ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇತ್ತೀಚಿನ ದಿನಗಳಲ್ಲಿ ತಾಯಂದಿರು ಮಕ್ಕಳಿಗೆ ಎದೆಹಾಲಿನ ಜೊತೆಗೆ ಇತರ ಹಾಲು ಹಾಗೂ ಪೌಷ್ಠಿಕ ಆಹಾರದ ಪೌಡರ್ಗಳನ್ನು ನೀಡುವ ಅಭ್ಯಾಸ ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ. ಮಗು ಹುಟ್ಟಿದ ತಕ್ಷಣ ಜೇನುತುಪ್ಪ ಅಥವಾ ಇತರೆ ಸಿಹಿ ಪದಾರ್ಥಗಳನ್ನು ಅಭ್ಯಾಸ ಮಾಡಿಸದೆ, ಹುಟ್ಟಿದ ಒಂದು ಗಂಟೆಯೊಳಗೆ ತಾಯಿಯ ಎದೆಹಾಲು ಕುಡಿಸುವುದು ಅತ್ಯಂತ ಮುಖ್ಯ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿ.ವಿ. ಗಿರೀಶ್ ತಿಳಿಸಿದರು.
ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ನಗರದ ಬುದ್ಧನಗರ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕೆಳಗೋಟೆಯ ಬೇಡರ ಕಣ್ಣಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ 'ವಿಶ್ವ ಸ್ತನ್ಯಪಾನ ಸಪ್ತಾಹ ಹಾಗೂ ಪೌಷ್ಠಿಕ ಆಹಾರ ದಿನಾಚರಣೆ' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಾಯಿಯ ಮೊದಲ ಹಾಲಿನಲ್ಲಿ 'ಕೊಲೆಸ್ಟ್ರಾಮ್' ಎಂಬ ಅಂಶವಿದ್ದು, ಅದು ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಮಗು ಹುಟ್ಟಿದ ತಕ್ಷಣ ಎದೆಹಾಲು ನೀಡುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಎಸ್. ಗುರುಮೂರ್ತಿ ಅವರು, ಅಯೋಡಿನ್ ಕೊರತೆಯಿಂದ ದೇಹದಲ್ಲಿ ಹಲವಾರು ಆರೋಗ್ಯ ನ್ಯೂನತೆಗಳು ಉಂಟಾಗಬಹುದು. ಅಡುಗೆ ಮಾಡುವಾಗ ಮೊದಲೇ ಉಪ್ಪು ಹಾಕುವುದರಿಂದ ಬೇಯಿಸುವಾಗ ಅದರಲ್ಲಿರುವ ಅಯೋಡಿನ್ ಅಂಶ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆಹಾರ ಸಂಪೂರ್ಣ ತಯಾರಾದ ನಂತರ ಉಪ್ಪನ್ನು ಸೇರಿಸುವ ಮೂಲಕ ಅಯೋಡಿನ್ ಕೊರತೆಯಾಗದಂತೆ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಬುದ್ಧನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುರೇಂದ್ರಕುಮಾರ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸಮೂರ್ತಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ವಿಜಯಮ್ಮ, ಕಾವ್ಯ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪಾರ್ವತಿ, ಮಮತ, ಮಾನ್ಯ ಹಾಗೂ ಆಶಾ ಕಾರ್ಯಕರ್ತೆಯರಾದ ಸುಮಲತಾ, ಕವಿತಾ, ಓಂಕಾರಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಡಿ. ಕಮಲಮ್ಮ, ಶಿವಲಿಂಗಮ್ಮ, ಶಶಿಕಲಾ, ಜ್ಯೋತಿ, ಶ್ರೀದೇವಿ, ಈರಮ್ಮ ಸೇರಿದಂತೆ ಹಲವಾರು ಗರ್ಭಿಣಿಯರು, ತಾಯಂದಿರು, ಬಾಣಂತಿಯರು ಮತ್ತು ಪೋಷಕರು ಉಪಸ್ಥಿತರಿದ್ದರು.



