ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಔಷಧೀಯ ಸಸ್ಯಗಳನ್ನು ಬೆಳೆಸಿ ಪಾರಂಪರಿಕ ವೈದ್ಯ ಪದ್ದತಿಯನ್ನು ಜೀವಂತವಾಗಿಡುವ ಉದ್ದೇಶದಿಂದ ೧೦೮ ಎಕರೆ ಸರ್ಕಾರಿ ಜಮೀನು ನೀಡುವಂತೆ ಅಖಿಲ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಹಾಗೂ ಸಂಘಗಳ ಒಕ್ಕೂಟ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯದಲ್ಲಿ ಅನೇಕ ತಲೆಮಾರುಗಳಿಂದ ಪಾರಂಪರಿಕ ವೈದ್ಯರುಗಳು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದು, ಔಷಧೀಯ ಸಸ್ಯಗಳ ಬಳಕೆ ಹಾಗೂ ಪ್ರಕೃತಿ ಚಿಕಿತ್ಸಾ ಪದ್ದತಿಗಳನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಜನರಿಗೆ ಸುಲಭವಾಗಿ ಈ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ. ಹಿರಿಯೂರು ತಾಲ್ಲೂಕಿನ
ಸಮೀಪ ಕಾಲುವೆಯ ಅಕ್ಕಪಕ್ಕದಲ್ಲಿ ೭೫೦ ಎಕರೆ ಸರ್ಕಾರಿ ಜಾಗವಿದ್ದು, ನಮಗೆ ಅಗತ್ಯವಿರುವ ೧೦೮ ಎಕರೆ ಜಮೀನು ನೀಡಿ ಪಾರಂಪರಿಕ ವೈದ್ಯಕೀಯ ಅಭಿವೃದ್ದಿ ಕೇಂದ್ರವನ್ನು ಸ್ಥಾಪಿಸಲು ನೆರವಾಗುವಂತೆ ಪಾರಂಪರಿಕ ವೈದ್ಯರುಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಅಳಿವಿನಂಚಿನಲ್ಲಿರುವ ಅಪರೂಪದ ಹಾಗೂ ಅಮೂಲ್ಯ ಔಷಧೀಯ ಸಸ್ಯಗಳು, ಗಿಡಮೂಲಿಕೆಗಳು, ನಾರು, ಬೇರುಗಳು, ಹಾಗೂ ವನಮೂಲಿಕೆಗಳ ಸಂರಕ್ಷಣೆ, ಅಭಿವೃದ್ದಿ ಮತ್ತು ಜೀವವೈವಿದ್ಯ ಉದ್ಯಾನ ನಿರ್ಮಾಣ. ಆಯುಷ್ ಪಾರಂಪರಿಕ ವೈದ್ಯಕೀಯ ಹಾಗೂ ನ್ಯಾಚುರೋಪಥಿ ಆಧಾರಿತ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ.
ಪಾರಂಪರಿಕ ವೈದ್ಯರು, ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗಾಗಿ ತರಬೇತಿ, ಕೌಶಲ್ಯಾಭಿವೃದ್ದಿ ಮತ್ತು ಸಂಶೋಧನಾ ಸಂಸ್ಥೆ ಆರಂಭಿಸುವುದು. ಔಷಧೀಯ ಸಸ್ಯಗಳ ಬೆಳವಣಿಗೆ, ಸಂಸ್ಕರಣೆ, ಗುಣಮಟ್ಟ ಪರೀಕ್ಷೆ, ಔಷಧ ತಯಾರಿಕೆ ಹಾಗೂ ಮೌಲ್ಯವರ್ಧನೆಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವುದು ಒಳಗೊಂಡಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಪಾರಂಪರಿಕ ವೈದ್ಯರು ವಿನಂತಿಸಿದರು.
ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಹಾಗೂ ಸಂಘಗಳ ಒಕ್ಕೂಟದ ಅಧ್ಯಕ್ಷ ಶರಣಪ್ಪ ಬಳ್ಳಾರಿ, ಉಪಾಧ್ಯಕ್ಷರುಗಳಾದ ತಿಪ್ಪಣ್ಣಸಾಲಿಖಾನಿ ಹಾವೇರಿ, ಹೆಚ್.ಡಿ.ಪೂಜಾರ್, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಕಾರ್ಯದರ್ಶಿ ಕುಮಾರಸ್ವಾಮಿ, ಖಜಾಂಚಿ ಡಿ.ಟಿ.ರವಿಕುಮಾರ್ ಸೇರಿದಂತೆ ನಾಡಿನ ನಾನಾ ಭಾಗಗಳ ಪಾರಂಪರಿಕ ವೈದ್ಯರುಗಳು ಪ್ರತಿಭಟನೆಯಲ್ಲಿದ್ದರು.



