ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
೫ ವರ್ಷದ ಪ್ರೋಗ್ರೆಸ್ ಕಾರ್ಡ್ ನೊಂದಿಗೆ ಬರುತ್ತೇನೆ ಎಂದು ಶಾಸಕರಾದ ಧೀರಜ್ ಮುನಿರಾಜು ಅವರು ಹೇಳಿದ್ದರು. ಇದೀಗ ೩ ವರ್ಷವಾಗಿದೆ ಈವರೆಗಿನ ಅಭಿವೃದ್ದಿಯ ರಿಪೋರ್ಟ್ ಕಾರ್ಡ್ ಶಾಸಕರು ನೀಡಲಿ ಎಂದು ಕಾಂಗ್ರೆಸ್ ಯುವ ಘಟಕದ ಜಿಲ್ಲಾಧ್ಯಕ್ಷ ಶರತ್ ಪಟೇಲ್ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಯುವ ಕಾಂಗ್ರೆಸ್ ವತಿಯಿಂದ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಜನರು ಶಾಸಕರ ಅಭಿವೃದ್ದಿಯ ರಿಪೋರ್ಟ್ ಕೇಳುತ್ತಿದ್ದಾರೆ. ದೊಡ್ಡಬಳ್ಳಾಪುರ ಕಾಂಗ್ರೆಸ್ ಯುವಘಟಕದಿಂದ ಶೀಘ್ರವಾಗಿ ಶಾಸಕರ ಕಚೇರಿಗೆ ಬರುತ್ತೇವೆ. ೫ ವರ್ಷದ ರಿಪೋರ್ಟ್ ಕಾರ್ಡ್ ಆಮೇಲೆ ನೀಡಬಹುದು. ಈಗ ಅರ್ಧ ಅವಧಿಯೂ ಮುಗಿದಿದ್ದು, ನಿಮ್ಮ ಮಧ್ಯಾಂತರ ರಿಪೋರ್ಟ್ ಕಾರ್ಡ್ ನೀಡುವಂತೆ ಆಗ್ರಹಿಸಿದರು.
ಕಾಂಗ್ರೆಸ್ ಯುವಘಟಕದ ತಾಲೂಕು ಅಧ್ಯಕ್ಷ ಪುನೀತ್ ಗೌಡ ಮಾತನಾಡಿ, ಜಿಲ್ಲಾಸ್ಪತ್ರೆ, ಜಿಲ್ಲಾ ಕ್ರೀಡಾಂಗಣ ದೊಡ್ಡಬಳ್ಳಾಪುರದಲ್ಲಿ ಉಳಿಯುವಂತೆ ಹೋರಾಟ ಮಾಡಿದವರು ಟಿ ವೆಂಕಟರಮಣಯ್ಯ ಅವರು. ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಂತಹ ಸಮಯದಲ್ಲಿ ಪ್ರತಿ ಸಚಿವ ಸಂಪುಟ ಸಭೆಯಲ್ಲೂ ದೊಡ್ಡಬಳ್ಳಾಪುರ ಜಿಲ್ಲಾಸ್ಪತ್ರೆಯನ್ನು ಮುಂದೂಡಿಕೊಂಡು ಬರಲಾಗುತ್ತಿತ್ತು. ಬಿಜೆಪಿ ಸರಕಾರ ಇದ್ದರೂ ಕೂಡ ಸಚಿವರ ಮನೆ ಬಾಗಿಲಿಗೆ ತೆರಳಿ ಜಿಲ್ಲಾಸ್ಪತ್ರೆಗಾಗಿ ವೆಂಕಟರಮಣಯ್ಯ ಅವರು ಪ್ರಯತ್ನಿಸಿದರು. ಇದರಿಂದ ಜಿಲ್ಲಾಸ್ಪತ್ರೆ ತಾಲೂಕಿಗೆ ಮಂಜೂರಾಗಿತ್ತು.
ಆದರೆ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಈಗಿನ ಶಾಸಕರು ಯಾವುದೇ ಪ್ರಯತ್ನ ಮಾಡಿಲ್ಲ. ಯಾವುದೇ ಸಚಿವರನ್ನೂ ಭೇಟಿ ಮಾಡಿಲ್ಲ. ಅವರು ಯಾವಾಗ ಕೇಳಿದರು ಪತ್ರ ಬರೆದಿದ್ದೇನೆ ಎನ್ನುತ್ತಾರೆ. ಆದರೆ ಪತ್ರ ಬರೆಯುವುದಲ್ಲ. ಕೆಲಸ ಹೇಗೆ ಮಾಡಬೇಕು ಎಂಬುದನ್ನು ವೆಂಕಟರಮಣಯ್ಯ ಅವರಿಂದ ಕೇಳಿ ತಿಳಿದುಕೊಂಡರೆ ತಪ್ಪಿಲ್ಲ. ನವ ದೊಡ್ಡಬಳ್ಳಾಪುರದ ಹೆಸರಿನಲ್ಲಿ ಚುನಾವಣೆ ನಡೆಸಿದ ಶಾಸಕರು ಇನ್ನೂ ನವ ದೊಡ್ಡಬಳ್ಳಾಪುರದ ಕನಸನ್ನು ಇನ್ನೂ ಕಂಡಿಲ್ಲ ಎಂಬುದು ನಮ್ಮ ಅಭಿಪ್ರಾಯ. ತಾಲೂಕಿನ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದರೂ ಅವರ ಕಣ್ಣಿಗೆ ಕಾಣುತ್ತಿಲ್ಲ. ನಗರಸಭೆಯಲ್ಲಿ ಅವರ ಪಕ್ಷವೇ ಅಧಿಕಾರದಲ್ಲಿ ಇದ್ದರೂ ಕೂಡ ಯಾವುದೇ ರಸ್ತೆಯೂ ಚೆನ್ನಾಗಿಲ್ಲ. ಶಾಸಕರನ್ನು ಹೊಗಳುವ ತಕ್ಕಂತೆ ಏನು ಕೆಲಸವಾಗಿಲ್ಲ ಎಂದರು.
