Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬದಲಾವಣೆ ಬಯಸಿದೆ ಹಿರಿಯೂರು: ಹಣ-ಜಾತಿ ರಾಜಕಾರಣಕ್ಕೆ ಬ್ರೇಕ್ ಹಾಕ್ತಾರಾ ಮತದಾರರು?

'ಅನ್ನದಾತನ ಆಕ್ರೋಶ, ಕುಡಿಯುವ ನೀರಿಗಾಗಿ ಹಾಹಾಕಾರ'; ಕಳಂಕ ಮುಖದಿಂದ ಹೊರಬರಬೇಕಿದೆ ಹಿರಿಯೂರು ಕ್ಷೇತ್ರ

Advertisement
Advertisement

ಎಂ.ಎಲ್ ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಜನಪ್ರಿಯ ಸಚಿವರಾಗಿದ್ದ ಡಿ. ಸುಧಾಕರ್ ಅವರ ಅಕಾಲಿಕ ನಿಧನದ ನಂತರ ಹಿರಿಯೂರು ವಿಧಾನಸಭಾ ಕ್ಷೇತ್ರವು ಸದ್ಯ ರಾಜಕೀಯ ಸಂಚಲನದ ಕೇಂದ್ರ ಬಿಂದುವಾಗಿದೆ.

ಉಪಚುನಾವಣೆಯ ಕಣ ರಂಗೇರುತ್ತಿದ್ದು, ವಿವಿಧ ಪಕ್ಷಗಳ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇದರ ನಡುವೆ ಪಕ್ಷೇತರ ಅಭ್ಯರ್ಥಿಗಳು ಸಹ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ.

ಆದರೆ, ಹಿರಿಯೂರಿನ ಇಂದಿನ ಅತಿ ದೊಡ್ಡ ಪ್ರಶ್ನೆ ಏನೆಂದರೆ "ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದಲ್ಲ, ಹಿರಿಯೂರು ತಾಲೂಕಿನ ಹಣೆಬರಹ ಬದಲಿಸುವ ಯೋಗ್ಯ ನಾಯಕ ಯಾರು?" ಎನ್ನುವುದು. ಈ ಬಾರಿ ಕ್ಷೇತ್ರದ ಮತದಾರರು ಎಚ್ಚೆತ್ತುಕೊಳ್ಳದಿದ್ದರೆ, ತಾಲೂಕಿನ ಭವಿಷ್ಯ ಮತ್ತಷ್ಟು ಕಮರಿಹೋಗುವುದರಲ್ಲಿ ಸಂಶಯವಿಲ್ಲ.

ಹಣವಿದ್ದವನೇ ಗೆಲ್ಲುವ ಕಳಂಕ ಅಳಿಯಲಿ!:
"ಹಿರಿಯೂರು ಕ್ಷೇತ್ರದಲ್ಲಿ ಹಣವಿದ್ದವರು ಬಂದರೆ ಗೆಲುವು ಖಚಿತ" ಎನ್ನುವ ಮಾತು ಇಡೀ ರಾಜ್ಯದಲ್ಲೇ ಚರ್ಚೆಯಾಗುತ್ತಿದೆ. ಇದು ಕ್ಷೇತ್ರದ ಪ್ರಜ್ಞಾವಂತ ಮತದಾರರಿಗೆ ಹಚ್ಚಿದ ಕಳಂಕ. ಕಳ್ಳರು, ಕಾಕರು, ಲೂಟಿಕೋರರು, ದರೋಡೆ ಮಾಡಿ ತಂದು ಹಣವನ್ನು ಹಂಚಿಕೆ ಮಾಡುವಂತ ಅಭ್ಯರ್ಥಿಗಳನ್ನು ಸಂಪೂರ್ಣ ತಿರಸ್ಕರಿಸಬೇಕಿದೆ. ಕೇವಲ ಹಣ ಮತ್ತು ಹೆಂಡದ ಆಸೆ ತೋರಿಸಿ, ಜಾತಿಯ ವಿಷಬೀಜ ಬಿತ್ತಿ ಮತದಾರರನ್ನು ದಾರಿ ತಪ್ಪಿಸುವ ಶಕ್ತಿಗಳಿಗೆ ಈ ಬಾರಿ ಮತದಾರರು ತಕ್ಕ ಪಾಠ ಕಲಿಸಬೇಕಿದೆ. ಸಮಾಜವನ್ನು ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳಿಂದಾಗಿ ಅಮಾಯಕ ಯುವಕರು ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಯುವಜನತೆ ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ.

