ಚಂದ್ರವಳ್ಳಿ ನ್ಯೂಸ್, ಮೈಸೂರು:
ನಾಡಿನ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಕಾಯಕ ಸಮಾಜಗಳ ಕೊಡುಗೆ ಅನನ್ಯವಾಗಿದ್ದು, ಶೋಷಿತ ಹಾಗೂ ತಳಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಬಿಜೆಪಿ ಸದಾ ಬದ್ಧವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು 'ಕಾಯಕ ಸಮುದಾಯಗಳ ಒಕ್ಕೂಟ'ದ ವತಿಯಿಂದ ಆಯೋಜಿಸಲಾಗಿದ್ದ ನೂತನ ವಿಧಾನಪರಿಷತ್ಸದಸ್ಯ ಶ್ರೀ ಆರ್. ರಘು ಕೌಟಿಲ್ಯ ಅವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಕೇವಲ ಘೋಷಣೆಯಲ್ಲ!:
ಪ್ರಧಾನಿ ನರೇಂದ್ರ ಮೋದಿ ಅವರ ಆಶಯವನ್ನು ಸ್ಮರಿಸಿದ ಬಿ.ಯೈ. ವಿಜಯೇಂದ್ರ, ಪಕ್ಷದ ಸಿದ್ಧಾಂತವನ್ನು ಹೀಗೆ ಪುನರುಚ್ಚರಿಸಿದರು.ಅಂತ್ಯೋದಯಕ್ಕೆ ಬದ್ಧತೆ: 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಎಂಬುದು ಕೇವಲ ಘೋಷಣೆಯಲ್ಲ, ಅದು ತಳಸಮುದಾಯಗಳ ಸಬಲೀಕರಣಕ್ಕಾಗಿ ಪಕ್ಷ ಹೊಂದಿರುವ ದೃಢ ಸಂಕಲ್ಪವಾಗಿದೆ.
ರಾಜಕೀಯ ಪ್ರಾತಿನಿಧ್ಯ: ಮಡಿವಾಳ ಸಮಾಜದ ಮುಖಂಡರಾದ ಶ್ರೀ ರಘು ಕೌಟಿಲ್ಯ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡುವ ಮೂಲಕ ಬಿಜೆಪಿ ಶೋಷಿತ ವರ್ಗಗಳಿಗೆ ಸೂಕ್ತ ಗೌರವ ಹಾಗೂ ರಾಜಕೀಯ ಪ್ರಾತಿನಿಧ್ಯ ನೀಡುವ ಕೆಲಸ ಮಾಡಿದೆ.
ದಿಗ್ಗಜ ನಾಯಕರ ಸಮ್ಮುಖದಲ್ಲಿ ಅಭಿನಂದನಾ ಸಮಾರಂಭ:
ಮೈಸೂರಿನಲ್ಲಿ ನಡೆದ ಈ ಜಂಟಿ ಕಾಯಕ ಸಮುದಾಯಗಳ ಒಕ್ಕೂಟದ ಸಮಾವೇಶದಲ್ಲಿ ರಾಜ್ಯ ಬಿಜೆಪಿಯ ಪ್ರಮುಖ ನಾಯಕರ ದಂಡೇ ನೆರೆದಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಮುಖರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ. ಮಾಜಿ ಡಿಸಿಎಂ ಹಾಗೂ ಹಾಲಿ ಸಂಸದ ಗೋವಿಂದ ಕಾರಜೋಳ, ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ ಪಿ.ಸಿ. ಮೋಹನ್, ಮುಖಂಡರಾದ ಬಿ.ಶ್ರೀರಾಮುಲು, ಮಾಜಿ ಸಚಿವ ಎನ್.ಮಹೇಶ್, ಮಾಜಿ ಸಂಸದ ಪ್ರತಾಪ ಸಿಂಹ ಸೇರಿದಂತೆ ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್. ಸುಬ್ಬಣ್ಣ, ಮಾಜಿ ಶಾಸಕರಾದ ಬಿ. ಹರ್ಷವರ್ಧನ್, ಬಾಲರಾಜ್ ಸೇರಿದಂತೆ ಹಲವು ಮುಖಂಡರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾಯಕ ಬಂಧುಗಳ ಅಭೂತಪೂರ್ವ ಬೆಂಬಲ:
ಕಾರ್ಯಕ್ರಮದಲ್ಲಿ ಮೈಸೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ನಾಗರಿಕರು ಹಾಗೂ ವಿಶೇಷವಾಗಿ ವಿವಿಧ ಕಾಯಕ ಸಮುದಾಯಗಳ ಬಂಧುಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ನೂತನ ಎಂಎಲ್ಸಿ ರಘು ಕೌಟಿಲ್ಯ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಮಾರಂಭವು ಮುಂಬರುವ ದಿನಗಳಲ್ಲಿ ತಳಸಮುದಾಯಗಳನ್ನು ರಾಜಕೀಯವಾಗಿ ಮತ್ತಷ್ಟು ಸಂಘಟಿಸಲು ಪ್ರೇರಣೆಯಾಯಿತು.



