ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿ ಮೇಲಿನಜೋಗನಹಳ್ಳಿ (ಎಸ್ ಎಸ್ ಘಾಟಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀಘಾಟಿ ಸುಬ್ರಹ್ಮಣ್ಯ ದೇವಾಲಯದ ಅವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಇಂಚರ ಸಾಂಸ್ಕೃತಿಕ ಕಲಾ ಸಂಘ ಇವರುಗಳ ಸಹಯೋಗದೊಂದಿಗೆ ' ಕಲಾ ನಡಿಗೆ ನಿಮ್ಮ ಬಳಿಗೆ ' ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕಲ್ಪನಾ ಅರ್. ಮಾತನಾಡಿ ಈಗಿನ ಯುವ ಪೀಳಿಗೆ ಟಿವಿ ಮತ್ತು ಮೊಬೈಲ್ ಮೂಲಕ ವಿಶ್ವದ ಎಲ್ಲ ರೀತಿಯ ಮನೋರಂಜನೆ, ಸಿನಿಮಾ, ಮತ್ತು ರಿಯಾಲಿಟಿ ಶೋಗಳು ಮನೆಯ ಬಾಗಿಲಿಗೆ ಬರುತ್ತಿರುವುದರಿಂದ, ಗಂಟೆಗಟ್ಟಲೆ ಕುಳಿತು ನೋಡುವ ಯಕ್ಷಗಾನ, ಬಯಲಾಟ, ನಾಟಕ ಜಾನಪದ ಗೊಂಬೆಯಾಟಗಳಂತಹ ಕಲೆಗಳತ್ತ ಆಸಕ್ತಿ ಕಡಿಮೆಯಾಗಿದೆ. ಅದ್ದರಿಂದ ಸಂಘ ಸಂಸ್ಥೆಗಳು ನಮ್ಮ ರಂಗಭೂಮಿ ಜಾನಪದ ಕಲೆಗಳ ಬಗ್ಗೆ ದಾರ್ಮಿಕ ಹಾಗು ಜನಸಂದಣಿ ಇರುವ ಪ್ರದೇಶಗಳಲ್ಲಿ ನಮ್ಮ ಸಂಸ್ಕೃತಿಯ ಕಲೆಗಳ ಬಗ್ಗೆ ಅರಿವು ಮೂಡಿಸುವ ಕಲಾ ನಡಿಗೆ ನಿಮ್ಮ ಬಳಿಗೆ ಎಂಬ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಚರ ಸಾಂಸ್ಕೃತಿಕ ಕಲಾ ಸಂಘ ವಿ ಎಂ ಗೌತಮ್ ವಹಿಸಿದ್ದರು.
ಈ ಸಂದರ್ಭದಲ್ಲಿ ಜಾನಪದ ಪ್ರಶಸ್ತಿ ವಿಜೇತೆ ಓಬಮ್ಮ, ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯ ಅಭಿವೃದ್ದಿ ಪ್ರಾಧಿಕಾರದ ಸದಸ್ಯೆ ಹೇಮಲತಾ, ರಮೇಶ್,ವ್ಯವಸ್ಥಾಪಕ ಮಹಾಂತೇಶ್,
ಎಸ್ ಎಸ್ ಘಾಟಿ ಪಂಚಾಯಿತಿಯ ಮಾಜಿ ಸದಸ್ಯ ಪುರುಷೋತ್ತಮ,ಜಾನಪದ ಕಲಾವಿದ ಜೂಗಾನಹಳ್ಳಿ ವೆಂಕಟೇಶ, ಕಲಾವಿದರಾದ ವೈ ಟಿ. ಲಕ್ಷ್ಮೀನಾರಾಯಣ್, ಕುಸುಮ, ಶಾಂತಮ್ಮ, ಸರೋಜಮ್ಮ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿ ರವಿಕುಮಾರ್, ರಾಜೇಶ್ ಇದ್ದರು.