ವಿ.ವಿ. ಸಾಗರವಿದ್ದರೂ ತಪ್ಪದ ನೀರಡಿಕೆ: ಇದು ಯಾವ ನ್ಯಾಯ?
ಹಿರಿಯೂರು ತಾಲೂಕಿನ ಹೆಗ್ಗುರುತಾದ ಐತಿಹಾಸಿಕ ವಾಣಿವಿಲಾಸ ಸಾಗರ (ವಿ.ವಿ. ಸಾಗರ) ಜಲಾಶಯ ನಮ್ಮದೇ ಮಡಿಲಲ್ಲಿದ್ದರೂ
, ತಾಲೂಕಿನ ಜನತೆ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದಿರುವುದು ಅತ್ಯಂತ ದುರ್ದೈವದ ಸಂಗತಿ. ಜಲಾಶಯ ಪಕ್ಕದಲ್ಲೇ ಇದ್ದರೂ ನಮಗೆ ಕುಡಿಯಲು ನೀರಿಲ್ಲ ಎಂದರೆ ಇದು ನಮ್ಮ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಲ್ಲವೇ?, ನಮ್ಮವರೇ ಸ್ಥಳೀಯವಾಗಿ ಕೈಗೆ ಸಿಗುವ ನಾಯಕರನ್ನ ಏಕೆ ಆಯ್ಕೆ ಮಾಡಿಕೊಳ್ಳಬಾರದು, ದುಡ್ಡೇ ಮಾನದಂಡವಾದರೆ ಹೇಗೆ, ಕ್ಷೇತ್ರಕ್ಕೆ ಅಂಟಿರುವ ಕಳಂಕವನ್ನು ಯುವ ಮತದಾರರು ಸಂಪೂರ್ಣ ತೊಳೆಯಬೇಕಿದೆ.

ವಿ.ವಿ. ಸಾಗರಕ್ಕೆ ಭದ್ರಾ ನೀರು ಹರಿಸಬೇಕೆಂದು ಇಡೀ ತಾಲೂಕಿನ ರೈತ, ದಲಿತ, ಕನ್ನಡಪರ ಸಂಘಟನೆಗಳು ಹಾಗೂ ಎಲ್ಲಾ ಧರ್ಮದ ಬಂಧುಗಳು ಬೀದಿಗಿಳಿದು ವರ್ಷಗಟ್ಟಲೇ ಹೋರಾಟ ಮಾಡಿ ನೀರು ತಂದರು. ಆದರೆ, ಇಂದಿಗೂ ಅದೇ ನೀರನ್ನು ತಾಲೂಕಿನ ಜನರಿಗೆ ಕುಡಿಯಲು ಕೊಡಲು ಸಾಧ್ಯವಾಗದಿದ್ದರೆ ಇದು ಇಡೀ ವ್ಯವಸ್ಥೆಗೆ ನಾಚಿಕೆಗೇಡಿನ ಸಂಗತಿ.

ವಿ.ವಿ. ಸಾಗರದ ಪಕ್ಕದಲ್ಲೇ ಇರುವ ಭರಂಗಿರಿ ಗ್ರಾಮದಲ್ಲೂ ಸಹ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ವರ್ಷಗಳಿಂದ ನಡೆಯುತ್ತಿರುವ ಕುಡಿಯುವ ನೀರಿನ ಕಾಮಗಾರಿಗಳು ಇನ್ನೂ ಮುಗಿದಿಲ್ಲ. ಧರ್ಮಪುರ, ಐಮಂಗಲ ಮತ್ತು ಜವನಗೊಂಡನಹಳ್ಳಿ ಹೋಬಳಿಗಳಿಗೆ ತುರ್ತಾಗಿ ವಿವಿ ಸಾಗರದಿಂದ ನೀರು ಹರಿಸುವ ಕಾರ್ಯ ಮಾಡಬೇಕಿದೆ. ಮೊದಲು ಕುಡಿಯುವ ನೀರಿನ ಕಾಮಗಾರಿಗಳನ್ನು ಮುಗಿಸಿ ತಾಲೂಕಿನಾದ್ಯಂತ ನೀರು ಕೊಡುವ ಮನಸ್ಸು ನಮ್ಮ ನಾಯಕರಿಗೆ ಬರಬೇಕಿದೆ.

