ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸಾಂಸ್ಕೃತಿಕವಾಗಿ ಅಧಃಪತನಕ್ಕೆ ಹೋಗಿರುವ ಪ್ರಸ್ತುತ ದಿನಗಳಲ್ಲಿ ಕುಟುಂಬ, ಸಮಾಜವನ್ನು ಸರಿದಾರಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆದರ್ಶ ಯುವಕ/ಯುವತಿ ಸಂಘ ಹಿಂದುಳಿದ ವರ್ಗಗಳ ಇಲಾಖೆ ಸಹಯೋಗದೊಂದಿಗೆ ತುರುವನೂರು ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಬಾಲಕಿಯರ ವಸತಿ ನಿಲಯದಲ್ಲಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಸಂಭ್ರಮ-೨೦೨೬ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಕ್ಕಳಿಗೆ ಸಾಂಸ್ಕೃತಿಕ ಸಂಭ್ರಮ ಮುಖ್ಯ. ಪಠ್ಯೇತರ ಭಾಗವಾಗಿ ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಉಲ್ಲಾಸವೆನಿಸುತ್ತದೆ.
ಮನುಷ್ಯ ನೈತಿಕತೆ, ವಿವೇಕವಂತನಾಗಿ ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಕಲೆ ಬೇಕು. ಕಲಾವಿದರನ್ನು ಪ್ರೋತ್ಸಾಹಿಸಿದರೆ ಪ್ರತಿಭೆಯನ್ನು ಗುರುತಿಸಿ ನಾಡು ದೇಶವನ್ನು ಕಟ್ಟಬಹುದು ಎಂದು ಹೇಳಿದರು.
ಸಂಸ್ಕೃತಿ ಎಂದರೆ ಬದುಕು. ಸಾಂಸ್ಕೃತಿಕ ಕಲೆಯಿಂದ ಸಮಾಜಕ್ಕೆ ವಿವೇಕ ಹೇಳುವ ಪ್ರಜ್ಞೆ ಮೂಡುತ್ತದೆ. ಪರಂಪರೆ ಜೊತೆ ಪಿಸು ಮಾತುಗಳನ್ನಿಟ್ಟುಕೊಳ್ಳಬೇಕು. ಧರ್ಮ
ಜಾತಿ, ಲಿಂಗದ ನಡುವೆ ತಾರತಮ್ಯವಾಗುತ್ತಿದೆ. ಯುದ್ದ ಜೀವಗಳನ್ನು ಬಲಿ ತೆಗೆದುಕೊಂಡು ದೇಶವನ್ನು ಸುಡುತ್ತದೆ. ಸ್ವಾರ್ಥ, ಅಹಂಕಾರ, ಪ್ರತಿಷ್ಟೆಯನ್ನು ಹೋಗಲಾಡಿಸಬೇಕಾದರೆ ಇಂತಹ ಸಾಂಸ್ಕೃತಿಕ ಸಂಭ್ರಮಗಳ ಅವಶ್ಯಕತೆಯಿದೆ. ಸಂಗೀತ, ಧ್ಯಾನ ತಪಸ್ಸಿಂದತೆ, ಪ್ರತಿಯೊಬ್ಬರು ಕ್ಷೆಭೆಗಳಲ್ಲಿ ಬದುಕುವಂತಾಗಿದೆ. ಕಲೆಯನ್ನು ಅನೌಪಚಾರಿಕವಾಗಿ ಕಲಿಯುವುದರಿಂದ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳಬಹುದು. ಸಾಂಸ್ಕೃತಿಕ ವಾತಾವರಣ ಕ್ಷಮಾ ಗುಣವನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ಕೇವಲ ಅಂಕಪಟ್ಟಿಗಳಿಗಷ್ಟೆ ಓದುವುದಕ್ಕೆ ಸೀಮಿತವಾಗುವುದು ಸರಿಯಲ್ಲ. ಪಠ್ಯೇತರ ಚಟುವಟಿಕೆಗಳ ಕಡೆಗೂ ಆಸಕ್ತಿಯಿಟ್ಟುಕೊಳ್ಳುವಂತೆ ಸಲಹೆ ನೀಡಿದರು.
ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೈ.ರವಿಕುಮಾರ್ ಹಾರ್ಮೊನಿಯಂ ನುಡಿಸುವ ಮೂಲಕ ಸಂಗೀತ ಸಂಭ್ರಮ ಉದ್ಘಾಟಿಸಿ ಮಾತನಾಡುತ್ತ ಒತ್ತಡದ ಜೀವನದಲ್ಲಿ ಇಂತಹ ಮನರಂಜನೆ ಕಾರ್ಯಕ್ರಮಗಳು ಮನಸ್ಸಿಗೆ ತುಸು ಮುದ ನೀಡುತ್ತವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದೊಂದು ಅಂಕಗಳಿಗೂ ಪ್ರಾಮುಖ್ಯತೆಯಿರುವುದರಿಂದ ಶಿಕ್ಷಣದ ಕಡೆ ಹೆಚ್ಚಿನ ಗಮನ ಕೊಡಬೇಕು. ಪಠ್ಯೇತರ ಭಾಗವಾಗಿ ಇಂತಹ ಸಂಭ್ರಮಗಳಲ್ಲಿ ಭಾಗವಹಿಸಬೇಕು. ಉಳಿದಂತೆ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡುವಂತೆ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಉಪ ಸಭಾಪತಿ ಇ.ಅರುಣ್ಕುಮಾರ್, ಮಹಿಳಾ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ಯಶೋಧಮ್ಮ, ಹಿಂದುಳಿದ ವರ್ಗಗಳ ವಸತಿ ನಿಲಯದ ಮೇಲ್ವಿಚಾರಕಿಯರಾದ ಲಕ್ಷ್ಮಿದೇವಿ, ದೀಪಾರಾಣಿ, ಸಕೀನಾಬಿ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತೆ ಓಂಕಾರಮ್ಮ ಶ್ರೀನಿವಾಸ್, ಎಸ್.ಜೆ.ಎಂ. ಚಿತ್ರಕಲಾ ಕಾಲೇಜಿನ ಪ್ರಾಚಾರ್ಯರಾದ ಸಿ.ಕಣ್ಮೇಶ್ ಇವರುಗಳು ವೇದಿಕೆಯಲ್ಲಿದ್ದರು.
ಎಂ.ಕೆ.ಹರೀಶ್ ಮತ್ತು ತಂಡ, ಕೆ.ಗಂಗಾಧರ್, ಹಿಮಂತರಾಜ್, ಜಗದೀಶ್ ಮತ್ತು ಸಂಗಡಿಗರು ಜಾನಪದ ಗೀತೆ, ಚಿತ್ರಗೀತೆ, ಭಾವಗೀತೆಗಳನ್ನು ಹಾಡಿ ವಿದ್ಯಾರ್ಥಿನಿಯರನ್ನು ರಂಜಿಸಿದರು. ಚನ್ನಬಸಪ್ಪ ಹಾರ್ಮೋನಿಯಂ ನುಡಿಸಿದರು. ಯಲ್ಲಪ್ಪ ಐಹೊಳೆ ಮತ್ತು ತಂಡದವರು ತಮಟೆ ಬಾರಿಸಿದರು.


