ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಸಾಲು ಸಾಲು ಅಕ್ರಮಗಳ ಆರೋಪ ಹಾಗೂ ತೀವ್ರ ಆಕ್ರೋಶದ ಬೆನ್ನಲ್ಲೇ, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಿ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಅವರು ಆದೇಶ ಹೊರಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಮತ್ತು ದೂರು:
ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ 400 ಪಶುವೈದ್ಯಾಧಿಕಾರಿ ಹುದ್ದೆಗಳಿಗೆ 2026ರ ಜನವರಿ 8 ಮತ್ತು 9ರಂದು ಪರೀಕ್ಷೆ ನಡೆದಿತ್ತು. ಜುಲೈ 17ರಂದು ಕೆಪಿಎಸ್ಸಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಆದರೆ, ಈ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಹಾಗೂ ಅಭ್ಯರ್ಥಿಗಳ ಪರವಾಗಿ ಪಶುವೈದ್ಯ ಮಂಜುನಾಥ್ ಎಂಬುವವರು ದೂರು ನೀಡಿದ್ದರು.
ಈ ದೂರಿನ ಆಧಾರದಲ್ಲಿ, ಈಗಾಗಲೇ ಕೆಪಿಎಸ್ಸಿ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಂಡಿರುವ ಶಿವಶಂಕರಪ್ಪ ಎಸ್. ಸಾಹುಕಾರ ಹಾಗೂ ಮತ್ತಿತರರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹಗರಣದ ಕರಾಳ ಮುಖಗಳು: ದೂರಿನಲ್ಲಿರುವ ಪ್ರಮುಖ ಆರೋಪಗಳು!
ಬಂಧು ಬಳಗಕ್ಕಷ್ಟೇ ಟಾಪ್ ರ್ಯಾಂಕ್: ಅಂತಿಮ ಪಟ್ಟಿಯಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಯ ಹತ್ತಿರದ ಸಂಬಂಧಿಗಳೇ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಡಿಮೆ ಅಂಕಗಳ ಅಭ್ಯರ್ಥಿಗಳಿಗೆ ಜ್ಯಾಕ್ಪಾಟ್: ಕೇಂದ್ರ ಲೋಕಸೇವಾ ಆಯೋಗದ ಐಎಫ್ಎಸ್ ಪರೀಕ್ಷೆ ಪಾಸ್ ಮಾಡಿದವರಿಗೂ ಈ ಪರೀಕ್ಷೆಯಲ್ಲಿ 350 ಅಂಕ ಗಳಿಸಲು ಸಾಧ್ಯವಾಗಿಲ್ಲ. ಆದರೆ, ಬಿವಿಎಸ್ಸಿ ಪದವಿಯಲ್ಲಿ ಅತೀ ಕಡಿಮೆ ಸಿಜಿಪಿಎ ಹೊಂದಿದ್ದ ಅಧ್ಯಕ್ಷರ ಸಂಬಂಧಿಯೊಬ್ಬರು ಬರೋಬ್ಬರಿ 450ಕ್ಕೂ ಹೆಚ್ಚು ಅಂಕ ಪಡೆದು ಟಾಪರ್ ಆಗಿದ್ದಾರೆ!.
ರೆಸಾರ್ಟ್ ವಾಸ್ತವ್ಯ ಹಾಗೂ ಹೈಟೆಕ್ ತರಬೇತಿ: ಪರೀಕ್ಷೆಯ ಹಿಂದಿನ ದಿನ ಮಧ್ಯವರ್ತಿಗಳು ಅಭ್ಯರ್ಥಿಗಳನ್ನು ವಾಹನಗಳಲ್ಲಿ ಹೊರರಾಜ್ಯ ಹಾಗೂ ವಿವಿಧ ಸ್ಥಳಗಳ ರೆಸಾರ್ಟ್ಗಳಿಗೆ ಕರೆದೊಯ್ದು, ಉತ್ತರ ಸಹಿತ ಪ್ರಶ್ನೆಪತ್ರಿಕೆ ನೀಡಿ ತರಬೇತಿ ನೀಡಿದ್ದಾರೆ. ಈ ವೇಳೆ ಅಭ್ಯರ್ಥಿಗಳ ಮೊಬೈಲ್ ಫೋನ್ಗಳು ಸಂಪೂರ್ಣ ಸ್ವಿಚ್ ಆಫ್ ಆಗಿದ್ದವು.
ಖಾಲಿ ಬಿಟ್ಟ ಒಎಂಆರ್ ಶೀಟ್ ತಿದ್ದುಪಡಿ ಶಂಕೆ: ಹಲವು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಕೆಲವೇ ಪ್ರಶ್ನೆಗಳಿಗೆ ಉತ್ತರಿಸಿ ಬಹುಪಾಲು ಜಾಗವನ್ನು ಖಾಲಿ ಬಿಟ್ಟಿದ್ದರು. ನಂತರ ಒಎಂಆರ್ ಶೀಟ್ಗಳನ್ನು ತಿದ್ದುಪಡಿ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಎಫ್ಎಸ್ಎಲ್ ಕಾರ್ಬನ್ ಡೇಟಿಂಗ್ಗೆ ಆಗ್ರಹ:
ಮೇ 26ರಂದು ಪ್ರಕಟಗೊಂಡ ತಾತ್ಕಾಲಿಕ ಪಟ್ಟಿಯ ಅಭ್ಯರ್ಥಿಗಳೇ ಅಂತಿಮ ಪಟ್ಟಿಯಲ್ಲೂ ಅತ್ಯುನ್ನತ ಶ್ರೇಣಿ ಪಡೆದಿರುವುದರಿಂದ ಒಎಂಆರ್ ತಿದ್ದುಪಡಿ ನಡೆದಿರುವುದು ಬಹುತೇಕ ಖಚಿತ ಎನ್ನಲಾಗಿದೆ.
ಹೀಗಾಗಿ, ಒಎಂಆರ್ ಪ್ರತಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ 'ಕಾರ್ಬನ್ ಡೇಟಿಂಗ್' ತನಿಖೆ ನಡೆಸಬೇಕು ಮತ್ತು ಅಕ್ರಮದ ಹಿಂದಿರುವ ಕೆಪಿಎಸ್ಸಿ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳನ್ನು ಬಂಧಿಸಬೇಕೆಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
ಸದ್ಯ ಪ್ರಕರಣ ಸಿಐಡಿ ಅಂಗಳ ತಲುಪಿದ್ದು, ಮುಂದಿನ ತನಿಖೆಯಿಂದ ಹೆಚ್ಛಿನ ಆಘಾತಕಾರಿ ಸತ್ಯಗಳು ಹೊರಬೀಳುವ ಸಾಧ್ಯತೆಯಿದೆ.



