ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕವು ಭಾರತದ ರಕ್ಷಣಾ ವ್ಯವಸ್ಥೆಗೆ ಬಲವಾದ ಆಸರೆಯಾಗಿದ್ದು, ರಾಜ್ಯವೇ ದೇಶದ ರಕ್ಷಣಾ ಕ್ಷೇತ್ರದ ಬೆನ್ನೆಲುಬಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಆಯೋಜಿಸಲಾಗಿದ್ದ 'ಕಾರ್ಗಿಲ್ ವಿಜಯ ದಿವಸ' ಕಾರ್ಯಕ್ರಮದಲ್ಲಿ ಭಾಗವಹಿಸಿ, ಗಡಿ ಕಾಯುವಾಗ ವೀರಮರಣ ಅಪ್ಪಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.
1999ರ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ 527 ಅಮರ ಯೋಧರಲ್ಲಿ ಕರ್ನಾಟಕದ 13 ವೀರ ಯೋಧರೂ ಸೇರಿದ್ದಾರೆ. ಶತ್ರುಗಳ ಕುತಂತ್ರವನ್ನು ಮೆಟ್ಟಿ ನಿಂತು ತ್ರಿವರ್ಣ ಧ್ವಜವನ್ನು ಎತ್ತರಕ್ಕೆ ಹಾರಿಸಿದ ಆ ಎಲ್ಲಾ ವೀರ ಯೋಧರ ತ್ಯಾಗಕ್ಕೆ ಶಿರಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುವುದಾಗಿ ಸಿಎಂ ಹೇಳಿದರು.
ರಕ್ಷಣಾ ಕ್ಷೇತ್ರದಲ್ಲಿ ಕರ್ನಾಟಕದ ಮಹತ್ವದ ಕೊಡುಗೆ: ಎಚ್ಎಎಲ್, ಬಿಇಎಲ್, ಬಿಇಎಂಎಲ್, ಇಸ್ರೋ, ಡಿಆರ್ಡಿಒ, ಎಡಿಎ, ಎನ್ಎಎಲ್ ಹಾಗೂ ಮೈಸೂರಿನ ಸಿಎಫ್ಟಿಆರ್ಐ ಸಂಸ್ಥೆಗಳು ದೇಶದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿವೆ. ಈ ಎಲ್ಲಾ ಸಂಸ್ಥೆಗಳ ಉಪಸ್ಥಿತಿಯಿಂದಾಗಿ ಕರ್ನಾಟಕವು ರಕ್ಷಣಾ ರಂಗದ ಶಕ್ತಿ ಕೇಂದ್ರವಾಗಿದೆ. ಯೋಧರು ದೇಶದ ಜೀವಾಳ: ಸೈನಿಕರು ಗಡಿಯಲ್ಲಿ ಹಗಲಿರುಳು ನಮಗಾಗಿ ಕಾವಲು ಕಾಯುತ್ತಿರುವುದರಿಂದಲೇ ನಾವು ಮನೆಯಲ್ಲಿ ನೆಮ್ಮದಿಯಿಂದ ನಿದ್ರಿಸಲು ಸಾಧ್ಯವಾಗಿದೆ. ಸೈನಿಕರು, ಯುವಕರು, ಮಹಿಳೆಯರು, ರೈತರು ಮತ್ತು ತೆರಿಗೆದಾರರು ಕೈಯ ಐದು ಬೆರಳುಗಳಿದ್ದಂತೆ; ಈ ಐದೂ ಬೆರಳುಗಳು ಸೇರಿದಾಗ ಪ್ರಚಂಡ ಮುಷ್ಟಿಯಾಗಿ ದೇಶವನ್ನು ಮುನ್ನಡೆಸುತ್ತವೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಮಾತನ್ನು ಸ್ಮರಿಸಿದರು.
ಯೋಧರ ಕುಟುಂಬಗಳ ಕಲ್ಯಾಣಕ್ಕೆ ಬದ್ಧ: ಯೋಧರ ಮತ್ತು ಹುತಾತ್ಮರ ಕುಟುಂಬಗಳ ಕ್ಷೇಮಾಭಿವೃದ್ಧಿಗೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ. ಅವರ ಕಲ್ಯಾಣಕ್ಕಾಗಿ ಯಾವುದೇ ಸಲಹೆಗಳಿದ್ದರೂ ಸ್ವೀಕರಿಸಲು ಸರ್ಕಾರ ಸದಾ ಸಿದ್ಧವಾಗಿದೆ ಎಂದು ಭರವಸೆ ನೀಡಿದರು.
ಬರ ಪರಿಹಾರಕ್ಕೆ ಕೇಂದ್ರದ ನೆರವಿನ ನಿರೀಕ್ಷೆ: ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಎದುರಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ರಾಜ್ಯದ ಬರ ಸ್ಥಿತಿ, ಎದುರಿಸುತ್ತಿರುವ ತೊಂದರೆಗಳು ಹಾಗೂ ಬಾಕಿಯಿರುವ ವಿವಿಧ ಯೋಜನೆಗಳ ಕುರಿತು ಚರ್ಚಿಸಲು ಸೋಮವಾರ ಸಂಜೆ ದೆಹಲಿಯಲ್ಲಿ ರಾಜ್ಯದ ಎಲ್ಲಾ ಸಂಸದರ ಹಾಗೂ ಕೇಂದ್ರ ಸಚಿವರ ಸಭೆ ಕರೆಯಲಾಗಿದೆ. ಈ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರದಿಂದ ಸೂಕ್ತ ನೆರವು ಸಿಗುವ ನಿರೀಕ್ಷೆಯಿದ್ದು, ಆಗಸ್ಟ್ 13ರಿಂದ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.



