Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಾ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
" ನೀವು ಹೆಚ್ಚು ತಿಳಿದುಕೊಳ್ಳುತ್ತಾ ಹೋದಂತೆ
, ಗೊತ್ತಿಲ್ಲದಿರುವುದು ಬಹಳಷ್ಟಿದೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ " ಅರಿಸ್ಟಾಟಲ್.......

" ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಾ " ವಚನ ಸಂಸ್ಕೃತಿ.......ಮನೋ ನಿಯಂತ್ರಣ ಮತ್ತು ಮನಸ್ಸಿನ ವಿಶಾಲತೆ........ ಮನಸ್ಸಿಗೆ ಏನೋ ಕಿರಿಕಿರಿಯಾಗುತ್ತಿದೆಯೇ ? ಒಳಗೊಳಗೆ ಹೇಳಿಕೊಳ್ಳಲಾಗದ ಅಸಹನೆ ಉಂಟಾಗುತ್ತಿದೆಯೇ ?ಕೌಟುಂಬಿಕ ಸಂಬಂಧಗಳಲ್ಲಿ ಸಹಿಸಲಾಗದ ಮಾನಸಿಕ ಹಿಂಸೆಯಾಗುತ್ತಿದೆಯೇ ?

ಹೊರ ಜಗತ್ತಿನ ನಮ್ಮ ಸುತ್ತಮುತ್ತಲಿನ ಅನೇಕ ಘಟನೆಗಳು ನಮ್ಮ ಇಚ್ಚೆಗೆ ವಿರುದ್ಧವಾಗಿ ಘಟಿಸುತ್ತಿದೆಯೇ ? ಮಾಧ್ಯಮ, ಗೆಳೆತನ, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ನಂಬಿಕೆಗೆ ವಿರೋಧ ವ್ಯಕ್ತವಾಗುತ್ತಿದೆಯೇ ?

ಧರ್ಮ, ಜಾತಿ, ಭಾಷೆ, ಹಣಕಾಸು, ಪಕ್ಷ, ಸಂಪ್ರದಾಯ, ಸಿದ್ದಾಂತಗಳ ವಿಷಯದಲ್ಲಿ ಏನೋ ಒಂತರಾ ಕಸಿವಿಸಿ ಎನಿಸುವಂತೆ ಮನಸ್ಸಿಗೆ ತಳಮಳವಾಗುತ್ತಿದೆಯೇ ?

ಕೆಲವು ವಿಷಯಗಳ ಬಗ್ಗೆ ಬೇಗ ಕೋಪ ಬಂದು ಪ್ರತಿಕ್ರಿಯಿಸಿ ವಿರೋಧಿಗಳ ಸದ್ದಡಗಿಸಬೇಕು ಎಂಬ ಅಭಿಪ್ರಾಯ ಉಂಟಾಗಿ ಬಿಪಿ ಏರಿಕೆಯಾಗುತ್ತದೆಯೇ ?...

 ಈ ರೀತಿಯ ಕೆಲವು ಅಥವಾ ಎಲ್ಲವೂ ನಿಮ್ಮಲ್ಲಿ ಉಂಟಾಗುತ್ತಿದ್ದರೆ  ಅದನ್ನು ನಿಯಂತ್ರಿಸಿಕೊಳ್ಳಲು ಕೆಲವು ಸಲಹೆ ರೂಪದ ಕಿವಿಮಾತುಗಳು ನಿಮಗಾಗಿ........

ನಿಮ್ಮ ಮನಸ್ಸನ್ನು ವಿಶಾಲಗೊಳಿಸಿಕೊಂಡರೆ ಖಂಡಿತವಾಗಿ ಈ ಸಮಸ್ಯೆಗಳಿಗೆ ಸಹಜ ಸ್ವಾಭಾವಿಕವಾಗಿ ಪರಿಹಾರ ಕಂಡುಕೊಳ್ಳಬಹುದು ಮತ್ತು ನೆಮ್ಮದಿಯಿಂದ ಬದುಕಿನ ಸಾರ್ಥಕತೆಯತ್ತ ಹೆಜ್ಜೆ ಹಾಕಬಹುದು.

ಹೇಗೆ ಮನಸ್ಸನ್ನು ವಿಶಾಲ ಮಾಡಿಕೊಳ್ಳುವುದು ? 1) ನಮ್ಮ ಮೂಲ ನಿಷ್ಠೆಯನ್ನು ಪ್ರಕೃತಿಗೆ ವರ್ಗಾಯಿಸುವುದು........

