ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಸಿದ್ಧ ಬಿಸ್ಲೇರಿ ಇಂಟರ್ನ್ಯಾಷನಲ್ ಸಂಸ್ಥೆಯು ಕರ್ನಾಟಕದಲ್ಲಿ ತನ್ನ ಉದ್ಯಮ ವಿಸ್ತರಣೆಗೆ ಮುಂದಾಗಿದ್ದು, ಇದರಿಂದ ರಾಜ್ಯದಲ್ಲಿ ಸುಮಾರು 2,000 ಹೊಸ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಇಂದು ಬಿಸ್ಲೇರಿ ಇಂಟರ್ನ್ಯಾಷನಲ್ ಸಂಸ್ಥೆಯ ಸಿಇಒ ಎಂ. ಆಂಜೆಲೋ ಜಾರ್ಜ್ ಹಾಗೂ ತಯಾರಿಕಾ ವಿಭಾಗದ ನಿರ್ದೇಶಕ ಲೋಚನ್ ಮಾಥುರ್ ಅವರನ್ನೊಳಗೊಂಡ ನಿಯೋಗ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾಗಿ ವಿಸ್ತರಣಾ ಯೋಜನೆಗಳ ಕುರಿತು ಚರ್ಚಿಸಿತು. ಈ ಸಂದರ್ಭದಲ್ಲಿ ಘಟಕಗಳ ಸ್ಥಾಪನೆಗೆ ಚಾಮರಾಜನಗರ ಮತ್ತು ವಿಜಯಪುರ ಜಿಲ್ಲೆಗಳು ಅತ್ಯಂತ ಸೂಕ್ತ ಹಾಗೂ ಆಕರ್ಷಕ ತಾಣಗಳಾಗಿವೆ ಎಂದು ಸಚಿವರು ಸಲಹೆ ನೀಡಿದರು.
ಬಿಸ್ಲೇರಿ ಸಂಸ್ಥೆಯು ತಾನು ಬಳಸುವ ನೀರಿಗಿಂತ 3.5 ಪಟ್ಟು ಹೆಚ್ಚು ನೀರನ್ನು ಮರುಪೂರಣ ಮಾಡುತ್ತಿರುವುದು ಹಾಗೂ ಬಳಸಿದ ಪ್ಲಾಸ್ಟಿಕ್ನಲ್ಲಿ ಶೇ. 114 ರಷ್ಟು ಪ್ಲಾಸ್ಟಿಕ್ ಪುನರ್ಬಳಕೆ ಮಾಡುತ್ತಿರುವ ಸಂಸ್ಥೆಯ ಪರಿಸರಸ್ನೇಹಿ ಕಾರ್ಯವನ್ನು ಸಚಿವರು ಶ್ಲಾಘಿಸಿದರು. ಸುಸ್ಥಿರತೆ ಮತ್ತು ಪರಿಸರ ಕಾಳಜಿಯೊಂದಿಗೆ ಬೆಳೆಯುವ ಕೈಗಾರಿಕೆಗಳಿಗೆ ಸೂಕ್ತ ಬೆಂಬಲ ನೀಡಲು ಕರ್ನಾಟಕ ಸರ್ಕಾರ ಸದಾ ಬದ್ಧವಾಗಿದೆ ಎಂದು ಎಂ.ಬಿ. ಪಾಟೀಲ್ ಭರವಸೆ ನೀಡಿದರು.



