ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕಲೆಗಾಗಿ ಜೀವನವನ್ನೇ ಮುಡುಪಾಗಿಟ್ಟಿರುವ ಕಲಾವಿದರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಕಡ್ಲೆಗುದ್ದು ಆಂಜನೇಯ ಸ್ವಾಮಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಾ.ಕೆ.ಎನ್.ಮಹೇಶ್ ಹೇಳಿದರು.
ಬಹುಮುಖಿ ಕಲಾ ಕೇಂದ್ರ ಚಿತ್ರದುರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದೊಂದಿಗೆ ಕಡ್ಲೆಗುದ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಕನ್ನಡ ಗೀತಗಾಯನ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ಕಲೆ ಸಂಸ್ಕೃತಿಯ ತವರೂರು ಕನ್ನಡ ನಾಡಿನಲ್ಲಿ ಕಲಾವಿದರನ್ನು ಗೌರವಿಸುವ ಸಂಸ್ಕøತಿಯಿದೆ. ಟಿವಿ. ಮತ್ತು ಮೊಬೈಲ್ ಲೋಕದಲ್ಲಿ ಮುಳುಗಿರುವ ಇಂದಿನ ಯುವ ಪೀಳಿಗೆ ಜನಪದ ಕಲಾ ಸಂಸ್ಕೃತಿಯನ್ನು ಮರೆಯುತ್ತಿದೆ. ಇಂತಹ ಸಂದಿಗ್ದ ಕಾಲದಲ್ಲಿ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸುವ ಗುಣವನ್ನು ಚಿಕ್ಕಂದಿನಿಂದಲೆ ವಿದ್ಯಾರ್ಥಿಗಳಲ್ಲಿ ಬೆಳೆಸಿ ಜಾನಪದ, ಭಾವಗೀತೆ, ರಂಗಭೂಮಿ, ಬಯಲಾಟ, ತತ್ವಪದಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಬೇಕೆಂದು ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾಯಕ ಹರೀಶ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಪರಿಚಯಿಸುವುದು ಕಲಾವಿದರ ಜವಾಬ್ದಾರಿ, ಪ್ರತಿಭಾನ್ವಿತ ಕಲಾವಿದರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವಲ್ಲಿ ಬಹುಮುಖಿ ಕಲಾ ಕೇಂದ್ರ ಪಾತ್ರ ಅನನ್ಯ ಎಂದು ಗುಣಗಾನ ಮಾಡಿದರು.
ಬಹುಮುಖಿ ಕಲಾ ಕೇಂದ್ರದ ಕಾರ್ಯದರ್ಶಿ ಮಧು ಮಾತನಾಡಿ ಬಹುಮುಖಿ ಕಲಾ ಕೇಂದ್ರವು ಸಮಾಜಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಇಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರುತ್ತಿದೆ. ಕಡ್ಲೆಗುದ್ದು ಗ್ರಾಮದಲ್ಲಿ ಕನ್ನಡ ಗೀತ ಗಾಯನ ಸಂಭ್ರಮ ಏರ್ಪಡಿಸಿ ವಿದ್ಯಾರ್ಥಿಗಳಲ್ಲಿಯೂ ಕಲೆ ಬಗ್ಗೆ ಆಸಕ್ತಿ ಮೂಡಿಸಿ ಅವರಲ್ಲಿರುವ ಪ್ರತಿಭೆಯನ್ನು ಹೊರ ತರುವುದು ನಮ್ಮ ಉದ್ದೇಶ ಎಂದರು.
ಎಂ.ಕೆ.ಹರೀಶ್, ನನ್ನಿವಾಳ ಹನುಮಂತಪ್ಪ, ಜಯಣ್ಣ, ಚನ್ನಬಸಪ್ಪ, ಶ್ರೀನಿವಾಸ್ಮೂರ್ತಿ ಹಾಗೂ ಸಂಗಡಿಗರು ಜನಪದ ಗೀತೆ, ಭಾವಗೀತೆ, ಬಯಲಾಟ, ರಂಗ ಗೀತೆಗಳು ತತ್ವಪದಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.
ಗ್ರಾಮ ಪಂಚಾಯಿತಿ ಸದಸ್ಯೆ ಹೊನ್ನಮ್ಮ, ಎಸ್.ಡಿ.ಎಂ.ಸಿ. ಅಧ್ಯಕ್ಷ ಭೀಮಣ್ಣ, ಮುಖ್ಯ ಶಿಕ್ಷಕಿ ಉಷ, ಶಿಕ್ಷಕರುಗಳಾದ ಮಂಜುನಾಥ್, ಕರಿಬಸಪ್ಪ, ಸುಲೋಚನ, ಪವಿತ್ರ, ರೇಖಾ, ಮಂಜಪ್ಪ, ನಟರಾಜ್, ನಾಗರಾಜ್, ಮಹಾಂತೇಶ್ ಇನ್ನು ಅನೇಕರು ಗೀತ ಗಾಯನ ಸಂಭ್ರಮದಲ್ಲಿ ಹಾಜರಿದ್ದರು.



