ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘವು ತನ್ನ 40ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಸುತ್ತಿರುವ ಮಾಸಿಕ ಗಮಕ ಕಾರ್ಯಕ್ರಮದ 33ನೇ ಅದಿವೇಶನವು ಭಾನುವಾರ ಸಂಜೆ ಇಲ್ಲಿನ ಜೆಸಿಆರ್ ಬಡಾವಣೆಯ ಶ್ರೀ ಗಣಪತಿ ದೇವಾಲಯದ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಡಿನ ಸುಪ್ರಸಿದ್ಧ ಭರತನಾಟ್ಯ ಕಲಾವಿದ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಎಸ್. ಆರ್ ಶಿವಪ್ರಕಾಶ್ ಮಾತನಾಡುತ್ತಾ ಗಮಕ ಕಲೆಯುತ್ತ ಚಿಕ್ಕ ವಯಸ್ಸಿನ ಪ್ರತಿಭೆಗಳನ್ನು ಆಕರ್ಷಿಸಲು ವಿವಿಧ ಹಂತದ ಪರೀಕ್ಷೆಗಳನ್ನು ನಡೆಸಬೇಕು. ಅವುಗಳು ಮತ್ತು ಪ್ರಶಸ್ತಿ ಪತ್ರದ ಆಕರ್ಷಣೆಯಿಂದ ಮಕ್ಕಳು ಹೆಚ್ಚು ಹೆಚ್ಚಾಗಿ ಈ ವಿದ್ಯೆಯನ್ನು ಕಲಿಯಲು ಬರಬಹುದು. ನನಗು ಗಮಕ ಕಲೆಗೂ ಶ್ರೀ ಶೇಷಾಚಲಯ್ಯ ಚಂದ್ರಶೇಖರಯ್ಯ ಅವರ ಕಾಲದಿಂದಲೂ ಆತ್ಮೀಯ ಬಾಂಧವ್ಯವಿತ್ತು. ಈ ಸಂಘಕ್ಕೆ ಉತ್ತರರೋತ್ತರ ಯಶಸ್ಸು ಕೋರುತ್ತೇನೆ ಎಂದು ಹೇಳಿದರು. ಡಾ. ನಂದಿನಿ ಶಿವಪ್ರಕಾಶ್ ಈ ಸಭೆಯಲ್ಲಿ ಉಪಸ್ಥಿತರಿದ್ದರು.
ತೊರವೇ ರಾಮಾಯಣದ ಅಳುಕುವರೇ ಸುವ್ರರತೆಯರ್ ಅಗ್ನಿಗೆ ಎಂಬ ಪುರಾಣ ಪ್ರಸಂಗದ ವಾಚನ ವ್ಯಾಖ್ಯಾನಗಳನ್ನು ಹೆಗ್ಗೋಡಿನ ಗಮಕಿ ಎಚ್.ಆರ್. ಅಶೋಕ್ ಕುಮಾರ್ ಅವರು ಮತ್ತು ಸಾಗರದ ವಕೀಲರದ ಗಮಕಿ ಶ್ರಾವ್ಯ ಅವರು ನಡೆಸಿಕೊಟ್ಟರು. ಎಚ್. ಆರ್. ಅಶೋಕ್ ಕುಮಾರ್ ಅವರ ಅವರು ಕ್ಲಿಷ್ಟ ರೀತಿಯ ತೊರವೇ ರಾಮಾಯಣದ ವಾಚನ ಶ್ರೋತೃಗಳು ತಮ್ಮಿಂದ ತಾವೇ ಅರ್ಥ ಮಾಡಿಕೊಂಡು ಆನಂದಿಸುವಷ್ಟು ಸುಲಲಿತವೂ ಸುಲಭವೂ ಆಗಿದ್ದಿತು.
ಗಮಕ ವಾಚನದಲ್ಲಿ ಅವರು ಶಾಸ್ತ್ರೀಯ ಸಂಗೀತದ ಹಲವು ರಾಗಗಳನ್ನು ಯಕ್ಷಗಾನದ ಕೆಲವು ಮಟ್ಟುಗಳನ್ನು ಅಳವಡಿಸಿಕೊಂಡಿದ್ದು ಸೈ ಸೈ ಎನ್ನುವಂತಿತ್ತು.
ಇದಕ್ಕೆ ಸರಿಸಾಟಿಯಾಗಿ ಗಮಕಿ ಶ್ರಾವ್ಯಾ ರಮ ಅವರ ವ್ಯಾಖ್ಯಾನವಂತೂ ಭೂತ ,ವರ್ತಮಾನ, ಭವಿಷ್ಯತ್ತುಗಳ ಪ್ರಸಂಗಗಳನ್ನು ಸಮರಸವಾಗಿ ಹೊಂದಿಸುವಂತಿತ್ತು. ಜೊತೆಗೆ ಅವರು ನೀಡಿದ ಸಮಕಾಲೀನ ವಿದ್ಯಮಾನದ ಒಳಹುಗಳು ಪ್ರಶ್ನಿಸುವಂತೆಯೇ ಇರಲಿಲ್ಲ.
ಕಾರ್ಯಕ್ರಮವು ಕುಮಾರಿ ಅನನ್ಯ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶಶಿಧರ ಶಾನುಭೋಗ್ ಸ್ವಾಗತಿಸಿದರು. ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ಕೆ. ಆರ್ ರಮಾದೇವಿ ವೆಂಕಣ್ಣಾಚಾರ್ ವಹಿಸಿದ್ದರು. ವಿದುಷಿ ಮೀನಾಕ್ಷಿ ಭಟ್ ವಂದಿಸಿದರು. ಬಿ ಎಲ್ ಉಮಾ ಕಾರ್ಯಕ್ರಮ ನಿರೂಪಿಸಿದರು. ದೇವಸ್ಥಾನದ ವತಿಯಿಂದ ಕರ್ನಾಟಕ ಕಲಾಸಿ ಪ್ರಶಸ್ತಿ ಪುರಸ್ಕೃತರಾದ ಶಿವಪ್ರಕಾಶ್ ಅವರನ್ನು ಗೌರವಿಸಲಾಯಿತು.
ಮುಂದಿನ ಮಾಸಿಕ ಕಾರ್ಯಕ್ರಮವು ಬರುವ 24 /5/ 2026ರ ಭಾನುವಾರ ಸಂಜೆ 6 ಗಂಟೆಗೆ ಜೆ ಸಿ ಆರ್ ಗಣಪತಿ ದೇವಾಲಯದ ಸಭಾಂಗಣದಲ್ಲಿ ನಡೆಯಲಿದೆ.
ಚಿಕ್ಕಮಂಗಳೂರಿನ ಶಶಿಕಲಾ ಮತ್ತು ತಂಡದವರು ಕುವೆಂಪು ರಾಮಾಯಣ ದರ್ಶನಂ ಮಹಾಕಾವ್ಯದ ರಾವಣನ ಕನಸು ಕಥಾ ಭಾಗವನ್ನು ವಾಚನ ವ್ಯಾಖ್ಯಾನ ಮಾಡುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.


