ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
"ಉದ್ಯೋಗ ನೀಡುವ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳುತ್ತಿರುವುದರಿಂದ ಸಾರ್ವಜನಿಕ ಹೂಡಿಕೆ ಕುಸಿಯುತ್ತಿದೆ. ಹೀಗಾದರೆ ಉದ್ಯೋಗ ಸೃಷ್ಟಿ ಹೇಗೆ ಸಾಧ್ಯ? ಸರ್ಕಾರಕ್ಕೆ ತಾಯಿ ಗುಣವಿರಬೇಕು ಮತ್ತು ಜನರನ್ನು ಸಲಹುವ ಜವಾಬ್ದಾರಿ ಇರಬೇಕು. ವ್ಯವಸ್ಥೆಯನ್ನು ಪ್ರಶ್ನೆ ಮಾಡುವವರನ್ನು ಕ್ರಿಮಿನಲ್ಗಳಂತೆ ನೋಡುವುದನ್ನು ನಿಲ್ಲಿಸಬೇಕು," ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಟಿ.ಆರ್. ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ನಿವೃತ್ತ ಶಿಕ್ಷಕರ ಒಕ್ಕೂಟದ ಜಿಲ್ಲಾ ಘಟಕ, ರೋಟರಿ ಕ್ಲಬ್ ಚಿನ್ಮೂಲಾದ್ರಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ವತಿಯಿಂದ ಶನಿವಾರ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ "ಭಾರತದಲ್ಲಿ ನಿರುದ್ಯೋಗಿಗಳು: ಆದವರೋ ಇಲ್ಲ ಮಾಡಲ್ಪಟ್ಟವರೋ?" ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
"ನಿರುದ್ಯೋಗಕ್ಕೆ ದೊಡ್ಡ ಸ್ತರಗಳಿವೆ. ಉನ್ನತ ಪದವಿ ಪಡೆದವರಿಗೂ ಇಂದು ಉದ್ಯೋಗ ಸಿಗುತ್ತಿಲ್ಲ. ಲೇಬರ್ ಮಾರ್ಕೆಟ್ (ಕಾರ್ಮಿಕ ಮಾರುಕಟ್ಟೆ) ದೊಡ್ಡ ತಾರತಮ್ಯದಿಂದ ಕೂಡಿದೆ. ನೋಟು ಅಮಾನ್ಯೀಕರಣದ ಬಳಿಕ ಅಸಂಘಟಿತ ವಲಯ ದೊಡ್ಡ ಆಘಾತ ಅನುಭವಿಸಿದೆ. ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು ಅಸಂಘಟಿತ ವಲಯಕ್ಕೆ ಸೇರಿದವರಾಗಿದ್ದು, ಇಂದು ಕೌಶಲ್ಯಕ್ಕೂ ಮತ್ತು ಉದ್ಯೋಗಕ್ಕೂ ನಡುವೆ ಯಾವುದೇ ಸಂಬಂಧವಿಲ್ಲದಂತಾಗಿದೆ," ಎಂದರು.
"ಸರ್ಕಾರ ಸಾಲ ಸೌಲಭ್ಯ, ಸಬ್ಸಿಡಿ, ಕೌಶಲ್ಯ ತರಬೇತಿಗಳನ್ನು ನೀಡುತ್ತಿದೆಯಾದರೂ, ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವ ಮುಖ್ಯ ಜವಾಬ್ದಾರಿಯಿಂದ ದೂರ ಉಳಿದಿದೆ. ಸರ್ಕಾರದಿಂದ ಉದ್ಯೋಗ ಸೃಷ್ಟಿಸುವ ಒಂದೇ ಒಂದು ಕಾರ್ಯಕ್ರಮವಿಲ್ಲದಿದ್ದರೂ ಜನ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ದಾರೆ." ಪ್ರೊ. ಟಿ.ಆರ್. ಚಂದ್ರಶೇಖರ್.