ನಮ್ಮನ್ನು ಹುಟ್ಟಿಸಿರುವ ಅಪ್ಪ ಅಮ್ಮ, ನಾವು ಹುಟ್ಟಿಸುವ ಮಕ್ಕಳು ಸೇರಿ ಎಲ್ಲಾ ಸಂಬಂಧಗಳು ಒಂದು ಸಾಮಾಜಿಕ ವ್ಯವಸ್ಥೆಯೇ ಹೊರತು ಅದೇ ಅಂತಿಮವಲ್ಲ. ನಾವು ಸೃಷ್ಟಿಯ ಪ್ರತ್ಯೇಕ ಜೀವಿ. ನಮ್ಮ ಅಸ್ತಿತ್ವ ಸ್ವತಂತ್ರ. ಹುಟ್ಟಿಗೆ  ಗಂಡು ಹೆಣ್ಣು ಒಂದು ಮಾರ್ಗ. ಅವರನ್ನು ವ್ಯಾವಹಾರಿಕ ಗುರುತಿಗಾಗಿ ತಂದೆ ತಾಯಿ, ಮಗ ಮಗಳು ಮುಂತಾದ ಹೆಸರಿನಿಂದ ಕರೆಯಲಾಗುತ್ತದೆ. ಅದರ ಅರ್ಥ ನಾವು ಈ ಯಾವ ಸಂಬಂಧಗಳ ನಿಯಂತ್ರಣಕ್ಕೆ ಒಳಪಡಬಾರದು ಅಥವಾ ಒಳಪಡಿಸಬಾರದು. ಪರಸ್ಪರ ಪ್ರೀತಿ, ವಿಶ್ವಾಸ, ಸಹಕಾರ ಇರಬೇಕೆ ಹೊರತು ಹೆಚ್ಚಿನ ನಿರೀಕ್ಷೆ ನಿಯಂತ್ರಣ ನಮ್ಮ ದುಃಖ ಹೆಚ್ಚಿಸುತ್ತದೆ. ಅಪ್ಪ ಮಗ ಮಗಳು ನಮ್ಮ ವಿರುದ್ಧ ಅಭಿಪ್ರಾಯ ಅಥವಾ ನಡವಳಿಕೆ ಪ್ರದರ್ಶಿಸಿದರೆ ಅದನ್ನು ಸಹಜವಾಗಿ ಸ್ವೀಕರಿಸಿ ಮುಂದೆ ಹೋಗಬೇಕು. ಅವರು ನಮ್ಮವರು ನಮ್ಮ ವಿರುದ್ಧವಿದ್ದಾರೆ ಎಂದು ಕೊರಗುತ್ತಾ ಇರಬಾರದು. ನಾವು ಇರುವುದು ನಮಗಾಗಿ ಮಾತ್ರ.

 2) ಹುಟ್ಟಿದ ತಕ್ಷಣ ನಮ್ಮ ಮೇಲೆ ನಮ್ಮ ಧರ್ಮ, ಜಾತಿ, ಭಾಷೆ, ವಂಶ ಎಲ್ಲವೂ ಹೇರಲ್ಪಡುತ್ತದೆ. ಇದು ಸ್ವಾಭಾವಿಕವಲ್ಲ............

ಸಮಾಜ ಮತ್ತು ಆಡಳಿತದ ಅನುಕೂಲಕ್ಕಾಗಿ ರೂಪಿತವಾದ ನೀತಿ ನಿಯಮಗಳು. ಇವುಗಳ ಅರಿವು ಇರಬೇಕು. ಆದರೆ ಅದೇ ಶ್ರೇಷ್ಠ, ಅದೇ ಅಂತಿಮ, ಅದನ್ನು ಉಳಿಸುವುದೇ ನಮ್ಮ ಕರ್ತವ್ಯ ಮುಂತಾದ ಭ್ರಮೆಗೆ ಒಳಗಾಗಬಾರದು. ಅದೊಂದು ಅವಶ್ಯ ಮತ್ತು ಅನಿವಾರ್ಯ ಅಂಶಗಳೇ ಹೊರತು ನಾವು ಅಲ್ಲಿ ಹುಟ್ಟಿದ ಮಾತ್ರಕ್ಕೆ ಅವೆಲ್ಲವೂ ಶ್ರೇಷ್ಠ ಎಂದು ಭಾವಿಸಬಾರದು. ಆಗ ಇದರಿಂದ ಇತರರು ನಮ್ಮಂತೆ ಎಂಬ ಸಹಕಾರ ಭಾವ ಮೂಡುತ್ತದೆ. ದ್ವೇಷದ ಭಾವ ಕಡಿಮೆಯಾಗುತ್ತದೆ.

