ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಸಕ್ತ ಸಾಲಿನಲ್ಲಿ 1ನೇ ತರಗತಿಯಿಂದ ಹಿಡಿದು ಉನ್ನತ ಹಾಗೂ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ಅರ್ಹ ಬೀಡಿ ಕಾರ್ಮಿಕರು, ಸಿನಿ ಕಲಾವಿದರು/ ಕಾರ್ಮಿಕರು ಮತ್ತು ಸುಣ್ಣದಕಲ್ಲು ಹಾಗೂ ಡೊಲೊಮೈಟ್ ಗಣಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಆರ್ಥಿಕ ನೆರವು (ಶಿಷ್ಯವೇತನ) ನೀಡಲು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ಬೆಂಗಳೂರಿನ ಕಾರ್ಮಿಕ ಕಲ್ಯಾಣ ಸಂಸ್ಥೆಯ ಉಪ ಆಯುಕ್ತರ ಕಚೇರಿಯು 2026-27ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿದೆ.
ಅರ್ಹ ವಿದ್ಯಾರ್ಥಿಗಳು ರಾಷ್ಟ್ರೀಯ ಸ್ಕಾಲರ್ಶಿಪ್ ಪೋರ್ಟಲ್ ಆದ scholarships.gov.in ತಾಣದ ಮೂಲಕವೇ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕೆಂದು ತಿಳಿಸಿದ್ದಾರೆ.
ಈ ವರ್ಷದ ಪ್ರಮುಖ ಬದಲಾವಣೆಯಾಗಿ ವಿದ್ಯಾರ್ಥಿಗಳಿಗೆ 'ಒನ್ ಟೈಮ್ ರಿಜಿಸ್ಟ್ರೇಷನ್'ಕಡ್ಡಾಯಗೊಳಿಸಲಾಗಿದ್ದು, ಇದಕ್ಕೆ ಆಧಾರ್ ಸಂಖ್ಯೆ ಅತ್ಯಗತ್ಯವಾಗಿದೆ. ಈ ಯೋಜನೆಯಡಿ ಶಿಷ್ಯವೇತನದ ಮೊತ್ತವನ್ನು ನೇರ ಬ್ಯಾಂಕ್ ವರ್ಗಾವಣೆ (ಡಿಬಿಟಿ) ಬದಲಿಗೆ ಕಡ್ಡಾಯವಾಗಿ ಆಧಾರ್ ಪೇಮೆಂಟ್ ಬ್ರಿಡ್ಜ್ (ಎಬಿಪಿ) ವ್ಯವಸ್ಥೆಯ ಮೂಲಕವೇ ಪಾವತಿಸಲಾಗುತ್ತದೆ.
ಆದ್ದರಿಂದ, ಅರ್ಜಿದಾರರು ಯಾವುದೇ ರಾಷ್ಟ್ರೀಕೃತ, ನಿಗಧಿತ ಸಹಕಾರಿ, ಗ್ರಾಮೀಣ ಅಥವಾ ಖಾಸಗಿ ಬ್ಯಾಂಕ್ಗಳಲ್ಲಿ ಸಿಬಿಎಸ್ ಮತ್ತು ನೆಫ್ಟ್ ಸೌಲಭ್ಯವಿರುವ ಹಾಗೂ ಆಧಾರ್ ಲಿಂಕ್ ಆಗಿರುವ ವೈಯಕ್ತಿಕ ಉಳಿತಾಯ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ.
ಇದರೊಂದಿಗೆ ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಳ್ಳಲು ಕಲ್ಯಾಣ ಆಯುಕ್ತರಿಗೆ ಸಮ್ಮತಿ ಪತ್ರ ನೀಡಬೇಕಾಗುತ್ತದೆ. ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ಆದಾಯ ಪ್ರಮಾಣ ಪತ್ರ ಹಾಗೂ ಪೋಷಕರ ಕಾರ್ಮಿಕ ಗುರುತಿನ ಚೀಟಿಯನ್ನು (ಬೀಡಿ/ಗಣಿ ಕಾರ್ಮಿಕರಿಗೆ ಆಯಾ ಉದ್ಯೋಗದಾತರು ನೀಡಿದ ಐಡಿ ಮತ್ತು ಸಿನೆ ಕಾರ್ಮಿಕರಿಗೆ ಈ ಕಚೇರಿಯಿಂದ ನೀಡಲಾದ ಐಡಿ) ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕಾಗುತ್ತದೆ.
ತರಗತಿವಾರು ಸಿಗುವ ಧನಸಹಾಯದ ವಿವರ: ಈ ಯೋಜನೆಯಡಿ 1 ರಿಂದ 4 ನೇ ತರಗತಿ ವಿದ್ಯಾರ್ಥಿಗಳಿಗೆ ಉಡುಪು ಹಾಗೂ ಪುಸ್ತಕಗಳಿಗಾಗಿ ರೂ.1,000, 5 ರಿಂದ 8 ನೇ ತರಗತಿಯವರಿಗೆ ರೂ.1,500, 9 ಮತ್ತು 10 ನೇ ತರಗತಿಯವರಿಗೆ ರೂ.2,000 ಹಾಗೂ 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ರೂ.3,000 ಆರ್ಥಿಕ ನೆರವು ಸಿಗಲಿದೆ.
ಐಟಿಐ, ಪಾಲಿಟೆಕ್ನಿಕ್ ಹಾಗೂ ಬಿ.ಎಸ್ಸಿ (ಕೃಷಿ) ಒಳಗೊಂಡಂತೆ ಸಾಮಾನ್ಯ ಪದವಿ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ ರೂ.6,000 ಮತ್ತು ವೃತ್ತಿಪರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರೂ.25,000 ವರೆಗೆ ಶಿಷ್ಯವೇತನ ದೊರೆಯಲಿದೆ.
ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ: ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲಾ-ಕಾಲೇಜುಗಳ ಮುಖ್ಯಸ್ಥರು ರಾಷ್ಟ್ರೀಯ ಸ್ಕಾಲರ್ಶಿಪ್ ಪೋರ್ಟಲ್ ನಲ್ಲಿ ತಮ್ಮ ಸಂಸ್ಥೆಯನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಮತ್ತು ಹೆಡ್ ಆಫ್ ಇನ್ಸ್ಟ್ಯೂಟ್ (HoI ID) ಹಾಗೂ ಇನ್ಸ್ಟ್ಯೂಟ್ ನೋಡಲ್ ಆಫೀಸರ್ (INO ID) ಐಡಿಗಳನ್ನು ಸೃಜಿಸಬೇಕಿರುತ್ತದೆ. ವಿದ್ಯಾರ್ಥಿಗಳು ಸಲ್ಲಿಸುವ ಅರ್ಜಿಗಳನ್ನು ಪರಿಶೀಲಿಸಿ ನಿಗದಿತ ದಿನಾಂಕದೊಳಗೆ ಆನ್ ಲೈನ್ ಮೂಲಕವೇ ಅನುಮೋದಿಸುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದೆ.
ಸಂಸ್ಥೆಗಳು ಸಕಾಲದಲ್ಲಿ ನೋಂದಣಿ ಮಾಡಿಕೊಳ್ಳದಿದ್ದರೆ ಅಥವಾ ವಿದ್ಯಾರ್ಥಿಗಳ ಅರ್ಜಿಗಳನ್ನು ಸಲ್ಲಿಸದಿದ್ದರೆ, ಅರ್ಹ ವಿದ್ಯಾರ್ಥಿಗಳು ಈ ಸೌಲಭ್ಯದಿಂದ ವಂಚಿತರಾಗಬೇಕಾಗುತ್ತದೆ ಮತ್ತು ಇದಕ್ಕೆ ಆಯಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರೇ ನೇರ ಹೊಣೆಯಾಗುತ್ತಾರೆ ಎಂದು ಆಯುಕ್ತರು ಎಚ್ಚರಿಸಿದ್ದಾರೆ.
ಪ್ರಸಕ್ತ ವರ್ಷದ ಪ್ರಮುಖ ಬದಲಾವಣೆಗಳು ಮತ್ತು ಕೊನೆಯ ದಿನಾಂಕದಲ್ಲಿ ಈ ಬಾರಿ ವಿದ್ಯಾರ್ಥಿ ಸ್ನೇಹಿ ಬದಲಾವಣೆಗಳನ್ನು ತರಲಾಗಿದ್ದು, ವಿದ್ಯಾರ್ಥಿಗಳು ಒಂದೇ ಬಾರಿ ಒಂದು ಮೆರಿಟ್ ಆಧಾರಿತ ಹಾಗೂ ಒಂದು ಅಥವಾ ಅದಕ್ಕಿಂತ ಹೆಚ್ಚು ಕಲ್ಯಾಣ ಆಧಾರಿತ ಯೋಜನೆಗಳ ಲಾಭವನ್ನು ಒಟ್ಟಿಗೆ ಪಡೆಯಬಹುದು. ಅಲ್ಲದೆ ಅರ್ಜಿ ಸಲ್ಲಿಸುವಾಗ ವಿವರಗಳು ಹಾಗೂ ಶುಲ್ಕದ ಮಾಹಿತಿಗಳನ್ನು ಒಮ್ಮೆ ದಾಖಲಿಸಿದರೆ, ಅವು ಇತರ ಯೋಜನೆಗಳ ಅರ್ಜಿಗಳಿಗೂ ಸ್ವಯಂಚಾಲಿತವಾಗಿ ಭರ್ತಿಯಾಗಲಿವೆ.
ಮೆಟ್ರಿಕ್ ಪೂರ್ವ ಯೋಜನೆಗೆ (1 ರಿಂದ 10ನೇ ತರಗತಿ) ಅರ್ಜಿ ಸಲ್ಲಿಸಲು 2026ರ ಆಗಸ್ಟ್ 31 ಕೊನೆಯ ದಿನವಾಗಿದ್ದು, ಮೆಟ್ರಿಕ್ ನಂತರದ ಯೋಜನೆಗಳಿಗೆ (11ನೇ ತರಗತಿ ಮತ್ತು ಅದಕ್ಕಿಂತ ಮೇಲ್ಪಟ್ಟ ಕೋರ್ಸ್ ಗಳಿಗೆ) ಅರ್ಜಿ ಸಲ್ಲಿಸಲು 2026ರ ಅಕ್ಟೋಬರ್ 31 ಕಡೆ ದಿನವಾಗಿದೆ.
ಕೊನೆಯ ದಿನಗಳ ವೆಬ್ ಸೈಟ್ ದಟ್ಟಣೆ ಮತ್ತು ತರಾತುರಿಯನ್ನು ತಪ್ಪಿಸಲು ಅರ್ಹರು ತಕ್ಷಣವೇ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗಾಗಿ [email protected] ಇ-ಮೇಲ್ ಐಡಿಗೆ ಸಂದೇಶ ಕಳುಹಿಸಬಹುದು ಅಥವಾ ಕಚೇರಿಯ ದೂರವಾಣಿ ಸಂಖ್ಯೆ 080-23471406 ಹಾಗೂ ಮೊಬೈಲ್ ಸಂಖ್ಯೆ 9148240554 ಅನ್ನು ಸಂಪರ್ಕಿಸಬಹುದಾಗಿದೆ.



