ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸುದೀರ್ಘ ಹಾಗೂ ಯಶಸ್ವಿ ಸೇವೆ ಸಲ್ಲಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಭದ್ರಯ್ಯ ನವರು ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರ ಆತ್ಮೀಯ ಬಳಗದ ವತಿಯಿಂದ ಬೆಂಗಳೂರಿನ ಲಗ್ಗೆರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನಿವೃತ್ತಿ ಸನ್ಮಾನ ಸಮಾರಂಭವು ಅತ್ಯಂತ ಅರ್ಥಪೂರ್ಣವಾಗಿ ಜರುಗಿತು.
ಶಿವಭದ್ರಯ್ಯ ನವರು ಮೂಲತಃ ಬೆಂಗಳೂರು ಉತ್ತರ ತಾಲ್ಲೂಕು ದಾಸನಪುರ ಹೋಬಳಿಯ ಕೆ.ಜಿ. ಲಕ್ಕೇನಹಳ್ಳಿ ಗ್ರಾಮದವರಾಗಿದ್ದು, ಇತ್ತೀಚಿನವರೆಗೆ ಇದೇ ದಾಸನಪುರ ಹೋಬಳಿಯ ಕಿತ್ತಗಳಿ ಗ್ರಾಮ ಪಂಚಾಯತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಅತ್ಯಂತ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ್ದರು.
ಕರ್ತವ್ಯ ನಿಷ್ಠೆಗೆ ಗೌರವ:
ಕಿತ್ತಗಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಶಿವಭದ್ರಯ್ಯ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ಸುದೀರ್ಘ ಸೇವೆ ಮತ್ತು ಜನಸ್ನೇಹಿ ಆಡಳಿತವನ್ನು ಸ್ಮರಿಸಿ, ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಆತ್ಮೀಯರು ಹಾರೈಸಿದರು.
ಲಗ್ಗೆರೆಯಲ್ಲಿ ನಡೆದ ಈ ಸನ್ಮಾನ ಸಮಾರಂಭದಲ್ಲಿ ಕುಂಚ ಪರಿವಾರದ ಮುಖ್ಯಸ್ಥರಾದ ಶ್ರೀನಿವಾಸ್, ಶೇಷಾಚಲಮೂರ್ತಿ, ಸುಧಾಕರ್, ಲಗ್ಗೆರೆ ನಾರಾಯಣಸ್ವಾಮಿ, ಚೌಡಪ್ಪ, ಕಾಮಣ್ಣ, ರಂಗಹನುಮಯ್ಯ ಸೇರಿದಂತೆ ಮತ್ತಿತರರ ಸ್ನೇಹಿತರು ಶಿವಭದ್ರಯ್ಯ ಅವರ ಕುಟುಂಬಸ್ಥರು, ಆತ್ಮೀಯ ಸ್ನೇಹಿತರ ಬಳಗ, ಇಲಾಖೆಯ ಸಹೋದ್ಯೋಗಿಗಳು ಹಾಗೂ ಕಿತ್ತಗಳಿ ಗ್ರಾಮ ಪಂಚಾಯತಿಯ ಪ್ರಮುಖರು ಉಪಸ್ಥಿತರಿದ್ದು, ನಿವೃತ್ತ ಅಧಿಕಾರಿಯನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.



