ಚಂದ್ರವಳ್ಳಿ ನ್ಯೂಸ್, ಹಿರಿಯೂರು: ಅಖಿಲ ಭಾರತ ಸಮನ್ವಯ ಶೇಂಗಾ ಬೆಳೆ ಯೋಜನೆಯಡಿ ಚಳ್ಳಕೆರೆ ತಾಲ್ಲೂಕಿನ ಗುಡಿಹಳ್ಳಿ, ಎತ್ತಿನಟ್ಟಿ ಹಾಗೂ ಗೊಲ್ಲಹಳ್ಳಿ ಗ್ರಾಮದ ರೈತರಿಗೆ ಶೇಂಗಾ ಬೆಳೆಯ ವೈಜ್ಞಾನಿಕ ತರಬೇತಿ ಮತ್ತು 'ಕೆ-1812' ಹೊಸ ತಳಿಯ ಶೇಂಗಾಕಾಯಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇಳುವರಿ ಹೆಚ್ಚಳಕ್ಕೆ ಪೋಷಕಾಂಶ ಹಾಗೂ ಕಳೆ ನಿರ್ವಹಣೆ ಅಗತ್ಯ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರು ಹಾಗೂ ಸಹ ಸಂಶೋಧನಾ ನಿರ್ದೇಶಕರು (ಪ್ರಭಾರೆ) ಡಾ. ಧನಂಜಯ ಮಾತನಾಡಿ, "ಶೇಂಗಾ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಸೂಕ್ತ ಕಳೆ ನಿರ್ವಹಣೆ, ಜಿಪ್ಸಂ ಬಳಕೆಯ ಮಹತ್ವ ಹಾಗೂ ಸುಧಾರಿತ ಬೇಸಾಯ ಕ್ರಮಗಳು ಅತ್ಯಗತ್ಯ" ಎಂದು ರೈತರಿಗೆ ವಿವರವಾಗಿ ಮನವರಿಕೆ ಮಾಡಿಕೊಟ್ಟರು.
ಹೊಸ ತಳಿ 'ಕೆ-1812' ವಿಶೇಷತೆ: ಶೇಂಗಾ ತಳಿ ವಿಜ್ಞಾನಿ ಡಾ. ಮೋಹನ್ ಕುಮಾರ್ ಎನ್. ವಿ. ಮಾತನಾಡಿ, ರೈತರ ಜಮೀನಿನಲ್ಲಿ 'ಕೆ-1812' ಹೊಸ ಶೇಂಗಾ ತಳಿಯ ಪ್ರಾತ್ಯಕ್ಷಿಕೆ ಕೈಗೊಳ್ಳುತ್ತಿರುವುದರ ಉದ್ದೇಶ ಹಾಗೂ ಈ ತಳಿಯ ಗುಣವಿಶೇಷತೆಗಳ ಬಗ್ಗೆ ಬೆಳಕು ಚೆಲ್ಲಿದರು.
ಅಖಿಲ ಭಾರತ ಸಮನ್ವಯ ಶೇಂಗಾ ಬೆಳೆ ಪ್ರಾಯೋಜನೆಯ ಮುಖ್ಯಸ್ಥರು ಹಾಗೂ ಬೇಸಾಯ ತಜ್ಞರಾದ ಡಾ. ಕುಮಾರ್ ನಾಯ್ಕ್ ಎ. ಹೆಚ್. ಮಾತನಾಡಿ, ಸಂಶೋಧನೆಯ ಉದ್ದೇಶಗಳು, ಇಲಾಖೆಯಿಂದ ಬಿಡುಗಡೆಯಾಗಿರುವ ತಾಂತ್ರಿಕತೆಗಳು ಮತ್ತು ಶೇಂಗಾ ಬೆಳೆಗೆ ಸೂಕ್ತವಾದ ಕಳೆನಾಶಕಗಳ ಬಳಕೆ ಕುರಿತು ರೈತರಿಗೆ ಮಾಹಿತಿ ನೀಡಿದರು.



