ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಸಹಯೋಗದೊಂದಿಗೆ ಆಯೋಜಿಸಿದ್ದ ಆಧುನಿಕ ಮೈಸೂರು ನಿರ್ಮಾತೃ, ದಾರ್ಶನಿಕ ಆಡಳಿತಗಾರ ನಾಲ್ವಡಿ ಕೃಷ್ಣರಾಜ ಒಡೆಯರ್ 142ನೇ ಅವರ ಜಯಂತಿಯನ್ನು ವಿವಿಯ ಆಡಳಿತ ಕಚೇರಿಯ ಸೆನೆಟ್ ಹಾಲ್ ನಲ್ಲಿ ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು.
ಬೆಂಗಳೂರು ವಿವಿಯ ಕುಲಪತಿ ಪ್ರೊ. ಡಾ. ಎಸ್.ಎಂ. ಜಯಕರ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನ ಮತ್ತು ಸಾಧನೆಗಳಲ್ಲಿ ಪ್ರಮುಖವಾಗಿ ಆಧುನಿಕ ಮೈಸೂರಿನ ಶಿಲ್ಪಿಯಾಗಿ ನಾಡನ್ನು ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲ ಕೊಡುಗೆಗಳು ಅಪಾರ, ಶಾಲೆ- ಕಾಲೇಜುಗಳ ಸ್ಥಾಪನೆ, ವಾಣಿ ವಿಲಾಸ ಸಾಗರ, ಕೆ ಆರ್ ಎಸ್ ಅಣೆಕಟ್ಟುಗಳ ನಿರ್ಮಾಣ, ಜಲವಿದ್ಯುತ್ ಕೇಂದ್ರಗಳು, ಆಸ್ಪತ್ರೆಗೆ, ಕಸಾಪ, ಮೈಸೂರು ಬ್ಯಾಂಕ್ ಮುಂತಾದ ಸಮಗ್ರವಾದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದರು ಎಂದು ಸ್ಮಾರಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರು ಕೇವಲ ರಾಜರಾಗಿರಲಿಲ್ಲ, ಬದಲಾಗಿ ಅವರು ಪ್ರಜೆಗಳ ಏಳಿಗೆಗಾಗಿ ಬದುಕಿದ ಮಹಾನ್ ದಾರ್ಶನಿಕರಾಗಿದ್ದರು ಹಾಗೆಯೇ ಮೈಸೂರು ಸಂಸ್ಥಾನವನ್ನು ಮಾದರಿ ಮೈಸೂರು ಆಗಿ ರೂಪಿಸುವಲ್ಲಿ ಅವರ ಪಾತ್ರ ಅಪ್ರತಿಮವಾದುದು ಎಂದು ಬಣ್ಣಿಸಿದರು.
ಬೆಂಗಳೂರು ವಿವಿಯ ವಿದ್ಯಾರ್ಥಿ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಭೂಗರ್ಭಶಾಸ್ತ್ರ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕ ಪ್ರೊ. ಪಿ.ಸಿ. ನಾಗೇಶ್ ಅವರು ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ಮಹಾನ್ ಆಡಳಿತಗಾರರಾಗಿದ್ದ ಅವರು, ಶಿಕ್ಷಣ, ಕೈಗಾರಿಕಾ, ನೀರಾವರಿ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಗಾಗಿ ಕೈಗೊಂಡ ಕ್ರಾಂತಿಕಾರಿ ನಿರ್ಧಾರಗಳು ಇಂದಿಗೂ ಇವರ ಆದರ್ಶಗಳನ್ನು ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಗೌರವಾಧ್ಯಕ್ಷ ಶೇಷಾದ್ರಿ ಜಿ.ಸಿ. ಮತ್ತು ಮಹಿಳಾ ಅಧ್ಯಯನ ಕೇಂದ್ರದ ಸಂಶೋಧನಾರ್ಥಿ ಚಂದ್ರಕಲಾ ಅವರು ನಿರೂಪಣೆ ಮಾಡಿದರು.
ಇದೇ ವೇಳೆಯಲ್ಲಿ ರಾಮನಗರ ಪಿಜಿ ನಿರ್ದೇಶಕ ಪ್ರೊ.ಬಿ.ಗಂಗಾಧರ್, ಚಂದ್ರಪ್ಪ ಎಂ. ಮಿಡ್ಲುಮುನಿ, ಅಧ್ಯಕ್ಷ ಪ್ರಶಾಂತ್ ಎಂ.ಟಿ, ಗೌರವಾಧ್ಯಕ್ಷ ಶೇಷಾದ್ರಿ ಜಿ.ಸಿ, ರವಿಕುಮಾರ್, ಅಜಿತ್, ರವಣಪ್ಪ ಎನ್, ಪ್ರಶಾಂತ್ ರಾಜೇಂದ್ರ ಗೋಪಾಲ್, ಶಿವು. ಮುತ್ತುರಾಜು ಎಂ, ಗವಿಸಿದ್ದಯ್ಯ, ನಮ್ರತಾ, ಚೇತನ್ ಬೇಲೂರು, ವೆಂಕಟಪ್ಪ ಸೇರಿದಂತೆ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
“ಉತ್ತಮ ಸೌಲಭ್ಯಗಳಿರುವ ಆಸ್ಪತ್ರೆಗಳನ್ನು ಪ್ರಾರಂಭಿಸಿ ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ಮುಂದಾದರು. ದೇಶದಲ್ಲಿಯೇ ಮೊದಲಬಾರಿಗೆ ಶಿವನಸಮುದ್ರದ ಬಳಿ ಕಾವೇರಿ ನದಿ ತಟದಲ್ಲಿ ಜಲ ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪಿಸಿ ನಾಡಿಗೆ ಬೆಳಕು ಕೊಟ್ಟವರು ಒಡೆಯರರಾಗಿದ್ದಾರೆ”.
ಪ್ರೊ. ಪಿ.ಸಿ. ನಾಗೇಶ್, ವಿದ್ಯಾರ್ಥಿ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕರು.
“ಪ್ರಾಥಮಿಕ ಮತ್ತು ಮಧ್ಯಮಿಕ ಶಿಕ್ಷಣವನ್ನು ಉಚಿತ ಮತ್ತು ಕಡ್ಡಾಯಗೊಳಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್, ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಗೆ ರುವಾರಿಗಳಾಗಿದ್ದರು”.
ಶೇಷಾದ್ರಿ ಜಿ.ಸಿ, ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರು.



