ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಾರ್ಮಿಕರ ಕಲ್ಯಾಣ ಹಿತದೃಷ್ಟಿಯಿಂದ ಪರಶುರಾಮಪುರ ಮತ್ತು ಚಳ್ಳಕೆರೆ ರಸ್ತೆಯ ಮಧ್ಯಭಾಗದಲ್ಲಿ 10 ಎಕರೆ ಜಾಗದಲ್ಲಿ 45 ಕೋಟಿ ವೆಚ್ಚದ ಕಾರ್ಮಿಕರ ಮಕ್ಕಳಿಗೆ ಶ್ರಮಿಕ ವಸತಿ ಶಾಲೆ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಹೇಳಿದರು.
ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ, ತಾಲೂಕು ಕಾರ್ಮಿಕ ಸಂಘಟನೆ ಮತ್ತು ಸಮೂಹ ಸಂಘಟನೆಗಳು ಆಯೋಜಿಸಿದ್ದ 45ನೇ ಮೇ ದಿನಾಚರಣೆ ಕಾರ್ಯಕ್ರಮಕ್ಕೆ ಶುಭ ಕೋರಿ ಮಾತನಾಡಿದರು. ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ 45 ಕೋಟಿ ವೆಚ್ಚದಲ್ಲಿ ಶ್ರಮಿಕ ವಸತಿ ಶಾಲೆಯನ್ನು ಪ್ರಾರಂಭಿಸುತ್ತಿದ್ದು, ಇದರಿಂದ ಪರಶುರಾಮಪುರ, ಚಳ್ಳಕೆರೆ, ಆಂದ್ರದ ಗಡಿಭಾಗದ ಕಾರ್ಮಿಕ ಮಕ್ಕಳಿಗೆ ಶಿಕ್ಷಣದ ಸೌಲಭ್ಯ ದೊರೆಯಲಿದೆ.
ಕಾರ್ಮಿಕರಿಗೆ ಅಗತ್ಯ ಇರುವ ಮೂಲ ಸೌಲಭ್ಯಗಳನ್ನು ನೀಡುವಲ್ಲಿ ನಮ್ಮ ಸರ್ಕಾರ ಬಂದವಾಗಿದೆ. ಕಾರ್ಮಿಕರು ಈ ದೇಶದ ಆರ್ಥಿಕ ವ್ಯವಸ್ಥೆಯ ಒಂದು ಭಾಗವಾಗಿದ್ದು, ಅವರ ಬೇಡಿಕೆಗಳನ್ನು ಈಡೇರಿಸಲು ಸದಾ ಶ್ರಮಿಸುವುದಾಗಿ ತಿಳಿಸಿದರು.
ಸಿಪಿಐ ರಾಜ್ಯ ಮಂಡಳಿ ಸದಸ್ಯ ಹಾಗೂ ಜಿಲ್ಲಾ ಗೌರವಾಧ್ಯಕ್ಷ ಸಿ.ವೈ. ಶಿವರುದ್ರಪ್ಪ, ಡ್ರೈವರ್, ಕಂಡಕ್ಟರ್ ಮತ್ತು ಲೋಡರ್ಸ್ ಯೂನಿಯನ್ ಅಧ್ಯಕ್ಷ ಪಿ.ತಿಪ್ಪೇರುದ್ರಪ್ಪ, ಸಿಪಿಐ ತಾಲೂಕು ಕಾರ್ಯದರ್ಶಿ ದೊಡ್ಡ ಉಳ್ಳಾರ್ತಿ ಕರಿಯಣ್ಣ,ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟೆ,ತಾಲ್ಲೂಕು ಅಧಿಕಾರಿ ಕುಸುಮ ಸೇರಿದಂತೆ ಹಲವಾರು ಮುಖಂಡರು ಇದ್ದರು.


