ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಭಾರತಕ್ಕೆ ಸಂವಿಧಾನವನ್ನು ಪರಿಚಯಿಸಿ ೭೬ ವರ್ಷಗಳಾಗಿದ್ದರೂ ಇನ್ನು ಲಿಂಗ ತಾರತಮ್ಯ, ಅಸ್ಪೃಶ್ಯತೆಯನ್ನು ನೋಡುತ್ತಿದ್ದೇವೆಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹುಬ್ಬಳ್ಳಿಯ ಉಪ ಕುಲಪತಿ ಪ್ರೊ.ಸಿ.ಬಸವರಾಜು ಕಳವಳ ವ್ಯಕ್ತಪಡಿಸಿದರು.
ಸರಸ್ವತಿ ಕಾನೂನು ಕಾಲೇಜಿನಲ್ಲಿ ಐ.ಕ್ಯು.ಎ.ಸಿ. ಸಹಯೋಗದೊಂದಿಗೆ ಶನಿವಾರ ಏರ್ಪಡಿಸಲಾಗಿದ್ದ ಲಿಂಗಾಧಾರಿತ ಹಿಂಸೆಯನ್ನು ಎದುರಿಸುವುದು ಸುರಕ್ಷತೆ ಮತ್ತು ನ್ಯಾಯಕ್ಕಾಗಿ ತಂತ್ರಗಳು ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಲಿಂಗ ತಾರತಮ್ಯ ಹೆಚ್ಚಾಗಿರುವುದರ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇನ್ನಾದರೂ ನ್ಯಾಯ ಸಿಕ್ಕಿಲ್ಲ. ಸಂವಿಧಾನ ಸಂಸ್ಕೃತಿಯನ್ನುಪ್ರತಿಯೊಬ್ಬರು ಗೌರವಿಸಬೇಕಿದೆ. ಏಕೆಂದರೆ ನಾವುಗಳು ಬದುಕುತ್ತಿರುವುದು ನಾಗರೀಕ ಸಮಾಜದಲ್ಲಿ ಎನ್ನುವುದನ್ನು ಮರೆಯುವಂತಿಲ್ಲ. ಲಿಂಗ ತಾರತಮ್ಯ ಇನ್ನು ಜೀವಂತವಾಗಿದೆ. ತಾಯಿ ಗರ್ಭದಲ್ಲಿಯೇ ಹೆಣ್ಣು ಭ್ರೂಣ ಹತ್ಯೆಯಾಗುತ್ತಿರುವುದು ನಿಂತಿಲ್ಲ. ತಾರತಮ್ಯದ ಕುರಿತು ಕೇವಲ ಕಾನೂನು ವಿದ್ಯಾರ್ಥಿಗಳಿಗಷ್ಟೆ ಅಲ್ಲ. ಸಮಾಜದಲ್ಲಿನ ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಲಿಂಗ ತಾರತಮ್ಯ, ಪಕ್ಷಪಾತ ಮಾಡುತ್ತಿರುವುದನ್ನು ಎಲ್ಲಾ ಕಡೆ ನೋಡುತ್ತಿದ್ದೇವೆ. ನಾವೆಲ್ಲರೂ ಹೆಣ್ಣಿಗೆ ಗೌರವ ಕೊಡಬೇಕು. ಹಾಗೆ ಸಮಾನತೆ ನ್ಯಾಯ ಸಿಗುವಂತೆ ಮಾಡಬೇಕು. ಮಹಿಳೆಯರು, ಮಕ್ಕಳು ಎಲ್ಲರಲ್ಲಿಯೂ ಲಿಂಗ ತಾರತಮ್ಯವನ್ನು ಕಾಣಬಹುದಾಗಿದೆ. ಮಹಿಳೆಯರ ಹಕ್ಕುಗಳನ್ನು ನಾಶಗೊಳಿಸುವ ಮೂಲಕ ಕೀಳಾಗಿ ಕಾಣಲಾಗುತ್ತಿದೆ. ಮಹಿಳೆಯನ್ನು ಭೂಮಾತೆ ಎಂದು ಕರೆದರೆ ಸಾಲದು. ಮಹಿಳೆಯ ರಕ್ಷಣೆ ಎಲ್ಲರ ಹೊಣೆಗಾರಿಕೆ ಎಂದು ತಿಳಿಸಿದರು.
