ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಕಲ್ವಳ್ಳಿ ಭಾಗದಲ್ಲಿ ತಲೆದೂರಿರುವ ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ, ಕಲ್ವಳ್ಳಿ ಭಾಗದ ನೂರಾರು ಸಾರ್ವಜನಿಕರು ಹಾಗೂ ರೈತರು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ದಿಂಡಾವರ ರಸ್ತೆಯ ಸೂರಪ್ಪನಹಟ್ಟಿ ಗೇಟ್ನಿಂದ ಆರಂಭವಾದ ಪ್ರತಿಭಟನೆ, ಬೈಕ್ ಹಾಗೂ ಟ್ರಾಕ್ಟರ್ಗಳ ಮೂಲಕ ಹಿರಿಯೂರು ನಗರದ ಪ್ರಧಾನ ರಸ್ತೆಯ ಮಾರ್ಗವಾಗಿ ತಾಲೂಕು ಕಚೇರಿಯನ್ನು ತಲುಪಿತು. ಬಳಿಕ ಪ್ರತಿಭಟನಾಕಾರರು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
"ದೀಪದ ಕೆಳಗೆ ಕತ್ತಲೆ":
ವಾಣಿವಿಲಾಸ ಸಾಗರ ಇದ್ದರೂ ನೀರಿಲ್ಲ!-ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಪತ್ರಕರ್ತ ಲಕ್ಷ್ಮಣ್ ಹೂಗಾರ್, ಜೆ.ಜಿ. ಹಳ್ಳಿ ಹೋಬಳಿಯ ಜನರ ದುಸ್ಥಿತಿಯನ್ನು ಎತ್ತಿ ತೋರಿಸಿದರು.
"ವಿವಿ ಸಾಗರ ಡ್ಯಾಂನಲ್ಲಿ ನೀರು ತುಂಬಿ ತುಳುಕುತ್ತಿದ್ದರೂ, ಅದರ ಆಸುಪಾಸಿನ ಹಳ್ಳಿಗಳಿಗೇ ನೀರಿನ ಬರ ಬಂದೊದಗಿದೆ. ಇದು ದೀಪದ ಕೆಳಗೆ ಕತ್ತಲೆ ಆವರಿಸಿದಂತಾಗಿದೆ. ಜೆ.ಜಿ. ಹಳ್ಳಿ ಹೋಬಳಿಯಲ್ಲಿ ಕುಡಿಯಲು ನೀರಿಲ್ಲ, ಅಡಿಕೆ ತೋಟಗಳೂ ಒಣಗುತ್ತಿವೆ. ನಾವೆಲ್ಲಾ ನೀರಿಲ್ಲದೆ ಜೀವಂತ ಶವಗಳಾಗಿದ್ದೇವೆ. ಉಪ ಚುನಾವಣೆ ಹತ್ತಿರ ಬರುತ್ತಿದ್ದು, ಕಬ್ಬಿಣ ಕಾದಿರುವಾಗಲೇ ಬಡಿಯಬೇಕಿದೆ. ಈ ಬಾರಿ ನೀರು ಕೊಡದಿದ್ದರೆ ಚುನಾವಣೆ ಬಹಿಷ್ಕರಿಸಲು ಜನರು ನಿರ್ಧರಿಸಿದ್ದಾರೆ" ಎಂದು ಅವರು ಆಕ್ರೋಶ ಹೊರಹಾಕಿದರು. ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರು ತಕ್ಷಣವೇ ಈ ಭಾಗಕ್ಕೆ ನೀರು ಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಕಲ್ವಳ್ಳಿ ಭಾಗದ ಪ್ರಮುಖ ಬೇಡಿಕೆಗಳು ಮತ್ತು ಎಚ್ಚರಿಕೆ-
ರೈತ ಮುಖಂಡ ಚಂದ್ರಗಿರಿ ಮಾತನಾಡಿ, ಕಲ್ವಳ್ಳಿ ಭಾಗದ ಪ್ರಮುಖ ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟರು.
