ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಅಡಿಯಲ್ಲಿ ಜಿಲ್ಲೆಯ ಪಡಿತರ ಚೀಟಿದಾರರಿಗೆ ಆಗಸ್ಟ್-2026 ಹಾಗೂ ಸೆಪ್ಟೆಂಬರ್-2026ರ ಒಟ್ಟು ಎರಡು ತಿಂಗಳ ಆಹಾರ ಧಾನ್ಯಗಳನ್ನು ಆಗಸ್ಟ್ ತಿಂಗಳಿನಲ್ಲೇ ಒಟ್ಟಿಗೆ ವಿತರಿಸಲು ಸರ್ಕಾರ ನಿರ್ದೇಶನ ನೀಡಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಪಡಿತರದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ಪಡೆಯುವ ಸಮಯದಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಗಳಿಗೆ ಎರಡು ಬಾರಿ ಪ್ರತ್ಯೇಕವಾಗಿ ಬಯೋಮೆಟ್ರಿಕ್ ನೀಡಿ ಪಡಿತರ ಪಡೆದುಕೊಳ್ಳಬೇಕಾಗಿದೆ.
ಎರಡೂ ತಿಂಗಳುಗಳ ಒಟ್ಟು ವಿತರಣೆಯ ವಿವರ ಇಂತಿದೆ. ಅಂತ್ಯೋದಯ ಪಡಿತರ ಚೀಟಿ (AAY) ಹೊಂದಿರುವ ಪ್ರತಿಯೊಂದು ಕಾರ್ಡ್ಗೆ ಒಟ್ಟು 42 ಕೆಜಿ ರಾಗಿ (21 ಕೆಜಿ + 21 ಕೆಜಿ) ಹಾಗೂ 28 ಕೆಜಿ ಅಕ್ಕಿ (14 ಕೆಜಿ + 14 ಕೆಜಿ) ಸಿಗಲಿದೆ.
ಕೇಂದ್ರ ಆದ್ಯತಾ ಪಡಿತರ ಚೀಟಿ (PHH) ಹೊಂದಿರುವ ಕುಟುಂಬಗಳ ಪ್ರತಿ ಸದಸ್ಯರಿಗೆ ಒಟ್ಟು 06 ಕೆಜಿ ರಾಗಿ (03 ಕೆಜಿ + 03 ಕೆಜಿ) ಹಾಗೂ 04 ಕೆಜಿ ಅಕ್ಕಿ (02 ಕೆಜಿ + 02 ಕೆಜಿ) ನೀಡಲಾಗುತ್ತದೆ. ಹಾಗೆಯೇ, ರಾಜ್ಯ ಆದ್ಯತಾ ಪಡಿತರ ಚೀಟಿ (PHH) ಹೊಂದಿರುವ ಕುಟುಂಬಗಳ ಪ್ರತಿ ಸದಸ್ಯರಿಗೆ ಒಟ್ಟು 10 ಕೆಜಿ ಅಕ್ಕಿ (05 ಕೆಜಿ + 05 ಕೆಜಿ) ವಿತರಿಸಲಾಗುವುದು.
ಯಾವುದೇ ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿ/ಮಾಲೀಕರು ಕಡಿಮೆ ಪ್ರಮಾಣದ ಪಡಿತರವನ್ನು ವಿತರಣೆ ಮಾಡಿದಲ್ಲಿ ಅಥವಾ ಹಣ ಕೇಳಿದಲ್ಲಿ ರಾಜ್ಯ ಸಹಾಯವಾಣಿ ಸಂಖ್ಯೆ 1967ಗೆ ಹಾಗೂ ಜಂಟಿ ನಿರ್ದೇಶಕರ ಕಚೇರಿಗೆ/ತಹಶೀಲ್ದಾರ್ ಕಚೇರಿಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.



