್ಯತೆ ದೊರಕಿಸಿಕೊಡಲು ಶ್ರಮಿಸುತ್ತಿರುವ ಹಲಸು ಪ್ರೋತ್ಸಾಹಕ ಉದಯ ಆರಾಧ್ಯ ಮಾತನಾಡಿ, “ತಾಲೂಕಿನಲ್ಲಿ ಸಾವಿರ ಟನ್ಗೂ ಅಧಿಕ ಹಲಸಿನ ವಹಿವಾಟು ನಡೆಯುತ್ತಿದೆ. ಯಾವುದೇ ರಸ್ತೆ ಪಕ್ಕ ನೋಡಿದರೂ ಹಲಸಿನ ವ್ಯಾಪಾರ ಕಾಣುತ್ತದೆ. ಬೆಂಗಳೂರು ಅಥವಾ ದೇವನಹಳ್ಳಿ ವಿಮಾನ ನಿಲ್ದಾಣ ಸಮೀಪ ಶಾಶ್ವತ ಹಲಸು ಮಾರುಕಟ್ಟೆ ನಿರ್ಮಿಸಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ತೂಬಗೆರೆ ಹಲಸಿಗೆ ರಾಜ್ಯ ಮಟ್ಟದಲ್ಲಷ್ಟೇ ಅಲ್ಲ, ದೇಶ ಮಟ್ಟದಲ್ಲೂ ದೊಡ್ಡ ಮಾರುಕಟ್ಟೆ ಸಿಗುವ ಅವಕಾಶವಿದೆ” ಎಂದು ಹೇಳಿದರು.
ಹಲಸಿನ ಹಣ್ಣು ಆರೋಗ್ಯಕ್ಕೂ ಅತ್ಯಂತ ಉಪಯುಕ್ತವಾಗಿದೆ. ವಿಟಮಿನ್ಸಿ ಸಮೃದ್ಧವಾಗಿರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ರಕ್ತದೊತ್ತಡ ಸಮತೋಲನದಲ್ಲಿಡಲು ಸಹಕಾರಿ ಎನ್ನಲಾಗುತ್ತಿದೆ. ಹಲಸಿನ ಬೀಜದಲ್ಲಿರುವ ಪ್ರೋಟಿನ್ಹಾಗೂ ವಿಟಮಿನ್ಬಿ ಅಂಶಗಳು ದೇಹಕ್ಕೆ ಅಗತ್ಯ ಪೌಷ್ಟಿಕಾಂಶ ಒದಗಿಸುತ್ತವೆ.
ಮೂಳೆಗಳ ಆರೋಗ್ಯ ಹೆಚ್ಚಿಸಲು, ನರಮಂಡಲದ ಕಾರ್ಯಕ್ಷಮತೆಗೆ ನೆರವಾಗಲು ಹಾಗೂ ಮಧುಮೇಹ ನಿಯಂತ್ರಣಕ್ಕೆ ಸಹಕಾರಿ ಆಗಲು ಹಲಸು ಉಪಯುಕ್ತವಾಗಿದೆ. ಜೊತೆಗೆ ಹೊಟ್ಟೆ ಹುಣ್ಣು ಸಮಸ್ಯೆ ನಿವಾರಣೆ, ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣ, ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಕಡಿಮೆ ಮಾಡುವುದು, ಶೀತ ಹಾಗೂ ಸೋಂಕು ತಡೆಗಟ್ಟುವುದು ಸೇರಿದಂತೆ ಹಲವಾರು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ.
ಗ್ರಾಮೀಣ ಭಾಗದಲ್ಲಿ ಹಲಸನ್ನು ಕೇವಲ ಹಣ್ಣಾಗಿ ಮಾತ್ರವಲ್ಲದೆ, ಚಿಪ್ಸ್, ಹಪ್ಪಳ, ಹೋಳಿಗೆ, ಹಲಸಿನ ಕಡುಬು, ಪಾಯಸ ಸೇರಿದಂತೆ ವಿವಿಧ ತಿನಿಸುಗಳ ರೂಪದಲ್ಲೂ ಬಳಸಲಾಗುತ್ತಿದೆ. ಹಲಸಿನ ಬೀಜಕ್ಕೂ ಉತ್ತಮ ಬೇಡಿಕೆ ಇದ್ದು, ಗ್ರಾಮೀಣ ಅಡುಗೆ ಪದ್ಧತಿಯಲ್ಲಿ ಅದರದೇ ಆದ ಸ್ಥಾನವಿದೆ.
ತೂಬಗೆರೆ ಹಲಸು ಇಂದು ಕೇವಲ ಒಂದು ಹಣ್ಣಾಗಿ ಉಳಿದಿಲ್ಲ; ಅದು ಗ್ರಾಮೀಣ ಆರ್ಥಿಕತೆಗೆ ಆಸರೆಯಾಗಿರುವ ಜೀವನಾಡಿಯಾಗಿದೆ. ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ತೂಬಗೆರೆ ಹಲಸಿಗೆ ವಿಶೇಷ ಮಾರುಕಟ್ಟೆ, ಬ್ರ್ಯಾಂಡ್ಮೌಲ್ಯ ಮತ್ತು ರಫ್ತು ಸೌಲಭ್ಯ ಕಲ್ಪಿಸಿದರೆ ಈ ಭಾಗದ ರೈತರಿಗೆ ಇನ್ನಷ್ಟು ಆರ್ಥಿಕ ಬಲ ಸಿಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.