 

3) ಇದು ಅತಿಮುಖ್ಯವಾದುದು. ನಾವು ನಮ್ಮ ಅರಿವಿನ - ಜ್ಞಾನದ - ತಿಳಿವಳಿಕೆಯ ಮೂಲವನ್ನು ಸ್ಪಷ್ಟವಾಗಿ ಮತ್ತು ವೈಯಕ್ತಿಕವಾಗಿ ಗುರುತಿಸಬೇಕು.......‌

ಅಂದರೆ ನಮ್ಮ ತಿಳಿವಳಿಕೆಯ ಮೇಲೆ ಹೆಚ್ಚು ಪ್ರಭಾವ ಬೀರಿರುವುದು ಯಾವುದು ಎಂದು ಗಮನಿಸಬೇಕು. ತಂದೆ ತಾಯಿ ತಾತಾ ಅಜ್ಜಿ ಮಾವ ದೊಡ್ಡಪ್ಪ ಅಣ್ಣ ಅಕ್ಕ ಮುಂತಾದ ಸಂಬಂಧಗಳೇ,

ಅಥವಾ ಶಾಲೆ ಮತ್ತು ಅಲ್ಲಿನ ಉಪಾಧ್ಯಾಯರು ಅವರಲ್ಲಿ ಒಬ್ಬರು ಅಥವಾ ಎಲ್ಲರೂ ಆಗಿರಬಹುದು ಅಥವಾ ಬೀದಿಯ - ಊರಿನ ಆಕರ್ಷಕ ವ್ಯಕ್ತಿತ್ವದ ನಾಯಕ ಯಾರಾದರೂ ಆಗಿರಬಹುದು ಅಥವಾ ಪೌರಾಣಿಕದ, ಇತಿಹಾಸದ, ವರ್ತಮಾನದ ರಾಜಕೀಯ ಸಾಮಾಜಿಕ ಧಾರ್ಮಿಕ, ಸಿನಿಮಾ, ಸಾಹಿತ್ಯ, ಸಂಗೀತ ಅಥವಾ ಇತರೆ ಯಾರಾದರೂ ಆಗಿರಬಹುದು ಅಥವಾ ನೀವು ಹುಟ್ಟಿದ, ಓದಿದ ಯಾವುದಾದರೂ ಧರ್ಮ ಅಥವಾ ಧರ್ಮ ಗ್ರಂಥಗಳಾಗಿರಬಹುದು ಅಥವಾ ಬುದ್ಧ ಬಸವ ವಿವೇಕಾನಂದ ಆಚಾರತ್ರಯರು, ಗಾಂಧಿ, ಅಂಬೇಡ್ಕರ್ ರೀತಿಯ ಯಾರಾದರೂ ಆಗಿರಬಹುದು ಅಥವಾ ನೀವು ಬೆಳೆದ ಅಥವಾ ನೋಡಿದ ಪರಿಸರವೇ ಆಗಿರಬಹುದು. ಇದರಲ್ಲಿ ಒಂದು ಅಥವಾ ಎಲ್ಲವೂ ಆಗಿರಬಹುದು. ಇದನ್ನು ನಾವು ಮನನ ಮಾಡಿಕೊಂಡರೆ ನಮಗೆ ಯೋಚಿಸುವ ದಿಕ್ಕು ಸುಲಭವಾಗಿ ಸಿಗುತ್ತದೆ. ಹೇಗೆಂದರೆ ನಾವು ಯೋಚಿಸುವುದು ಒಂದು ಮೂಲವಾದರೆ ಅದರ ಇನ್ನಷ್ಟು ಮೂಲಗಳು ಇವೆ ಎಂದು ಅರ್ಥಮಾಡಿಕೊಳ್ಳಬಹುದು. ಇದರಿಂದಾಗಿ ಮನಸ್ಸನ್ನು ವಿಶಾಲ ಗೊಳಿಸಿಕೊಳ್ಳಲು ತುಂಬಾ ತುಂಬಾ ಸಹಾಯವಾಗುತ್ತದೆ.....