ಅಂತರ್ಜಲ ಕುಸಿತ: ಕಲ್ವಳ್ಳಿ ಭಾಗದಲ್ಲಿ ಸಾವಿರ ಅಡಿ ಆಳಕ್ಕೆ ಬೋರ್ ಕೊರೆದರೂ ನೀರು ಸಿಗುತ್ತಿಲ್ಲ. ಜನ-ಜಾನುವಾರುಗಳು ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದು, ಬೆಳೆಗಳು ನಾಶವಾಗಿ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ.
ದಶಕಗಳ ಹೋರಾಟ: ವಾಣಿವಿಲಾಸ ಸಾಗರ ಜಲಾಶಯದ ನಾಲೆ ಕೇವಲ 10 ಕಿ.ಮೀ ದೂರದಲ್ಲಿದ್ದರೂ, ಕಳೆದ 20 ವರ್ಷಗಳಿಂದ ನೀರಿಗಾಗಿ ನಿರಂತರ ಹೋರಾಟ ಮಾಡಲಾಗುತ್ತಿದೆ.
20 ದಿನಗಳ ಗಡುವು: ಮುಂದಿನ 20 ದಿನಗಳ ಒಳಗಾಗಿ ಸರ್ಕಾರ ಸಚಿವ ಸಂಪುಟ ಸಭೆ ಕರೆದು, ಕಲ್ವಳ್ಳಿ ಭಾಗದ ಎಲ್ಲಾ ಕೆರೆಗಳಿಗೆ ವಿವಿ ಸಾಗರದಿಂದ ನೀರು ತುಂಬಿಸುವ ಯೋಜನೆಗೆ ಅನುಮೋದನೆ ನೀಡಿ ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು ಜಂಟಿಯಾಗಿ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಬೇಕು.
ಪ್ರಮುಖ ಎಚ್ಚರಿಕೆ: "ಸುಮಾರು 50 ಸಾವಿರ ಮತದಾರರಿರುವ ಈ ಭಾಗಕ್ಕೆ ಯೋಜನೆ ಮಂಜೂರು ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಅಮರಣಾಂತರ ಸತ್ಯಾಗ್ರಹ ನಡೆಸಲಾಗುವುದು ಮತ್ತು ಬರುವ ಎಲ್ಲಾ ಚುನಾವಣೆಗಳನ್ನು ಕಡ್ಡಾಯವಾಗಿ ಬಹಿಷ್ಕರಿಸಲಾಗುವುದು." ಎಂದು ಚಂದ್ರಗಿರಿ ಎಚ್ಚರಿಸಿದರು. ಪಕ್ಷಾತೀತ ಬೆಂಬಲ-
ಈ ಬೃಹತ್ ಪ್ರತಿಭಟನೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಬಿಬಿಎಂಪಿ ಮಾಜಿ ಆಯುಕ್ತ ಜೆ. ರಾಜು, ಜೆಡಿಎಸ್ ಮುಖಂಡ ಎಂ. ರವೀಂದ್ರಪ್ಪ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಎಂ.ಜಯಣ್ಣ, ಸಮಾಜ ಸೇವಕ ಜೈರಾಮಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಜೆ.ಜಿ. ಹಳ್ಳಿ ಮಂಜಣ್ಣ, ಮುಖಂಡರಾದ ಡಿ. ಯಶೋಧರ್, ಶಂಕರಮೂರ್ತಿ, ಚಿದಾನಂದ್, ಜಯ ಕುಮಾರ್, ಬಿಜೆಪಿ ಮುಖಂಡ ಲಕ್ಷ್ಮೀಕಾಂತ್, ಬಿಜೆಪಿ ತಾಲೂಕು ಅಧ್ಯಕ್ಷ ಅಭಿನಂದನ್, ಜೆಡಿಎಸ್ ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.



