ಚಂದ್ರವಳ್ಳಿ ನ್ಯೂಸ್, ಬೀದರ್:
ಮನೆಯವರೆಲ್ಲರೂ ಸೇರಿ ಪ್ರೀತಿಯಿಂದ ಮಾವಿನ ಹಣ್ಣು ತಿಂದ ಕೆಲವೇ ಗಂಟೆಗಳಲ್ಲಿ ಇಬ್ಬರು ಹೆಣ್ಣುಮಕ್ಕಳು ಸಾವನ್ನಪ್ಪಿರುವ ಅತ್ಯಂತ ಹೃದಯ ವಿದ್ರಾವಕ ಘಟನೆಯೊಂದು ಬೀದರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ವಿಷಾಹಾರ ಸೇವನೆಯೇ ಈ ದುರಂತಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಶೆಂಬೆಳ್ಳಿ ಗ್ರಾಮದ ನಿವಾಸಿಗಳಾದ ಭವಾನಿ ವೈಜಿನಾಥ ಮೇತ್ರೆ (17) ಮತ್ತು ಸಂಧ್ಯಾರಾಣಿ ಮೇತ್ರೆ (14) ಮೃತಪಟ್ಟ ದುರ್ದೈವಿ ಸಹೋದರಿಯರು.
ಘಟನೆಯ ಹಿನ್ನೆಲೆ: ಊಟದ ಬಳಿಕ ತಿಂದಿದ್ದ ಮಾವು
ಸುಮಾರು ಮೂರು ದಿನಗಳ ಹಿಂದೆ ಶೆಂಬೆಳ್ಳಿ ಗ್ರಾಮದ ಮನೆಯೊಂದರಲ್ಲಿ ರಾತ್ರಿ ಊಟ ಮುಗಿದ ಬಳಿಕ ಕುಟುಂಬಸ್ಥರೆಲ್ಲರೂ ಸೇರಿ ಮಾವಿನ ಹಣ್ಣು ತಿಂದಿದ್ದಾರೆ. ಹಣ್ಣು ತಿಂದ ಕೆಲವೇ ಹೊತ್ತಿನಲ್ಲಿ ತಾಯಿ ಇಂದುಮತಿ ಹಾಗೂ ಅವರ ಐವರು ಹೆಣ್ಣುಮಕ್ಕಳಿಗೆ ತೀವ್ರವಾಗಿ ವಾಂತಿ-ಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ.
ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ತಾಯಿ ಮತ್ತು ಮಕ್ಕಳನ್ನು ತಕ್ಷಣವೇ ನೆರೆಯ ತೆಲಂಗಾಣದ ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಭವಾನಿ ಮತ್ತು ಸಂಧ್ಯಾರಾಣಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಮತ್ತೊಬ್ಬ ಸಹೋದರಿ, ತಾಯಿ ಪ್ರಾಣಾಪಾಯದಿಂದ ಪಾರು
ಸದ್ಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಮತ್ತೊಬ್ಬ ಸಹೋದರಿ ವಿಜಯಶ್ರೀ (19) ಹಾಗೂ ತಾಯಿ ಇಂದುಮತಿ ಅವರ ಆರೋಗ್ಯ ಸ್ಥಿತಿ ಚೇತರಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಉಳಿದ ಇಬ್ಬರು ಮಕ್ಕಳಿಗೂ ಸೂಕ್ತ ವೈದ್ಯಕೀಯ ನಿಗಾ ಇರಿಸಲಾಗಿದೆ.
ಮರಣೋತ್ತರ ಪರೀಕ್ಷೆಯ ಬಳಿಕ ಸಿಗಲಿದೆ ನಿಖರ ಕಾರಣ:
ಮೃತ ಬಾಲಕಿಯರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಮಾವಿನ ಹಣ್ಣಿನಲ್ಲಿ ರಾಸಾಯನಿಕ ಮಿಶ್ರಣವಿತ್ತೇ ಅಥವಾ ಬೇರೆ ಇನ್ಯಾವುದಾದರೂ ಕಾರಣದಿಂದ ಈ ದುರಂತ ಸಂಭವಿಸಿದೆಯೇ ಎಂಬ ನಿಖರ ಸತ್ಯಾಂಶ ಹೊರಬರಬೇಕಿದೆ.
ಪೊಲೀಸ್ ದೂರು ದಾಖಲು: ಘಟನೆಗೆ ಸಂಬಂಧಿಸಿದಂತೆ ಹೈದರಾಬಾದ್ನ ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಒಟ್ಟಾರೆ ಮಾವಿನ ಹಣ್ಣಿನ ಸೀಸನ್ನಲ್ಲಿ ನಡೆದಿರುವ ಈ ಭೀಕರ ದುರಂತ ಇಡೀ ಶೆಂಬೆಳ್ಳಿ ಗ್ರಾಮವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.