ನಿವೃತ್ತ ಪ್ರಾಂಶುಪಾಲ ಹಾಗೂ ಆರ್ಥಿಕ ಚಿಂತಕ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ಮಾತನಾಡಿ, "ದೇಶದಲ್ಲಿರುವ ಅಸಮಾನತೆಯ ವ್ಯವಸ್ಥೆ ಪ್ರಜಾಪ್ರಭುತ್ವದ ಲಕ್ಷಣವಲ್ಲ. ನಿವೃತ್ತ ನೌಕರರಿಗೆ ಪಿಂಚಣಿ ಕೊಡುವುದರಲ್ಲಿ ಭಾರತ ಜಗತ್ತಿನಲ್ಲಿಯೇ 52ನೇ ಕೊನೆಯ ಸ್ಥಾನದಲ್ಲಿದೆ. ನಾವೆಲ್ಲರೂ ಒಂದು ಮೂರ್ಖತನದ ವ್ಯವಸ್ಥೆಗೆ ಒಗ್ಗಿಕೊಂಡುಬಿಟ್ಟಿದ್ದೇವೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೇ ದೇಶದಲ್ಲಿ ನಿರುದ್ಯೋಗ ಇರುವುದನ್ನು ಒಪ್ಪಿಕೊಂಡಿದ್ದಾರೆ," ಎಂದು ತಿಳಿಸಿದರು.
ಭಾರತವು ಅತಿ ಹೆಚ್ಚು ಪದವೀಧರ ನಿರುದ್ಯೋಗಿಗಳನ್ನು ಹೊಂದಿರುವ ದೇಶವಾಗಿದೆ. ಶಿಕ್ಷಣವು ನಾಳಿನ ಬದುಕಿಗೆ ಗ್ಯಾರಂಟಿ ನೀಡುತ್ತದೆ ಎಂಬ ನಿಖರತೆಯನ್ನು ಮಕ್ಕಳಿಗೆ ತಿಳಿಸಬೇಕು.
ಶಿಕ್ಷಣದ ಜೊತೆಗೆ ಕೌಶಲ್ಯ ಶಿಕ್ಷಣವೂ ಒಂದು ಭಾಗವಾಗಬೇಕು. ಇಚ್ಛಿತ ಉದ್ಯೋಗವನ್ನು ಕೈಗೊಳ್ಳುವ ರೀತಿಯ ಶಿಕ್ಷಣ ಇಂದಿನ ಅಗತ್ಯವಾಗಿದೆ. ನಿರುದ್ಯೋಗವು ಕೌಟುಂಬಿಕ ಅಶಾಂತಿಗೆ ಕಾರಣವಾಗುತ್ತಿದ್ದು, ಸರ್ಕಾರಗಳು ಇದರ ಜವಾಬ್ದಾರಿ ಹೊರಬೇಕು ಎಂದು ಅವರು ಒತ್ತಾಯಿಸಿದರು.
ನಿವೃತ್ತ ಪ್ರಾಂಶುಪಾಲ ಹಾಗೂ ನಿವೃತ್ತ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಪ್ರೊ. ಟಿ.ಎಚ್. ಕೃಷ್ಣಮೂರ್ತಿ ಮಾತನಾಡಿ, "ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಒಂದು ಶಾಪವಾಗಿ ಪರಿಣಮಿಸಿದೆ. ಇದಕ್ಕೆ ಪ್ರಸ್ತುತ ವ್ಯವಸ್ಥೆಯ ವೈಫಲ್ಯವೇ ಪ್ರಮುಖ ಕಾರಣ. 'ಭಾರತದಲ್ಲಿ ನಿರುದ್ಯೋಗಿಗಳು ಆದವರೋ ಅಥವಾ ಮಾಡಲ್ಪಟ್ಟವರೋ?' ಎನ್ನುವುದು ಇನ್ನೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ," ಎಂದರು. ಸಂದರ್ಭಕ್ಕೆ ತಕ್ಕದಾದ ಇಂತಹ ಅರ್ಥಪೂರ್ಣ ಉಪನ್ಯಾಸ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಸೈನ್ಸ್ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷೆ ದಿಲ್ಶಾದ್ ಉನ್ನಿಸಾ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಬಿ.ಕೆ. ಶಿವರಶ್ಮಿ ಅಕ್ಕ, ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್.ಎಸ್.ಟಿ. ಸ್ವಾಮಿ ಉಪಸ್ಥಿತರಿದ್ದರು.



