ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು, ಇದರ ಬೆನ್ನಲ್ಲೇ ಪ್ರತಿಪಕ್ಷ ಜೆಡಿಎಸ್, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಡ್ಯಾಂನಲ್ಲಿ ನೀರಿನ ಮಟ್ಟ ಕೇವಲ 81 ಅಡಿಗೆ ಕುಸಿದಿದ್ದು, ದಶಕಗಳ ಕಾಲ ನೀರಿನಲ್ಲಿ ಮುಳುಗಡೆಯಾಗಿದ್ದ ಪ್ರಾಚೀನ ದೇಗುಲವೇ ಕಣ್ಣೆದುರು ಬಂದು ನಿಂತಿದೆ ಎಂದು ಜೆಡಿಎಸ್ ಕಳವಳ ವ್ಯಕ್ತಪಡಿಸಿದೆ.
ಟ್ವೀಟ್ ಮೂಲಕ ಜೆಡಿಎಸ್ ಸರಣಿ ಪ್ರಶ್ನೆಗಳು:
ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಜೆಡಿಎಸ್, ಕನ್ನಡಿಗರ ಹಿತರಕ್ಷಣೆಯನ್ನು ಮರೆತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಇನ್ನು ಎಚ್ಚರ ಬಂದಿಲ್ಲ ಎಂದು ಟೀಕಿಸಿದೆ.
ಕುಡಿಯುವ ನೀರಿಗೂ ಹಾಹಾಕಾರ ಭೀತಿ: "ನಾಳೆ ಬೆಂಗಳೂರಿಗರಿಗೆ ಹಾಗೂ ಮಂಡ್ಯ ಭಾಗದ ರೈತರಿಗೆ ನೀರಿಲ್ಲದೆ ಪರದಾಡುವ ದುಸ್ಥಿತಿ ಬಂದರೆ ಅದಕ್ಕೆ ಹೊಣೆ ಯಾರು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ " ಎಂದು ಜೆಡಿಎಸ್ ನೇರವಾಗಿ ಪ್ರಶ್ನಿಸಿದೆ.
ಕೇಂದ್ರದತ್ತ ಬೊಟ್ಟು ಮಾಡುವ ಜಾಯ್ಮಾನ: ಬೆಂಗಳೂರಿನ ಜನತೆಗೆ ಕುಡಿಯುವ ನೀರಿಗೂ ಹಾಹಾಕಾರ ಶುರುವಾದಾಗ ರಾಜ್ಯ ಸರ್ಕಾರ ಎಂದಿನಂತೆ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತದೆಯೇ ಎಂದು ಜೆಡಿಎಸ್ ಕುಟುಕಿದೆ.
ತಮಿಳುನಾಡಿಗೆ ನೀರು ಹರಿಸಲು ಆಸಕ್ತಿ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲು ತೋರುವ ಆಸಕ್ತಿಯನ್ನು ಕೈಬಿಟ್ಟು, ಮೊದಲು ನಮ್ಮ ಕನ್ನಡಿಗರ ಹಿತರಕ್ಷಣೆ ಮಾಡಿ ಎಂದು ಜೆಡಿಎಸ್ ಸರ್ಕಾರವನ್ನು ಒತ್ತಾಯಿಸಿದೆ.
"ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದೆ, ನಮ್ಮ ಜೀವನಾಡಿ ಕೆ.ಆರ್.ಎಸ್ ಡ್ಯಾಂನಲ್ಲಿ ನೀರಿನ ಮಟ್ಟ ಕೇವಲ 81 ಅಡಿಗೆ ಕುಸಿದಿದೆ. ದಶಕಗಳ ಕಾಲ ಮುಳುಗಡೆಯಾಗಿದ್ದ ದೇಗುಲವೇ ಕಣ್ಣೆದುರು ಬಂದು ನಿಂತಿದೆ! ಆದರೂ ಸರ್ಕಾರಕ್ಕೆ ಮಾತ್ರ ಎಚ್ಚರವಿಲ್ಲ."
ಜನತಾದಳ (ಜಾತ್ಯತೀತ) ಪಕ್ಷದ ಅಧಿಕೃತ ಪ್ರಕಟಣೆ.
ರೈತರು ಮತ್ತು ಜನಸಾಮಾನ್ಯರಲ್ಲಿ ಆತಂಕ:
ಕೆ.ಆರ್.ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿಯಾಗಿದ್ದು, ಪ್ರಸ್ತುತ ನೀರು 81 ಅಡಿಗೆ ಕುಸಿದಿರುವುದು ಮಂಡ್ಯ-ಮೈಸೂರು ಭಾಗದ ರೈತರಲ್ಲಿ ಹಾಗೂ ಬೆಂಗಳೂರಿನ ನಾಗರಿಕರಲ್ಲಿ ಭೀತಿ ಮೂಡಿಸಿದೆ. ಮಳೆ ಬಾರದೆ ಜಲಾಶಯ ಬರಿದಾಗುತ್ತಿದ್ದರೆ, ಇತ್ತ ರಾಜಕೀಯ ವಲಯದಲ್ಲಿ ಕಾವೇರಿ ನೀರಿನ ಹಂಚಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ.