ಲಿಂಗ ತಾರತಮ್ಯವನ್ನು ತೊಡೆದು ಹಾಕಿ ಸಮ ಸಮಾಜ ನಿರ್ಮಿಸುವತ್ತ ನೀವುಗಳು ಹೆಚ್ಚಿನ ಗಮನ ಕೊಡಬೇಕೆಂದು ಕಾನೂನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಶ್ಚಿಮ ಬಂಗಾಳದ ಲಾ ಪ್ರೊಫೆಸರ್ ಶ್ರೀನಿವಾಸಲು ಎನ್.ಎಸ್. ಮಾತನಾಡಿ ಮಹಿಳೆಯರ ಮೇಲಾಗುತ್ತಿರುವ ತೊಂದರೆ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಲಿಂಗ ತಾರತಮ್ಯವನ್ನು ತಡೆಗಟ್ಟುವ ಕೆಲಸವಾಗಬೇಕು. ಶಬರಿ ಮಲೆಯ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಹೆಣ್ಣು ಮಕ್ಕಳಿಗೆ ಪ್ರವೇಶ ನೀಡಬಾರದೆಂದು ಎಲ್ಲಿಯೂ ಕಾನೂನಿಲ್ಲ. ಅದೇ ರೀತಿ ಮಹಿಳೆಯರು ಮಸೀದಿ, ಸಮಾಧಿಗೆ ಹೋಗಬಾರದೆಂಬ ಕಟ್ಟುಪಾಡುಗಳನ್ನು ಹಿಂದಿನಿಂದಲೂ ವಿಧಿಸುತ್ತ ಬರಲಾಗುತ್ತಿದೆ. ಇದು ಲಿಂಗ ತಾರತಮ್ಯಕ್ಕಿಂತಲೂ ಹೆಚ್ಚು ಅಪಾಯಕಾರಿ. ಎಲ್ಲಿ ಹೆಣ್ಣಿರುತ್ತಾಳೋ ಅಲ್ಲಿ ದೇವತೆಗಳು ನೆಲೆಸಿರುತ್ತದೆಂದು ಬಾಯಿ ಮಾತಿನಲ್ಲಿ ಹೇಳಿದರೆ ಪ್ರಯೋಜನವಿಲ್ಲ. ಹೆಣ್ಣನ್ನು ಅವಮಾನಿಸುತ್ತಿರುವುದು ಮೊದಲು ನಿಲ್ಲಬೇಕು ಎಂದು ಹೇಳಿದರು.
ಹೆಣ್ಣಿಗೆ ಮಾನಸಿಕವಾಗಿ ಕಿರುಕುಳ ನೀಡುವುದು ದೊಡ್ಡ ಹಿಂಸೆಯಿದ್ದಂತೆ. ಹೆಣ್ಣು ಕೂಡ ಉನ್ನತ ಸ್ಥಾನಕ್ಕೇರುತ್ತಿದ್ದರೂ ಲಿಂಗ ತಾರತಮ್ಯ ಮಾತ್ರ ಇನ್ನು ನಿಂತಿಲ್ಲ. ಎಲ್ಲಾ ಕಡೆ ಪ್ರತಿಷ್ಠೆ ಆವರಿಸಿದೆ. ಆತ್ಮಾಭಿಮಾನ, ದುರಭಿಮಾನ ಜಾಸ್ತಿಯಾಗಿರುವುದರಿಂದ ಕೆಲವೊಮ್ಮೆ ಕಾನೂನು ದುರ್ಬಳಕೆಯಾಗುತ್ತದೆ. ಮಹಿಳೆಯರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ತಡೆಗಟ್ಟಬೇಕಿದೆ. ಇಲ್ಲವಾದಲ್ಲಿ ಮಹಿಳೆಯ ಸಬಲೀಕರಣ ಅಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದರು.
ಎಲ್ಲೆಡೆ ಕಾನೂನು ಅನುಷ್ಟಾನಗೊಳ್ಳುತ್ತಿದೆ. ಕೆಲವರು ತಮ್ಮ ರಕ್ಷಣೆಗಾಗಿ ಕಾಯಿದೆಗಳನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಭಾರತೀಯ ಸನಾತನ ಸಂಸ್ಕೃತಿ ಇಂದಿಗೂ ಪ್ರೀತಿ ವಿಶ್ವಾಸದ ಮೇಲೆ ನಿಂತಿದೆ. ಗ್ರಾಮೀಣ ಭಾಗ, ಸಣ್ಣ ಸಣ್ಣ ಊರುಗಳಲ್ಲಿ ಲಿಂಗ ತಾರತಮ್ಯ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು.
ರಾಜ್ಯಸಭೆ ಮಾಜಿ ಸದಸ್ಯರು ಹಾಗೂರ ಸರಸ್ವತಿ ಕಾನೂನು ಕಾಲೇಜಿನ ಅಧ್ಯಕ್ಷರಾದ ಹೆಚ್.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮುಕ್ತ ಗಂಗೋತ್ರಿ ಮೈಸೂರಿನ ಸ್ಟಡಿಸ್ ಮತ್ತು ಸಂಶೋಧನಾ ಇಂಗ್ಲಿಷ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್
ಡಾ.ಮಧುರ ಎ.ಎಸ್. ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಎಸ್.ಸುಧಾದೇವಿ, ಹಿರಿಯ ನ್ಯಾಯವಾದಿ ಡಿ.ಕೆ.ಶೀಲಾ ಇವರುಗಳು ವೇದಿಕೆಯಲ್ಲಿದ್ದರು.
ಡಾ.ಎನ್.ಡಿ.ಗೌಡ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಅಭಿನೇತ್ರಿ ಪಟವರ್ಧನ್ ವಂದಿಸಿದರು. ಸರಸ್ವತಿ ಕಾನೂನು ಕಾಲೇಜಿನ ಬೋಧಕ ವರ್ಗದವರು ಹಾಗೂ ಕಾನೂನು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.


