ಚಂದ್ರವಳ್ಳಿ ನ್ಯೂಸ್ ಬೆಂಗಳೂರು: ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಪುಷ್ಪನಮನ ಸಲ್ಲಿಸಿ, ಗೌರವ ಅರ್ಪಿಸಿದರು. ಇದೇ ಸಂದರ್ಭದಲ್ಲಿ ದೇವೇಗೌಡರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ತೀವ್ರ ಕೌಟುಂಬಿಕ ದುಃಖದಲ್ಲಿ ಭಾಗಿಯಾದರು.
ಬಳಿಕ ಮಾತನಾಡಿದ ಸಚಿವರು, "ಶ್ರೀಮತಿ ಚೆನ್ನಮ್ಮ ಅವರು ಶ್ರೀ ಹೆಚ್.ಡಿ. ದೇವೇಗೌಡ ಅವರ ಯಶಸ್ವಿ ರಾಜಕೀಯ ಹಾಗೂ ಸಾಮಾಜಿಕ ಜೀವನದ ಹಿಂದಿನ ದೃಢ ಶಕ್ತಿಯಾಗಿದ್ದರು. ಸರಳತೆ, ತಾಳ್ಮೆ ಮತ್ತು ಮಾತೃವಾತ್ಸಲ್ಯದ ಸಾಕಾರ ಮೂರ್ತಿಯಾಗಿದ್ದ ಅವರು, ಇಡೀ ಕುಟುಂಬವನ್ನು ಪ್ರೀತಿ, ಸಂಸ್ಕಾರ ಮತ್ತು ಮೌಲ್ಯಗಳೊಂದಿಗೆ ಮುನ್ನಡೆಸಿದವರು," ಎಂದು ಸ್ಮರಿಸಿದರು.
ಶ್ರೀಮತಿ ಚೆನ್ನಮ್ಮ ಅವರ ಅಗಲಿಕೆ ಕೇವಲ ದೇವೇಗೌಡ ಅವರ ಕುಟುಂಬಕ್ಕಷ್ಟೇ ಅಲ್ಲದೆ, ಇಡೀ ನಾಡಿಗೆ ತುಂಬಲಾರದ ನಷ್ಟವಾಗಿದೆ. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಈ ತೀವ್ರ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದ ಎಲ್ಲ ಸದಸ್ಯರಿಗೆ ಕರುಣಿಸಲಿ ಎಂದು ಸಚಿವ ಎಂ.ಬಿ. ಪಾಟೀಲ್ ಅವರು ಪ್ರಾರ್ಥಿಸಿದ್ದಾರೆ.