4) ಈ ಎಲ್ಲದರ ನಡುವೆ ವ್ಯಾವಹಾರಿಕ ಜಗತ್ತಿನ ಅನಿವಾರ್ಯತೆಯನ್ನು ಮರೆಯಬಾರದು...........
ಅದು ಸರಿಯಾಗಿ ಇಲ್ಲದಿದ್ದರೆ ಮೇಲೆ ಹೇಳಿದ ವಿಷಯಗಳು ವಾಸ್ತವದಲ್ಲಿ ವಿಫಲವಾಗುವ ಸಾಧ್ಯತೆಯೇ ಹೆಚ್ಚು. ಬದಲಾವಣೆಗಳನ್ನು ಸ್ವೀಕರಿಸುತ್ತಾ, ನಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಹೊಂದಿಸಿಕೊಳ್ಳುತ್ತಾ ಅದರಲ್ಲಿ ನಿರಂತರತೆಯನ್ನು ಕಾಪಾಡಬೇಕು. ಮುಖ್ಯವಾಗಿ ಫಾಸ್ಟ್ ಫುಡ್, ಫಾಸ್ಟ್ ಲೈಫ್ ಸಂಸ್ಕೃತಿಯನ್ನು ಆದಷ್ಟೂ ತಿರಸ್ಕರಿಸಬೇಕು. ಇಂದಿನ ನಮ್ಮ ಬಹುತೇಕ ಅಸಹನೆ ಅತೃಪ್ತಿಗೆ ಇದೇ ಬಹುಮುಖ್ಯ ಕಾರಣವಾಗಿದೆ. ಒಮ್ಮೆ ಇದನ್ನು ನಿಯಂತ್ರಿಸಿ ಸಾಧ್ಯವಾದಷ್ಟು ತಾಳ್ಮೆಗೆ ಶರಣಾದರೆ ಮನಸ್ಸು ನಿರ್ಮಲತೆಯತ್ತ ಸಾಗುತ್ತದೆ. ಆಗ ಸಹಜವಾಗಿ ಒತ್ತಡ ಕಡಿಮೆಯಾಗಿ ಮನಸ್ಸು ವಿಶಾಲವಾಗುತ್ತದೆ....

5) ಈ ಎಲ್ಲವನ್ನೂ ಸಾಧ್ಯವಾಗಿಸಲು ನಿಮ್ಮ ದೈಹಿಕ ಆರೋಗ್ಯ ಬಹುಮುಖ್ಯ........ ಅದಿಲ್ಲದೇ ಯಾವುದನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅದನ್ನು ನಮ್ಮ ನಮ್ಮ ಅವಕಾಶ ಮತ್ತು ಮಿತಿಯಲ್ಲಿ ಕಡ್ಡಾಯವಾಗಿ ಸೈನಿಕ ಶಿಸ್ತು ರೂಪಿಸಿಕೊಳ್ಳಲು ಪ್ರಯತ್ನಿಸಲೇಬೇಕು. ಏಕೆಂದರೆ ಬಹುತೇಕ ದುರ್ಬಲ ಆರೋಗ್ಯದ ಜನರು ಹೆಚ್ಚು ಉದ್ವೇಗ ಮತ್ತು ನಿರಾಸೆಗೆ ಒಳಗಾಗುತ್ತಾರೆ. ಮನಸ್ಸಿನ ನಿಯಂತ್ರಣ ಕಳೆದುಕೊಂಡು ಇತರರನ್ನು ದೂಷಿಸುತಾರೆ. ಮನಸ್ಸಿನ ವಿಶಾಲತೆಗೆ ಇದು ಅಡ್ಡಿಯಾಗಬಹುದು.....

ಕೊನೆಯದಾಗಿ, ಇದಷ್ಟೇ ಅಲ್ಲದೆ ಇನ್ನೂ ನಿಮ್ಮ ಒಳ ಮನಸ್ಸಿಗೆ ಹೊಳೆಯುವ ಯಾವುದಾದರೂ ವಿಷಯವಾಗಿರಬಹುದು. ಅದನ್ನು ಉಪಯೋಗಿಸಿಕೊಂಡು ನಿಮ್ಮ ಮನಸ್ಸುಗಳನ್ನು ವಿಶಾಲಗೊಳಿಸಿಕೊಳ್ಳಿ. ಖಂಡಿತವಾಗಿಯೂ ನಿಮ್ಮ ಜೀವನಮಟ್ಟ ತನ್ನಿಂದ ತಾನೇ ‌ಈಗಿರುವ ಸ್ಥಾನಕ್ಕಿಂತ ಉತ್ತಮ ಮಟ್ಟಕ್ಕೆ ಏರುತ್ತದೆ. ಆ ಪ್ರಜ್ಞೆಯೇ ಒಂದು ಅದ್ಬುತ ಮಾನವ ಪ್ರೇಮದ ಸಂಕೇತ. ಸಮಾಜ ಪ್ರೀತಿಯ, ದೇಶ ಭಕ್ತಿಯ ಅನುಸಂಧಾನ. ಸಾಧ್ಯವಾದರೆ ಪ್ರಯತ್ನಿಸಿ........
ಲೇಖನ-ವಿವೇಕಾನಂದ. ಎಚ್. ಕೆ. 9844013068........


 

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