ಶಂಕು ಸ್ಥಾಪನೆ, ಭೂಮಿ ಪೂಜೆಯೇ ಅಭಿವೃದ್ದಿಯೇ-
ದೊಡ್ಡಬಳ್ಳಾಪುರದಲ್ಲಿ ನೇಕಾರಿಕೆ ಸೀರೆಗಳ ಮಾರಾಟ ಮಳಿಗೆಯನ್ನು ನಿರ್ಮಾಣ ಮಾಡಲು ೧೦ ಗುಂಟೆಯ ಜಾಗವನ್ನು ಮಾಜಿ ಶಾಸಕರಾದ ವೆಂಕಟರಮಣಯ್ಯ ಅವರು ಮಂಜೂರು ಮಾಡಿಸಿದ್ದರು. ಮಳಿಗೆಯ ಗುದ್ದಲಿ ಪೂಜೆ ಪೈಪೋಟಿಯಲ್ಲಿ ಎರಡೆರಡು ಬಾರಿ ನಡೆದರೂ ಇನ್ನೂ ಕೆಲಸ ಆರಂಭವಾಗಿಲ್ಲ.
ಶಂಕುಸ್ಥಾಪನೆ, ಭೂಮಿ ಪೂಜೆಯೇ ಅಭಿವೃದ್ದಿಯೇ. ಇದೇ ರೀತಿ ಆಗಬಾರದು ಎಂಬ ಕಾರಣಕ್ಕೆ ಬಾಶೆಟ್ಟಿಹಳ್ಳಿಯಲ್ಲಿ ಕೆಂಪೇಗೌಡ ಪುತ್ಥಳಿ ಶಂಕುಸ್ಥಾಪನೆಯ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಪ್ರೇಮ್ ಕುಮಾರ್ ರವರು ಶಾಸಕ ಧೀರಜ್ ರವರನ್ನು ಹೊಗಳುವ ಬರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಿಕಟ ಪೂರ್ವ ಶಾಸಕರಾದ ವೆಂಕಟರಮಣಯ್ಯ ರವರನ್ನು ಟೀಕಿಸಿರುವುದು ಕಂಡನೀಯ ಮುಖಂಡರು, ಸಾರ್ವಜನಿಕರು ಪ್ರಶ್ನೆ ಮಾಡಿದರು. ಈ ಬಗ್ಗೆ ಪಪಂ ಅಧ್ಯಕ್ಷರು ೩ ತಿಂಗಳಲ್ಲಿ ಪುತ್ಥಳಿ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.ತಾಂತ್ರಿಕ ಇಲಾಖೆಯಿಂದ ಅನುಮತಿ ಪಡೆಯುತ್ತೇವೆ ಎಂದಿದ್ದಾರೆ. ಅದನ್ನು ತೆಗೆದುಕೊಂಡೆ ಭೂಮಿ ಪೂಜೆ ಮಾಡಬಹುದಿತ್ತಲ್ವೇ ಎಂದು ಪ್ರಶ್ನಿಸಿದವರನ್ನು ಅನ್ ನೌನ್ ಪರ್ಸನ್ ಹಾಗೂ ಪಟ್ಟಣ ಪಂಚಾಯ್ತಿಯಲ್ಲಿ ಸೋತವರಿಗೆ ಪ್ರಶ್ನೆ ಮಾಡುವ ಹಕ್ಕಿಲ್ಲ ಎಂದು ಹೇಳುವ ಮೂಲಕ ಅಧ್ಯಕ್ಷರು ಸರ್ವಾಧಿಕಾರಿ ದೋರಣೆ ತೋರಿದ್ದಾರೆ. ಇದು ಅವರ ಬದ್ಧತೆಗೆ ಶೋಭೆ ತರುವುದಿಲ್ಲ. ಮುಂಬರುವ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರ ಸಿಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಶಿವರಾಜ್, ಕಸಬಾ ಯುವ ಕಾಂಗ್ರೆಸ್ ಅಧ್ಯಕ್ಷ ಜಯಸಿಂಹ, ಎನ್. ಎಸ್. ಯು. ಐ. ತಾಲೂಕು ಅಧ್ಯಕ್ಷ ಅಶ್ವತ್ ರೆಡ್ಡಿ, ಮುಖಂಡರಾದ ಶಿವಕುಮಾರ್ ಸೇರಿದಂತೆ ಅನೇಕರು ಹಾಜರಿದ್ದರು.
“ಭಾಷೆಟ್ಟಿ ಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರು ವರದಿ ಮಾಡಲು ಹೋದ ಪತ್ರಕರ್ತರ ಹಲ್ಲೆ ಮಾಡಲು ಮುಂದಾಗುತ್ತಾರೆ. ಇದು ಅವರ ಸರ್ವಾಧಿಕಾರಿ ದೋರಣೆ ತೋರುತ್ತದೆ. ಇದು ಖಂಡನೀಯ ಈ ಕೂಡಲೇ ಅಧ್ಯಕ್ಷರು ಪತ್ರಕರ್ತರ ಕ್ಷಮೆ ಕೇಳಬೇಕು”.
ಮಲ್ಲೋಹಳ್ಳಿ ಪುನೀತ್ ಗೌಡ,
ಅಧ್ಯಕ್ಷರು, ತಾಲೂಕು ಯುವ ಕಾಂಗ್ರೆಸ್.



