ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ‘ಪೇಮೆಂಟ್ ಸೀಟ್’ ಅಸಮಾಧಾನ ತೀವ್ರಗೊಂಡಿದ್ದು, ಮಾಜಿ ಸಚಿವ ಆರ್. ಬಿ. ತಿಮ್ಮಾಪುರ ಹಾಗೂ ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್. ಜಿ. ನಂಜಯ್ಯನಮಠ ಅವರದ್ದು ಎನ್ನಲಾದ ಸಂಭಾಷಣೆಯ ಆಡಿಯೋ ಕ್ಲಿಪ್ವೈರಲ್ ಆಗುವ ಮೂಲಕ ಹೊಸ ರಾಜಕೀಯ ರಾದ್ಧಾಂತ ಸೃಷ್ಟಿಸಿದೆ.
ಈ ಆಡಿಯೋ ತುಣುಕನ್ನು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ವಿರುದ್ಧ ಗಂಭೀರ ಮಟ್ಟದ ವಾಗ್ದಾಳಿ ನಡೆಸಿದ್ದಾರೆ.
ಸಚಿವ ಸ್ಥಾನಗಳ ಹರಾಜು: "ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನಗಳನ್ನು ಶಕ್ತ್ಯಾನುಸಾರ ಹರಾಜು ಮಾಡಲಾಗಿದೆ. ಹಣ ಕೊಟ್ಟವರಿಗೆ ಮಾತ್ರ ಮಂತ್ರಿಗಿರಿ ಭಾಗ್ಯ ಸಿಕ್ಕಿದೆ ಎಂಬುದಕ್ಕೆ ತಿಮ್ಮಾಪುರ ಮತ್ತು ನಂಜಯ್ಯನಮಠ ಅವರ ಆಡಿಯೋ ಸಂಭಾಷಣೆಯೇ ಸ್ಪಷ್ಟ ಸಾಕ್ಷಿ" ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಭ್ರಷ್ಟಾಚಾರಕ್ಕೆ ಪ್ರೋತ್ಸಾಹ: ಎಐಸಿಸಿ ನಾಯಕರ ಹೆಸರು ಉಲ್ಲೇಖವಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ, ಕಾಂಗ್ರೆಸ್ಹೈಕಮಾಂಡ್ ಹಂತದಲ್ಲೇ ಭ್ರಷ್ಟಾಚಾರಕ್ಕೆ ಉತ್ತೇಜನ ಸಿಗುತ್ತಿದೆ ಎಂಬುದು ಈ ಆಡಿಯೋದಿಂದ ಬಯಲಾಗಿದೆ ಎಂದು ಪ್ರತಿಪಾದಿಸಿದೆ.
ಆಂತರಿಕ ಭಿನ್ನಮತ ಬೀದಿಗೆ: ಹಿರಿಯ ನಾಯಕರಿಗೆ ಹಾಗೂ ಎಸ್ಸಿ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಅನ್ಯಾಯವಾಗಿದೆ ಎಂಬ ಅಸಮಾಧಾನ ಹೊರಬಿದ್ದಿದ್ದು, ಕಾಂಗ್ರೆಸ್ನ ಭಿನ್ನಮತ ಮತ್ತೊಮ್ಮೆ ಬೀದಿಗೆ ಬಂದಂತಾಗಿದೆ.
ಆಡಿಯೋ ವೈರಲ್ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಎಸ್. ಜಿ. ನಂಜಯ್ಯನಮಠ, "ಆಡಿಯೋದಲ್ಲಿರುವುದು ನನ್ನದೇ ಧ್ವನಿ. ಆ ಸಮಯದಲ್ಲಿ ನಾಯಕರಿಗೆ ಜಾಗ ಸಿಗಲಿಲ್ಲ ಎಂಬ ಬೇಸರ ಹಾಗೂ ಕೋಪದಿಂದ ಆ ರೀತಿ ಮಾತನಾಡಿದ್ದೆ" ಎಂದು ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ, ಈ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತಂಗಡಕಾಯಿಯಾಗಿದ್ದು, ಬಿಜೆಪಿಗೆ ಸರ್ಕಾರದ ವಿರುದ್ಧ ಹೋರಾಡಲು ಹೊಸ ಅಸ್ತ್ರ ಸಿಕ್ಕಂತಾಗಿದೆ.



