ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಡ ವರ್ಗಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಉಚಿತ ವೈದ್ಯಕೀಯ ಆಸ್ಪತ್ರೆಯನ್ನು ನಡೆಸುತ್ತಿರುವ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಇದುವರೆಗೂ ಲಕ್ಷಾಂತರ ಮಂದಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಹಾಗೂ ಸಾವಿರಾರು ಮಂದಿಗೆ ಉಚಿತ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ಸತ್ಯ ಸಾಯಿ ಆಸ್ಪತ್ರೆಯ ಸಂಸ್ಥಾಪಕರಾದ ಸದ್ಗುರು ಮಧುಸೂದನ ಸಾಯಿ ತಿಳಿಸಿದರು.
ಚಿಕ್ಕಬಳ್ಳಾಪುರ ತಾಲೂಕು ಮುದ್ದೇನಹಳ್ಳಿ ಸತ್ಯ ಸಾಯಿ ಗ್ರಾಮದಲ್ಲಿ ನಡೆದ ಮಾಧ್ಯಮ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಉಚಿತ ವೈದ್ಯಕೀಯ ಕಾಲೇಜು ಆರಂಭಕ್ಕೂ ಮುನ್ನಾ ಹಲವಾರು ಕಡೆಯಿಂದ ನಕಾರಾತ್ಮಕ ಪ್ರತಿಕ್ರಿಯೆ ಬಂದಿತ್ತು. ಆದರೆ ಬಡವರ ಹಿತದೃಷ್ಟಿಯಿಂದ ಉತ್ತಮ ವೈದ್ಯಕೀಯ ಸೇವೆ ಸಿಗಬೇಕೆಂಬ ಗುರಿಯನಿಟ್ಟುಕೊಂಡು ಆಸ್ಪತ್ರೆ ಸ್ಥಾಪನೆ ಮಾಡಿದ್ದೇವೆ. ಇದೀಗ ಸಾರ್ವಜನಿಕವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸತ್ಯ ಸಾಯಿ ಆಸ್ಪತ್ರೆ ಉತ್ತಮ ಗುಣ ಮಟ್ಟದ ಉಚಿತ ವೈದ್ಯಕೀಯ ಸೇವೆ ನೀಡುತ್ತಿದೆ. ಆರ್ಥಿಕವಾಗಿ ಹಿಂದುಳಿದ ಮಂದಿಗೆ ಆರೋಗ್ಯದಲ್ಲಿ ವ್ಯತ್ಯಾಸಗಳಾ ದಾಗ ಖಾಸಗಿ ಆಸ್ಪತ್ರೆ ಗಳಿಗೆ ಹೋಗಿ ಲಕ್ಷಾಂತರ ಖರ್ಚನ್ನು ನಿಭಾಯಿಸಲಾಗದೆ ಸಾಲಗಾರರಾಗುವುದನ್ನು ನಾವು ಕನಿಷ್ಠ ಮಟ್ಟಿಗೆ ತಪ್ಪಿಸಿದ್ದೇವೆ. ಬೇರೆ ಆಸ್ಪತ್ರೆಗಳಿಗೆ ಹೋಗಿ ಲಕ್ಷಾಂತರ ಖರ್ಚು ಮಾಡುವ ಬದಲು ನಮ್ಮ ಆಸ್ಪತ್ರೆಯ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಸಾರ್ವಜನಿಕರು ಬಳಸಿಕೊಳ್ಳಬೇಕಿದೆ. ಶ್ರೀ ಸತ್ಯ ಸಾಯಿ ಬಾಬಾರವರ ಸ್ಫೂರ್ತಿ ಹಾಗೂ ಅವರ ಪ್ರೇರಣೆ ಯಿಂದ ನಾವು