ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ (90) ಶುಕ್ರವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಮೃತರು ಒಬ್ಬ ಪುತ್ರ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.
ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ವೆಂಕಟಾಚಲಯ್ಯ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಗರದಲ್ಲಿ ಆರ್. ಜಿ. ರವರ ಪಾರ್ಥಿವ ಶರೀರದ ಮೆರವಣಿಗೆ ನಂತರ ಹಣಬೆ ಗ್ರಾಮದಲ್ಲಿ ಮೃತರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಹಣಬೆ ಗ್ರಾಮದಲ್ಲಿ ನಡೆಯಿತು .
ಕೇಂದ್ರ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ನಿಕಟವರ್ತಿಗಳಾಗಿದ್ದ ಆರ್.ಜಿ.ವೆಂಕಟಾಚಲಯ್ಯ ಅವರು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ, ಜಿಲ್ಲಾ ಬ್ಯಾಂಕ್ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಹಾಗೂ ಶಾಸಕರಾಗಿ ಸೇವೆ ಸಲ್ಲಿಸಿದ್ದರು.
2008ರಲ್ಲಿ ಜೆ.ನರಸಿಂಹಸ್ವಾಮಿ ಅವರು ಅಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದಾಗ ನಡೆದ ವಿಧಾನಸಭಾ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಚುನಾವಣೆಯನ್ನು ಗುರು ಶಿಷ್ಯರ ನಡುವಿನ ಚುನಾವಣ ಕಾಳಗ ಎಂದೇ ಬಿಂಬಿಸಲಾಗಿತ್ತು.
ಆರ್. ಎಲ್. ಜಾಲಪ್ಪನವರು ರಾಜಕಾರಣದಿಂದ ನೇಪತ್ಯಕ್ಕೆ ಸರಿದಾಗ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಅತ್ಯಂತ ಸಂಕಷ್ಟದ ಸಮಯದಲ್ಲಿ ಕೆಲವೇ ಜನ ಬೆಂಬಲಿಗರೊಂದಿಗೆ ಪಕ್ಷ ಸಂಘಟಿಸಿ 2013ರಲ್ಲಿ ಮತ್ತೆ ಕಾಂಗ್ರೆಸ್ ಶಾಸಕರು ಆಯ್ಕೆಯಾಗಲು ಕಾರಣರಾಗಿದ್ದರು.
ಆರ್.ಎಲ್.ಜಾಲಪ್ಪ ಅವರು ಶಾಸಕರಾಗಿ, ಸಂಸತ್ ಸದಸ್ಯರಾಗಿದ್ದರು ಸಹ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಆರ್.ಜಿ.ವೆಂಕಟಾಚಲಯ್ಯ ಅವರು ಎಲ್ಲಾ ಆಡಳಿತದ ಹೊಣೆಯನ್ನು ನಿಭಾಯಿಸುತ್ತಿದ್ದರು. ಹಾಗಾಗಿಯೇ ಜಾಲಪ್ಪ ಅವರ ಅತ್ಯಂತ ಆಪ್ತರಾಗಿದ್ದ ಆರ್ಜಿ ಅವರಿಗೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಗಳನ್ನು ಕಲ್ಪಿಸಿದ್ದರು.
ಆರ್.ಜಿ.ವೆಂಕಟಾಚಲಯ್ಯ ಅವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದರೂ ಸಹ ಎಂದೂ ಜಾತಿ ಆಧಾರಿತ ರಾಜಕಾರಣ ಮಾಡದೆ ದಲಿತರು, ಹಿಂದುಳಿದವರ ಪರವಾಗಿ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು.ಅವರ ಪಕ್ಷಾತೀತ ರಾಜಕಾರಣದಿಂದಾಗಿ ತಾಲೂಕಿನಲ್ಲಿ ಅಜಾತ ಶತ್ರುವೆನಿಸಿದ್ದರು.
ಮೃತ ಆರ್. ಜಿ. ವೆಂಕಟಾಚಲಯ್ಯನವರ ನಿಧನಕ್ಕೆಜಿಲ್ಲಾ ಉಸ್ತುವಾರಿ ಮಂತ್ರಿ ಕೆ. ಹೆಚ್. ಮುನಿಯಪ್ಪ,ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ವೆಂಕಟರಮಣಯ್ಯ, ಮಾಜಿ ಸಚಿವ ರಮೇಶ್ ಕುಮಾರ್, ಕಾಂಗ್ರೆಸ್ ಯುವ ಮುಖಂಡ ರಕ್ಷಾ ರಾಮಯ್ಯ, ಬಮುಲ್ ನಿರ್ದೇಶಕ ಬಿ. ಸಿ. ಆನಂದ್, ಪಿ. ಡಿ. ಎ. ಅಧ್ಯಕ್ಷ ಚುಂಚೆಗೌಡ, ಜಿ. ಲಕ್ಷ್ಮೀಪತಿ, ಕೆ. ಎಂ. ಕೃಷ್ಣಮೂರ್ತಿ, ತಳಗವಾರ ಲಕ್ಷ್ಮೀನಾರಾಯಣ್ ಸೇರಿದಂತೆ ಅಪಾರ ಅಭಿಮಾನಿ ಸಮೂಹ ಸಂತಾಪ ಸೂಚಿಸಿದ್ದಾರೆ.