"ಬಿಳಿ ಬಟ್ಟೆ ಧರಿಸಿ, ಹಸಿರು ಶಾಲು ಹಾಕಿ ಬೊಬ್ಬೆ ಹೊಡೆಯುವುದು ನಮಗೆ ಬೇಡ. ನಮಗೆ ಮೊದಲು ನೀರು ಕೊಡಿ, ನಾವೇ ಅನ್ನ ಕೊಡುತ್ತೇವೆ" ಎನ್ನುವುದು ಹಿರಿಯೂರು ರೈತರ ಇಂದಿನ ರೋಧನೆ.

ರೈತರ ಕೂಗಿಗೆ ಬೆಲೆ ಇಲ್ಲವೇ?:
ಧರ್ಮಪುರ, ಜೆ.ಜೆ. ಹಳ್ಳಿ ಹಾಗೂ ಐಮಂಗಲ ಹೋಬಳಿಯ ರೈತರ ನೀರಿನ ಕೂಗು ಇಂದಿಗೂ ನಿಂತಿಲ್ಲ. ಕೆರೆಗಳಿಗೆ ನೀರು ಹರಿಸಲು ಮಂಜೂರಾತಿ (ಅಲೊಕೇಶನ್) ಆಗಿದೆ ಎಂದು ಕಾಗದದ ಮೇಲೆ ಭರವಸೆ ನೀಡುವ ರಾಜಕಾರಣಿಗಳು, ಕಾಮಗಾರಿ ಯಾವಾಗ ಪ್ರಾರಂಭವಾಗುತ್ತದೆ ಎಂಬ ಪ್ರಶ್ನೆಗೆ ಮೌನ ವಹಿಸುತ್ತಾರೆ. ಚುನಾವಣೆ ಬಂದಾಗ ಮಾತ್ರ ಕೈಮುಗಿದು ಬರುವ ಜನಪ್ರತಿನಿಧಿಗಳು ರೈತರ ಮೂಲಭೂತ ಅವಶ್ಯಕತೆಗಳಾದ ನೀರು, ವಿದ್ಯುತ್, ಉತ್ತಮ ಬೀಜ ಮತ್ತು ಗೊಬ್ಬರವನ್ನು ಸಮರ್ಪಕವಾಗಿ ಒದಗಿಸಲು ವಿಫಲರಾಗಿದ್ದಾರೆ. ಸುಳ್ಳು ಭರವಸೆಗಳನ್ನು ನಂಬಿ ರೈತರು ಸುಸ್ತಾಗಿದ್ದಾರೆ, ಮೊದಲು ಕಾಮಗಾರಿಗಳು ಕಣ್ಣಿಗೆ ಕಾಣುವಂತೆ ಆರಂಭವಾಗಲಿ!.

news_1784158482_0_981.jpg

 

ನಗರ ಮತ್ತು ಹಳ್ಳಿಗಳ ರಸ್ತೆಗಳು ಸೃಷ್ಟಿಸಿವೆ ನರಕ ಸದೃಶ ಸ್ಥಿತಿ:
ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಹಿರಿಯೂರು ನಗರದಲ್ಲಿ ಇಂದಿಗೂ ಸುಸಜ್ಜಿತ ಒಳಚರಂಡಿ (ಯುಜಿಡಿ) ವ್ಯವಸ್ಥೆ ಇಲ್ಲ. ನಗರದ ರಸ್ತೆಗಳು ಮಾತ್ರವಲ್ಲದೆ, ತಾಲೂಕಿನ ಬಹುತೇಕ ಹಳ್ಳಿಗಳ ಸಂಪರ್ಕ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಸಂಚಾರವೇ ದುಸ್ತರವಾಗಿದೆ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಇಡೀ ತಾಲೂಕು ನರಳುತ್ತಿದೆ.