ಇಂಥ ಸೇವೆಗಳನ್ನು ಜಗತ್ತಿನ ಎಲ್ಲೆಡೆ ಮಾಡುತ್ತಿದ್ದೇವೆ. ಬಹುತೇಕ ಹೊರರಾಷ್ಟ್ರಗಳಲ್ಲಿ ನಮ್ಮ ಸಂಸ್ಥೆ ಉಚಿತ ಅರೋಗ್ಯ, ಶಿಕ್ಷಣಕ್ಕಾಗಿ ಅಹರ್ನಿಷಿ ಕಾರ್ಯ ಪ್ರವೃತ್ತವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸತ್ಯಸಾಯಿ ಲೋಕಸೇವಾ ಸಂಸ್ಥೆಗಳ ಮುಖ್ಯ ಮಾರ್ಗದರ್ಶಕ ಬಿ. ಎನ್. ನರಸಿಂಹ ಮೂರ್ತಿ, ಸಿ. ಈ. ಓ. ಶಿವಸುಬ್ರಮಣ್ಯ, ಪ್ರದಾನ ಸಾರ್ವಜನಿಕ ಸಂಪರ್ಕಾಧಿಕಾರಿ ಗೋವಿಂದ ರೆಡ್ಡಿ, ಮಧ್ಯಮ ವಿಭಾಗದ ಬಿ. ಕೆ. ಗಣೇಶ್, ಘನಶ್ಯಾಮ್, ವಿಶ್ವನಾಥ್, ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.
ಚತ್ತಿಸ್ ಘಡದಲ್ಲಿ ಜನಿಸಿದ ನಾನು ಉನ್ನತ ಶಿಕ್ಷಣ ದೃಷ್ಟಿಯಿಂದ ಕನ್ನಡ ನಾಡಿಗೆ ಬಂದವನು. ಸಾಧ್ಯವಾದ ಮಟ್ಟಿಗೆ ಕನ್ನಡ ಭಾಷೆ ಕಲಿತು ಸತ್ಯ ಸಾಯಿ ಬಾಬಾರವರ ಕೃಪೆಯಿಂದ ಇಲ್ಲಿಯೇ ನನ್ನ ಕಾರ್ಯ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡು ಜೊತೆಗೆ ಜಗತ್ತಿನ ಹಲವೆಡೆ ಉಚಿತ ಶಿಕ್ಷಣ, ವೈದ್ಯಕೀಯ ಸೇವೆಗಳನ್ನು ನಿರಂತರವಾಗಿ ಬಂದಿದ್ದೇನೆ. ಸತ್ಯ ಸಾಯಿ ಗ್ರಾಮದಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿ AI ಕುರಿತು ತರಬೇತಿ ಕೇಂದ್ರವನ್ನು ಶೀಘ್ರದಲ್ಲೇ ಸ್ಥಾಪಿಸುತ್ತಿದ್ದೇವೆ.
ಸತ್ಯ ಸಾಯಿ ಗ್ರಾಮ ಸ್ಥಾಪನೆಯಾಗಿ ಐವತ್ತು ವರ್ಷ ತುಂಬಿದ್ದು ಸುವರ್ಣ ಸಂಭ್ರಮದ ಜೊತೆಗೆ ಸತ್ಯ ಸಾಯಿ ಲೋಕಸೇವಾ ಸಂಸ್ಥೆ ಬೆಳೆಯುವಲ್ಲಿ ಅಪಾರ ಕೊಡುಗೆ ನೀಡಿದ ಮಡಿಯಾಳ ನಾರಾಯಣ ಭಟ್ ರವರ ಜನ್ಮದಿನದ ಅಂಗವಾಗಿ ಐದು ತಿಂಗಳ ಕಾಲ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕದ ಪ್ರತಿ ಜಿಲ್ಲೆಗಳಿಗೆ ಪ್ರವಾಸ ಮಾಡಿ ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಜನಪರ ಕಾರ್ಯಗಳನ್ನು ವಿಸ್ತರಿಸುವ ಗುರಿ ಹೊಂದಿದ್ದೇವೆ.
ಸದ್ಗುರು ಮಧುಸೂದನ ಸಾಯಿ.



