ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ ಎದುರಾಗಿದ್ದು, ಜಿಲ್ಲೆಯನ್ನು ತಕ್ಷಣವೇ ‘ಬರಪೀಡಿತ’ ಎಂದು ಘೋಷಿಸಬೇಕು ಹಾಗೂ ರೈತರ ಮತ್ತು ಮಹಿಳಾ ರೈತರ ವಿವಿಧ ತುರ್ತು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ರೈತ ಸಂಘದ ಮಹಿಳಾ ರಾಜ್ಯ ಅಧ್ಯಕ್ಷೆ ಶ್ರೀಮತಿ ಶಾಂತಾ ಶಾಂತ್ ಅಶೋಕ್ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಸಂಸ್ಥಾಪಕರಾದ ಬಾಬಾ ಗೌಡ ಪಾಟೀಲ ಅವರ ಆಶಯಗಳಂತೆ ಕಾರ್ಯನಿರ್ವಹಿಸುತ್ತಿರುವ ರೈತ ಸಂಘವು, ಜಿಲ್ಲೆಯಲ್ಲಿ ಎದುರಾಗಿರುವ ಭೀಕರ ಪರಿಸ್ಥಿತಿಯನ್ನು ಗಮನಕ್ಕೆ ತಂದು ಸರ್ಕಾರಕ್ಕೆ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ ಎಂದು ಅವರು ತಿಳಿಸಿದರು.
ತಕ್ಷಣ ಬರಪೀಡಿತ ಘೋಷಣೆ ಹಾಗೂ ಪರಿಹಾರ:
ಜಿಲ್ಲೆಯಲ್ಲಿ ಈ ವರ್ಷ ಶೇಕಡಾ 20ಕ್ಕಿಂತ ಹೆಚ್ಚು ಮಳೆ ಕೊರತೆಯಾಗಿದೆ. ಭದ್ರಾ ಹಾಗೂ ವಾಣಿವಿಲಾಸ ಜಲಾಶಯಗಳಲ್ಲಿಯೂ ನೀರಿನ ಅಭಾವ ತೀವ್ರವಾಗಿದೆ. ಆದ್ದರಿಂದ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ, ಒಣ ಭೂಮಿಗೆ (ಖುಷ್ಕಿ) ಎಕರೆಗೆ 25,000 ಮತ್ತು ನೀರಾವರಿ ಭೂಮಿಗೆ ಎಕರೆಗೆ 35,000 ಪರಿಹಾರ ನೀಡಬೇಕು.
ವೈಯಕ್ತಿಕ ಗ್ಯಾರಂಟಿ ಬದಲಿಗೆ ಸಾಮೂಹಿಕ ಅಭಿವೃದ್ಧಿ:
ವೈಯಕ್ತಿಕ ಗ್ಯಾರಂಟಿ ಯೋಜನೆಗಳಿಗಿಂತ ಸಾಮೂಹಿಕ ಅಭಿವೃದ್ಧಿಗೆ ಆದ್ಯತೆ ನೀಡಿ. ಕೆರೆ ತುಂಬಿಸುವ ಯೋಜನೆಗಳು, ಗೋದಾಮುಗಳು ಹಾಗೂ ಗ್ರಾಮೀಣ ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗೆ ನೇರವಾಗಿ ಅನುದಾನ ಬಿಡುಗಡೆ ಮಾಡಬೇಕು.
ಮಹಿಳಾ ರೈತರಿಗೆ ಸಾಲ ಹಾಗೂ ಯಶಸ್ವಿನಿ ಸೌಲಭ್ಯ:
ಮಹಿಳಾ ಸಹಕಾರ ಸಂಘಗಳು ಮತ್ತು ಮಹಿಳಾ ಸ್ವಸಹಾಯ ಗುಂಪುಗಳಿಗೆ ಟಿಎಪಿಸಿಎಂಎಸ್ ಹಾಗೂ ಸಹಕಾರ ಸಂಘಗಳ ಮೂಲಕ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಬೇಕು. ಜೊತೆಗೆ ‘ಯಶಸ್ವಿನಿ’ ಕಾರ್ಡ್ ವಿತರಣೆಯನ್ನು ಶೀಘ್ರಗೊಳಿಸಬೇಕು.
ವಿದ್ಯುತ್ ಖಾಸಗೀಕರಣ ವಾಪಸ್:
ವಿದ್ಯುತ್ ಖಾಸಗೀಕರಣ ಕಾಯಿದೆಯನ್ನು ವಾಪಸ್ ಪಡೆಯಬೇಕು ಹಾಗೂ ಕೃಷಿ ಪಂಪ್ಸೆಟ್ಗಳಿಗೆ ದಿನಕ್ಕೆ 10 ಗಂಟೆ ನಿರಂತರ ಉಚಿತ ವಿದ್ಯುತ್ ಪೂರೈಸಬೇಕು ಎಂದು ಅವರು ಆಗ್ರಹ ಮಾಡಿದರು.
"ರಸ್ತೆ ಇಲ್ಲದ ಗ್ರಾಮಕ್ಕೆ ಅಭಿವೃದ್ಧಿ ಇಲ್ಲ, ಸಾಲ ಇಲ್ಲದ ರೈತನಿಗೆ ಬದುಕಿಲ್ಲ" ಎನ್ನುವುದು ನಮ್ಮ ನಾಯಕ ಬಾಬಾ ಗೌಡ ಪಾಟೀಲ ಅಭಿಪ್ರಾಯವಾಗಿತ್ತು ಇದು ಅವರು ತಿಳಿಸಿದರು.
ಈ ಎಲ್ಲಾ ನ್ಯಾಯಯುತ ಬೇಡಿಕೆಗಳನ್ನು ಪ್ರಸಕ್ತ ಬಜೆಟ್ನಲ್ಲೇ ಜಾರಿಗೊಳಿಸಿ ಚಿತ್ರದುರ್ಗ ಜಿಲ್ಲೆಯ ಸಂಕಷ್ಟದಲ್ಲಿರುವ ರೈತರನ್ನು ರಕ್ಷಿಸಬೇಕು ಎಂದು ಸಂಘಟನೆಯ ಪದಾಧಿಕಾರಿಗಳು ಮನವಿಯಲ್ಲಿ ವಿನಂತಿಸಿದ್ದಾರೆ.. ಸುದ್ದಿಗೋಷ್ಠಿಯಲ್ಲಿ ಶಂಕರಪ್ಪ ಇತರರು ಇದ್ದರು.



