ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿರುವ 19 ಸಚಿವರ ಪೈಕಿ 4 ನಾಯಕರ ಆಯ್ಕೆಯನ್ನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟ ತೀವ್ರವಾಗಿ ಖಂಡಿಸಿದೆ. ಮಂಗಳವಾರ ವಿಧಾನಸೌಧದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಪರಿಷತ್ ಸದಸ್ಯರಾದ ಸಿ.ಟಿ. ರವಿ, ಎನ್. ರವಿಕುಮಾರ್ ಮತ್ತು ಜೆಡಿಎಸ್ ಸದಸ್ಯ ಭೋಜೇಗೌಡ ಅವರು ಕಾಂಗ್ರೆಸ್ ಸರ್ಕಾರದ ನಿರ್ಧಾರಗಳ ವಿರುದ್ಧ ಜಂಟಿಯಾಗಿ ಕಿಡಿಕಾರಿದರು.
ಬ್ಲ್ಯಾಕ್ಮೇಲ್ಗೆ ಮಣಿದು ಸಚಿವ ಸ್ಥಾನ: ವಾಲ್ಮೀಕಿ ನಿಗಮದ ಹಗರಣದಲ್ಲಿ ಆರೋಪ ಎದುರಿಸಿ ರಾಜೀನಾಮೆ ನೀಡಿದ್ದ ಬಿ. ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿ.ಟಿ. ರವಿ, "ಸರ್ಕಾರ ಬ್ಲ್ಯಾಕ್ಮೇಲ್ತಂತ್ರಕ್ಕೆ ಮಣಿದು ಈ ನಿರ್ಧಾರ ತೆಗೆದುಕೊಂಡಂತಿದೆ" ಎಂದು ಆರೋಪಿಸಿದರು.
ವಿವಾದಿತ ನಾಯಕರಿಗೆ ಮಣೆ: ಸದನದಲ್ಲಿ ಅನುಚಿತವಾಗಿ ವರ್ತಿಸಿದ್ದ ಶಿವಲಿಂಗೇಗೌಡ, ಶಿಕ್ಷಣ ಕ್ಷೇತ್ರವನ್ನು ಕಂಗಾಲು ಮಾಡಿದ ಮಧು ಬಂಗಾರಪ್ಪ ಹಾಗೂ ಕಾರ್ಮಿಕ ಕಿಟ್ ಹಗರಣದ ಆರೋಪ ಹೊತ್ತ ಸಂತೋಷ್ ಲಾಡ್ ಅವರಿಗೆ ಸರ್ಕಾರ ಬಹುಮಾನ ರೂಪದಲ್ಲಿ ಸಚಿವ ಸ್ಥಾನ ನೀಡಿದೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿದವು.
ಮಾಗಡಿ ಬಾಲಕೃಷ್ಣ ಆಯ್ಕೆಗೆ ವಿರೋಧ: ಬಿಡದಿ ಟೌನ್ಶಿಪ್ ವಿರುದ್ಧ ನಡೆಯುತ್ತಿರುವ ರೈತರ ಹೋರಾಟವನ್ನು ಹಾದಿತಪ್ಪಿಸುವ ಉದ್ದೇಶದಿಂದಲೇ ಮಾಗಡಿ ಬಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಸಿ.ಟಿ. ರವಿ ದೂರಿದರು.
ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ 'ಮೇ ಲಡ್ಕಿ ಹೂಂ, ಲಡ್ಸಕ್ತಿ ಹೂಂ' ಘೋಷಣೆಯನ್ನು ಉಲ್ಲೇಖಿಸಿದ ನಾಯಕರು, ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡದಿರುವುದನ್ನು ಪ್ರಶ್ನಿಸಿದರು. ಗೃಹಲಕ್ಷ್ಮಿ ಯೋಜನೆಯ ಲೆಕ್ಕ ನೀಡಿಲ್ಲ ಎಂಬ ಕಾರಣಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕೈಬಿಡಲಾಗಿದೆಯೇ ಎಂದು ಟಾಂಗ್ ನೀಡಿದರು.
ಸಂಪುಟ ಪುನಾರಚನೆಗೆ ಎಐಸಿಸಿ ಸ್ಪಷ್ಟನೆ ನೀಡಲಿ: ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ, "ಮಂಕಾಳ ವೈದ್ಯ ಅವರನ್ನು ಕೈಬಿಟ್ಟು ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಸೇರ್ಪಡೆಗೊಳಿಸಿರುವುದರ ಹಿಂದೆ ರಾಜಕೀಯ ಲಾಭದ ಲೆಕ್ಕಾಚಾರವಿದ್ದು, ಇದಕ್ಕೆ ಎಐಸಿಸಿ ಸ್ಪಷ್ಟನೆ ನೀಡಬೇಕು" ಎಂದು ಆಗ್ರಹಿಸಿದರು.
ಉಗ್ರ ಹೋರಾಟದ ಎಚ್ಚರಿಕೆ:
ಕಾಂಗ್ರೆಸ್ ಸರ್ಕಾರವು ಮಹಿಳಾ ವಿರೋಧಿಯಾಗಿ ಹಾಗೂ ಭ್ರಷ್ಟಾಚಾರಕ್ಕೆ ಬೆಂಬಲ ನೀಡುವಂತೆ ನಡೆದುಕೊಳ್ಳುತ್ತಿದೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಚಿವರ ಸೇರ್ಪಡೆ ಹಾಗೂ ಕೆಪಿಎಸ್ಸಿ ವೈಫಲ್ಯಗಳ ವಿರುದ್ಧ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ತೀವ್ರ ಹೋರಾಟ ರೂಪಿಸುವುದಾಗಿ ಮೈತ್ರಿಕೂಟದ ನಾಯಕರು ಎಚ್ಚರಿಸಿದ್ದಾರೆ.



