ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತೋಟಗಾರಿಕೆ ಇಲಾಖೆಯ ವತಿಯಿಂದ 2026-27ನೇ ಸಾಲಿನಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಅರ್ಹ ರೈತರಿಂದ ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ (ರಾಷ್ಟ್ರೀಯ ತೋಟಗಾರಿಕೆ ಮಿಷನ್) ಅಡಿ ಹೊಸದಾಗಿ ಬಾಳೆ, ದಾಳಿಂಬೆ, ಹುಣಸೆ, ಡ್ರಾಗನ್ ಫ್ರೂಟ್ ಮತ್ತು ಕಾಳುಮೆಣಸು ಬೆಳೆಯಲು, ಕೃಷಿ ಹೊಂಡ ನಿರ್ಮಾಣ, ಪಾಲಿ ಮನೆ, ಪ್ಲಾಸ್ಟಿಕ್ ಮಲ್ಚಿಂಗ್, ಎರೆಹುಳು ಘಟಕ, ಜೇನು ಸಾಕಾಣೆ ಘಟಕ, ಈರುಳ್ಳಿ ಸಂಗ್ರಹಣಾ ಘಟಕ, ಅಣೆಬೆ ಘಟಕಗಳಿಗೆ ಸಹಾಯಧನ ನೀಡಲಾಗುವುದು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಹೊಸದಾಗಿ ತೋಟಗಾರಿಕೆ ಬೆಳೆಗಳಾದ ನಿಂಬೆ, ನುಗ್ಗೆ, ಮಾವು, ಸಪೋಟ, ಹುಣಸೆ, ದಾಳಿಂಬೆ, ಗುಲಾಬಿ, ನೇರಳೆ, ಡ್ರಾಗನ್ ಫ್ರೂಟ್, ಕಾಳುಮೆಣಸು, ಕರಿಬೇವು ಮತ್ತು ಬದುಗಳಲ್ಲಿ ತೆಂಗು ಇತ್ಯಾದಿ ಬೆಳೆಗಳನ್ನು (ಅಡಿಕೆ ಮತ್ತು ಬಾಳೆ ಹೊರತುಪಡಿಸಿ) ಹೊಸದಾಗಿ ಬೆಳೆಯಲು ಕಾರ್ಯಕ್ರಮದ ಮಾರ್ಗಸೂಚಿಯನ್ವಯ ಅರ್ಹ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುವುದು.
ನಿಗದಿತ ಅರ್ಜಿ ನಮೂನೆಗಳನ್ನು ಚಿತ್ರದುರ್ಗದ ತೋಟಗಾರಿಕೆ ಇಲಾಖೆಯ ಕಚೇರಿಯಿಂದ ಪಡೆಯಬಹುದು. ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಜೂನ್ 15 ಕೊನೆಯ ದಿನಾಂಕವಾಗಿದೆ.
ತದನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಈ ಹಿಂದೆ ತೋಟಗಾರಿಕೆ ಇಲಾಖೆಯಿಂದ ಯಾವುದೇ ಸಹಾಯಧನ ಪಡೆಯದೇ ಇರುವ ಫಲಾನುಭವಿಗಳಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ, ಮಹಿಳೆಯರಿಗೆ ಮತ್ತು ಅಂಗವಿಕಲರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.



