ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ನೆಹರು ನಗರದ ಒಂದನೆ ಕ್ರಾಸ್ನಲ್ಲಿ ಮಂಗಳವಾರ ಹೋಳಿಗೆಮ್ಮ ಆಚರಿಸಿ ಸುತ್ತಮುತ್ತಲಿನ ನಿವಾಸಿಗಳು ಶ್ರದ್ದಾ ಭಕ್ತಿಯನ್ನು ಸಮರ್ಪಿಸಿದರು.
ಗೌರಸಂದ್ರಮಾರಮ್ಮನನ್ನು ಗುಡಿಯಿಂದ ಮೆರವಣಿಗೆ ಮಾಡಿಕೊಂಡು ಹೊಳೆ ಪೂಜೆ ಸಲ್ಲಿಸಿದ ಬಳಿಕ ನೆಹರು ನಗರದಲ್ಲಿರುವ ಆಂಜನೇಯಸ್ವಾಮಿ ಬಳಿ ಕೂರಿಸಲಾಯಿತು.
ದಾರಿಯುದ್ದಕ್ಕೂ ಮಹಿಳೆಯರು ಗೌರಸಂದ್ರಮಾರಮ್ಮನಿಗೆ ಆರತಿ ಬೆಳಗಿ ಹೋಳಿಗೆ, ಮೊಸರನ್ನ, ಬಾಳೆಹಣ್ಣು, ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು.
ಹಿಂದಿನ ಕಾಲದಲ್ಲಿ ಪ್ಲೇಗು, ಕಾಲರ ಕಾಣಿಸಿಕೊಂಡಾಗ ಇಡಿ ಊರಿಗೆ ಊರೇ ಜನ ಖಾಲಿ ಮಾಡುತ್ತಿದ್ದರು. ಅಂದಿನಿಂದ ಯಾವುದೇ ರೋಗ ರುಜಿನಗಳು ಸೋಂಕಬಾರದೆಂದು ಹೋಳಿಗೆಮ್ಮ ಆಚರಿಸುವ ಪದ್ದತಿ ನಡೆದುಕೊಂಡು ಬರುತ್ತಿದೆ. ಅದರಂತೆ ನೆಹರು ನಗರದಲ್ಲಿ ಹೋಳಿಗೆಮ್ಮನನ್ನು ಪೂಜಿಸಿ ಎಡೆಯಿಟ್ಟು ಸಂಜೆ ಗಾಂಧಿ ಸರ್ಕಲ್ನ ಗಡಿಗೆ ತಲುಪಿಸಲಾಗುವುದೆಂದು ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷ ಬಿ.ಬಸವರಾಜಪ್ಪ ತಿಳಿಸಿದರು. ನೂರಾರು ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು.



