ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಆಯೋಜಕರಾದ ತಾಲೂಕು ಆಡಳಿತವು ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಮನವಿ ಟ್ರಸ್ಟ್ ಸಂಸ್ಥಾಪಕರಾದ ಮಾನಸ ಮಂಜುನಾಥ್ ತೀವ್ರ ಆರೋಪ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾರ್ಯಕ್ರಮದ ವ್ಯವಸ್ಥೆ ಹಾಗೂ ತಾಲೂಕು ಆಡಳಿತದ ಧೋರಣೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೇದಿಕೆಯಲ್ಲಿ ಪುರುಷರದ್ದೇ ಕಾರುಬಾರು: ಕಾಟಾಚಾರದ ಆಹ್ವಾನ:
"ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ತಮಗೆ ತೋಚಿದಂತೆ ಹೋಗಿ ಲಭ್ಯವಿದ್ದ ಕುರ್ಚಿಗಳಲ್ಲಿ ಆಸೀನರಾದರು. ಸ್ವಾಗತ ಭಾಷಣದ ವೇಳೆಯೂ ಸಭಾಂಗಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದರೂ, ಕೇವಲ ಕಾಟಾಚಾರಕ್ಕೆ ಎಂಬಂತೆ ಒಂದಿಬ್ಬರನ್ನು ಮಾತ್ರ ಆಹ್ವಾನಿಸಲಾಯಿತು. ಒಕ್ಕಲಿಗ ಮಹಿಳಾ ಸಂಘದ ತಾಲೂಕು ಅಧ್ಯಕ್ಷರಾದ ಮಮತಾ ಅವರನ್ನು ಅತ್ಯಂತ ನಿರ್ಲಕ್ಷ್ಯದಿಂದ ಕೊನೆಯಲ್ಲಿ ಕರೆದು ಕೂರಿಸಲಾಯಿತು. ಇಡೀ ವೇದಿಕೆ ತುಂಬಾ ಪುರುಷರೇ ತುಂಬಿಕೊಳ್ಳುವುದಾದಾರೆ, ಮಹಿಳೆಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಅಗತ್ಯವಾದರೂ ಏನಿತ್ತು?" ಎಂದು ಅವರು ಪ್ರಶ್ನಿಸಿದ್ದಾರೆ.
ಸಾಧಕರಿಗೆ ಸಿಗದ ಮನ್ನಣೆ:
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಕಷ್ಟು ಮಹಿಳೆಯರು ಮತ್ತು ಪುರುಷರು ಕಾರ್ಯಕ್ರಮದಲ್ಲಿ ಹಾಜರಿದ್ದರೂ ಸಹ, ಅವರನ್ನು ಕನಿಷ್ಠ ಪಕ್ಷ ಸ್ವಾಗತಿಸುವ, ಆಹ್ವಾನಿಸುವ ಅಥವಾ ಗುರುತಿಸುವ ಸೌಜನ್ಯವನ್ನು ಆಯೋಜಕರು ತೋರಲಿಲ್ಲ ಎಂದು ಅವರು ದೂರಿದ್ದಾರೆ.
"ಮಹಾಪುರುಷರು ಎಲ್ಲರಿಗೂ ಮಾದರಿ":
"ಮಹಾಪುರುಷರ ಜಯಂತಿ ಕಾರ್ಯಕ್ರಮಗಳನ್ನು ಕೇವಲ ಒಂದು ನಿರ್ದಿಷ್ಟ ಜನಾಂಗಕ್ಕೆ ಸೀಮಿತಗೊಳಿಸದೆ, ಎಲ್ಲಾ ವರ್ಗದ ಜನರನ್ನು ಆಹ್ವಾನಿಸಬೇಕು. ಆ ಮಹನೀಯರು ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂಬುದನ್ನು ಹಲವು ಬಾರಿ ಮನವಿ ಮಾಡಿದ್ದರೂ ಸಹ ತಾಲೂಕು ಆಡಳಿತವು ಪದೇ ಪದೇ ಅದೇ ತಪ್ಪುಗಳನ್ನು ಮರುಕಳಿಸುತ್ತಿದೆ."
ಮಾನಸ ಮಂಜುನಾಥ್, ಸಂಸ್ಥಾಪಕರು, ಮನವಿ ಟ್ರಸ್ಟ್.
ಸಮಿತಿಗೆ ಎಚ್ಚರಿಕೆ:
ಮುಂದಿನ ದಿನಗಳಲ್ಲಿ ಯಾವುದೇ ಜಯಂತಿ ಅಥವಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಇಂತಹ ಮಹಿಳಾ ವಿರೋಧಿ ವರ್ತನೆಗಳು ಮರುಕಳಿಸಬಾರದು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ಈ ಬಗ್ಗೆ ತೀವ್ರ ಜಾಗ್ರತೆ ವಹಿಸಬೇಕು ಮತ್ತು ಎಲ್ಲರಿಗೂ ಸಮಾನ ಗೌರವ ಸಿಗುವಂತೆ ನೋಡಿಕೊಳ್ಳಬೇಕು ಎಂದು ಮಾನಸ ಮಂಜುನಾಥ್ ಆಗ್ರಹಿಸಿದ್ದಾರೆ.



