ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನದಿಂದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ತಮ್ಮನ್ನು ಅಮಾನತುಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಪುತ್ರಿಯ ಆದಾಯ ಪ್ರಮಾಣಪತ್ರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಈ ಅಮಾನತು ಆದೇಶ ಹೊರಬಿದ್ದಿದ್ದು, ಇದರ ಬೆನ್ನಲ್ಲೇ ಸಾಹುಕಾರ್ ಅವರು ಕಾನೂನು ಹೋರಾಟ ಆರಂಭಿಸಿದ್ದಾರೆ.
ಅರ್ಜಿಯ ತುರ್ತು ವಿಚಾರಣೆಯನ್ನು ನಿನ್ನೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ಕೆಲಕಾಲ ವಾದ-ಪ್ರತಿವಾದ ಆಲಿಸಿ, ವಿಚಾರಣೆಯನ್ನು ಮುಂದೂಡಿದೆ.
ಅಮಾನತು ಕ್ರಮ ಸಂವಿಧಾನಬಾಹಿರ: ಸಾಹುಕಾರ್ ಪರ ವಕೀಲರ ವಾದವಿಚಾರಣೆ ವೇಳೆ ಅರ್ಜಿದಾರ ಶಿವಶಂಕರಪ್ಪ ಸಾಹುಕಾರ್ ಪರ ಹಾಜರಾಗಿದ್ದ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು ರಾಜ್ಯಪಾಲರ ಕ್ರಮವನ್ನು ಬಲವಾಗಿ ಆಕ್ಷೇಪಿಸಿದರು.
"ಭಾರತ ಸಂವಿಧಾನದ ವಿಧಿ 317ರ ಪ್ರಕಾರ, ಲೋಕಸೇವಾ ಆಯೋಗದ ಅಧ್ಯಕ್ಷರ ವಿರುದ್ಧ ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್ ಮೂಲಕ ಅಧಿಕೃತ ವಿಚಾರಣೆಯನ್ನು ಆರಂಭಿಸುವ ಮುನ್ನವೇ ರಾಜ್ಯಪಾಲರು ಅಮಾನತು ಕ್ರಮ ಕೈಗೊಂಡಿರುವುದು ಕಾನೂನುಬದ್ಧವಲ್ಲ."
ಅರುಣ್ ಶ್ಯಾಮ್, ಹಿರಿಯ ವಕೀಲ.
ಆರೋಪಗಳ ಗಂಭೀರತೆ ಆಧರಿಸಿ ಕ್ರಮ: ವಕೀಲರ ಸಮರ್ಥನೆ
ಇದಕ್ಕೆ ಪ್ರತಿಯಾಗಿ ರಾಜ್ಯಪಾಲರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಉದಯ ಹೊಳ್ಳ ಅವರು ರಾಜ್ಯಪಾಲರ ನಿರ್ಧಾರವನ್ನು ಸಮರ್ಥಿಸಿಕೊಂಡರು. ಅರ್ಜಿದಾರರ ವಿರುದ್ಧ ಕೇಳಿಬಂದಿರುವ ಆರೋಪಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು, ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅಮಾನತು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು ಎಂದು ಅವರು ನ್ಯಾಯಾಲಯಕ್ಕೆ ವಿವರಿಸಿದರು.
ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, ರಾಜ್ಯಪಾಲರು ತಮ್ಮ ಅಧಿಕಾರವನ್ನು ಕಾನೂನುಬದ್ಧವಾಗಿ ಬಳಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ತಮ್ಮ ತಮ್ಮ ವಾದಕ್ಕೆ ಪೂರಕವಾಗಿರುವ ಹಳೆಯ ನ್ಯಾಯಾಲಯದ ತೀರ್ಪುಗಳನ್ನು ಸಲ್ಲಿಸುವಂತೆ ಉಭಯ ವಕೀಲರಿಗೆ ಸೂಚಿಸಿತು.
ಏನಿದು ಆದಾಯ ಪ್ರಮಾಣಪತ್ರ ವಿವಾದ?:
ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿ ಸುಮಾ ಎಸ್. ಸಾಹುಕಾರ್ ಅವರು ಇಲಾಖೆಯ ಗ್ರೂಪ್ ‘ಸಿ’ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಅವರು '3ಬಿ' ಮೀಸಲಾತಿ ವರ್ಗದ ಸೌಲಭ್ಯ ಕೋರಿದ್ದರು.
ಆದರೆ, "ನಾನು ಕೇವಲ 3ಬಿ ಜಾತಿ ಪ್ರಮಾಣಪತ್ರಕ್ಕಾಗಿ ಮಾತ್ರ ಅರ್ಜಿ ಸಲ್ಲಿಸಿದ್ದೆ, ಅದರಲ್ಲಿ ಆದಾಯದ ಮಾಹಿತಿಯೂ ಸೇರಿರುತ್ತದೆ ಎಂಬುದು ನನಗೆ ತಿಳಿದಿರಲಿಲ್ಲ" ಎಂದು ಸುಮಾ ಸ್ಪಷ್ಟನೆ ನೀಡಿದ್ದಾರೆ. ಆದರೆ ದಾಖಲೆಗಳ ಪರಿಶೀಲನೆ ನಡೆಸುವಾಗ, ಪ್ರಮಾಣಪತ್ರದಲ್ಲಿ ನಮೂದಿಸಲಾಗಿದ್ದ ವಾರ್ಷಿಕ ಆದಾಯವು ಅವರ ತಂದೆಯ (ಶಿವಶಂಕರಪ್ಪ ಸಾಹುಕಾರ್) ನಿಜವಾದ ಆದಾಯಕ್ಕಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಎಂಬುದು ಬೆಳಕಿಗೆ ಬಂದಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದೇ ವಿವಾದ ಇದೀಗ ಅಧ್ಯಕ್ಷರ ಅಮಾನತು ಹಾಗೂ ಕೋರ್ಟ್ ಮೆಟ್ಟಿಲೇರುವ ಹಂತಕ್ಕೆ ಬಂದು ತಲುಪಿದೆ.



