ಚಂದ್ರವಳ್ಳಿ ನ್ಯೂಸ್,ಬೆಂಗಳೂರು:
ಕರ್ನಾಟಕದ ಸಂಸ್ಕೃತಿ ಮತ್ತು ಸಭ್ಯತೆಗೆ ವಿರುದ್ಧವಾಗಿ ನಡೆಯುತ್ತಿರುವ ಕಾಂಗ್ರೆಸ್ನ ಗೂಂಡಾಗಿರಿ ಹಾಗೂ ಹಿಂಸಾತ್ಮಕ ಮನಸ್ಥಿತಿ ಹೆಚ್ಚು ದಿನ ಮುಂದುವರಿಯಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ ಸಿ. ಟಿ. ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯ ಮುಂಭಾಗ ಪ್ರಜಾಸತ್ತಾತ್ಮಕ ಹಾಗೂ ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಹಾಗೂ ಪಕ್ಷದ ಕಾರ್ಯಕರ್ತರ ಮೇಲೆ ಮೊಟ್ಟೆ ಎಸೆದು ಹಲ್ಲೆಗೆ ಯತ್ನಿಸಿದ ಕಾಂಗ್ರೆಸ್ ಕೃತ್ಯವನ್ನು ಖಂಡಿಸಿ, ಬಿಜೆಪಿ ನಿಯೋಗವು ಇಂದು ವಿಧಾನಸೌಧದ ಗಾಂಧಿ ಪ್ರತಿಮೆಯ ಎದುರು ಬೃಹತ್ ಪ್ರತಿಭಟನೆ ನಡೆಸಿತು. ಬಳಿಕ ಲೋಕಭವನಕ್ಕೆ ತೆರಳಿ, ರಾಜ್ಯಪಾಲರ ಕಾರ್ಯದರ್ಶಿಗಳ ಮೂಲಕ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಲಾಯಿತು.
ಆಡಳಿತ ವ್ಯವಸ್ಥೆಗೆ ಪ್ರಶ್ನೆ: ಸುಳ್ಳನ್ನೇ ಮನೆದೇವರಾಗಿಸಿಕೊಂಡಿರುವ ಕಾಂಗ್ರೆಸ್ ಆಡಳಿತದಲ್ಲಿ ಗೂಂಡಾಗಿರಿ ಮಿತಿಮೀರಿದೆ. ರಾಜ್ಯದಲ್ಲಿ ಶಾಸಕರಿಗೇ ರಕ್ಷಣೆ ಇಲ್ಲದ ವಾತಾವರಣ ನಿರ್ಮಾಣವಾಗಿದ್ದರೆ, ಇನ್ನು ಸಾಮಾನ್ಯ ಜನರ ಭದ್ರತೆಯ ಗತಿಯೇನು ಎಂದು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರನ್ನು ಸಿ. ಟಿ. ರವಿ ಪ್ರಶ್ನಿಸಿದರು.
ಜನರಿಂದ ತಕ್ಕ ಉತ್ತರ: ರಾಜ್ಯದಲ್ಲಿ ಸಂವಿಧಾನಾಧಾರಿತ ಆಡಳಿತ ನಡೆಯುತ್ತಿದೆಯೋ ಅಥವಾ ಕಾಂಗ್ರೆಸ್ ಗೂಂಡಾಗಳ ಗೂಂಡಾರಾಜ್ಯ ನಡೆಯುತ್ತಿದೆಯೋ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಈ ರೀತಿಯ ಗೂಂಡಾಗಿರಿಗೆ ರಾಜ್ಯದ ಜನತೆ ಸದ್ಯದಲ್ಲೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಪ್ರಮುಖ ನಾಯಕರ ಭಾಗಿ: ಈ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪ್ರಮುಖ ನಾಯಕರಾದ ಸುನಿಲ್ ಕುಮಾರ್, ಅರವಿಂದ್ ಬೆಲ್ಲದ್, ಎಸ್. ಸುರೇಶ್ ಕುಮಾರ್, ಗಲಿ ಜನಾರ್ದನ ರೆಡ್ಡಿ ಸೇರಿದಂತೆ ಹಲವು ಶಾಸಕರು ಹಾಗೂ ಹಿರಿಯ ನಾಯಕರು ಭಾಗವಹಿಸಿದ್ದರು.