ಮತದಾರರೇ, ಈಗಲಾದರೂ ಎಚ್ಚೆತ್ತುಕೊಳ್ಳಿ!:
ಚುನಾವಣೆ ಎಂಬುದು ಕೇವಲ ಐದು ವರ್ಷಕ್ಕೊಮ್ಮೆ ಬಂದು ಹೋಗುವ ಹಬ್ಬವಲ್ಲ, ಅದು ನಮ್ಮ ಮುಂದಿನ ಐದು ವರ್ಷಗಳ ಬದುಕನ್ನು ನಿರ್ಧರಿಸುವ ದಿಕ್ಸೂಚಿ. ಹಣ-ಹೆಂಡಕ್ಕೆ ಮರುಳಾಗಿ, ಜಾತಿಯ ಭಾವನೆಗಳಿಗೆ ಬಲಿಯಾಗಿ ನಾಲಿಗೆ ಒಣಗಿಸುವ ನಾಯಕರನ್ನು ಆರಿಸಿದರೆ, ಮುಂದಿನ ದಿನಗಳಲ್ಲಿ ತುತ್ತು ಅನ್ನ ಮತ್ತು ಕುಡಿಯುವ ನೀರಿಗೂ ಹರಸಾಹಸ ಪಡಬೇಕಾಗುತ್ತದೆ.

ಈ ಬಾರಿಯ ಉಪ ಚುನಾವಣೆಯಲ್ಲಿ ತಾಲೂಕಿನ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವ ಮತ್ತು ರೈತರ ಕಣ್ಣೀರು ಒರೆಸುವ ನಾಯಕನನ್ನು ಜಾತಿ-ಭೇದ ಮರೆತು ಆಯ್ಕೆ ಮಾಡಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಹಣ ಕೊಟ್ಟರೆ ಹಿರಿಯೂರಿನ ಜನತೆ ಗೆಲ್ಲಿಸುತ್ತಾರೆ ಎನ್ನುವ ಮಾನ-ಮರ್ಯಾದೆ ಹರಾಜ್ ಆಗುವಂತ ಕಳಂಕವನ್ನು ತೊಳೆದು, ಅಭಿವೃದ್ಧಿಯ ಹೊಸ ಹಾದಿಯನ್ನು ಕಂಡುಕೊಳ್ಳುವ ಜವಾಬ್ದಾರಿ ಈಗ ಸಂಪೂರ್ಣವಾಗಿ ಯುವ ಮತದಾರರ ಕೈಯಲ್ಲಿದೆ.
ಕ್ಷೇತ್ರದಲ್ಲಿ ಈಗ ಹಂಚಿಕೆ ಆಗುತ್ತಿರುವ ಹಣ ಪ್ರಮಾಣಿಕವಾಗಿ ದುಡಿದ ದುಡ್ಡಲ್ಲ, ನಿಮಗೆ ಅಗತ್ಯ ಇದ್ದರೆ ಅಂತಹ ಹಣ ಪಡೆಯಿರಿ, ಆದರೆ ಅಮೂಲ್ಯವಾದ ಮತವನ್ನು ಅರ್ಹ, ಸ್ಥಳೀಯ ಅಭ್ಯರ್ಥಿಗೆ ಹಾಕಿ ಗೆಲ್ಲಿಸುವ ಮೂಲಕ ಮತದಾರರು ಪ್ರಭುದ್ಧತೆ ಮೆರೆದು ಬಂಡವಾಳಶಾಹಿಗಳಿಗೆ ತಕ್ಕ ಪಾಠ ಕಲಿಸಿ ಮತ್ತೆ ಹಿರಿಯೂರಿನ ಸುದ್ದಿ ಕನಸ್ಸಿನಲ್ಲೂ ಬಾರದಂತೆ ಮಾಡುವ ಹೊಣೆಗಾರಿಕೆ ಇಡೀ ಕ್ಷೇತ್ರದ ಮತದಾರರಿಗಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.