ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿರುವುದನ್ನು ಮನಗಂಡು ಮಲಬಾರ್ ಚಾರಿಟಬಲ್ ಟ್ರಸ್ಟ್ನವರು ವಿದ್ಯಾರ್ಥಿ ವೇತನ ವಿತರಿಸುತ್ತಿರುವುದು ಅತ್ಯಂತ ಸಮಂಜಸವಾದುದು ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಹೆಚ್.ಗುಡ್ಡದೇಶ್ವರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಮಲಬಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ೨೦೨೬-೨೭ ನೇ ಸಾಲಿನ ಸಿ.ಎಸ್.ಆರ್.ಘೋಷಣೆ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಂಪನಿಗಳು ತಮ್ಮ ಲಾಭದಲ್ಲಿ ಶೇ.೨ ರಷ್ಟನ್ನು ಸಾಮಾಜಿಕ ಕಾರ್ಯಕ್ರಮಗಳಿಗೆ ಬಳಕೆ ಮಾಡುವಂತೆ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಮಲಬಾರ್ ಚಾರಿಟಬಲ್ ಟ್ರಸ್ಟ್ ಈ ರೀತಿಯ ಸಮಾಜ ಮುಖಿ ಕಾರ್ಯಕ್ರಮಗಳಿಗೆ ಮುಂದಾಗಿರುವುದರಿಂದ ದುರ್ಬಲರು, ಅಶಕ್ತರು, ನಿರ್ಗತಿಕರಿಗೆ ನೆರವು ನೀಡಿದಂತಾಗುತ್ತದೆ. ಸಸಿಗಳನ್ನು ನೆಡುವ ಮೂಲಕ ವಿದ್ಯಾರ್ಥಿಗಳಲ್ಲಿ, ಜನಸಾಮಾನ್ಯರಲ್ಲಿ ಪರಿಸರ ಕಾಳಜಿ ಮೂಡಿಸುತ್ತಿರುವುದು ಸುತ್ತ್ಯಾರ್ಹ ಎಂದು ಗುಣಗಾನ ಮಾಡಿದರು.
ಭಾರತದಲ್ಲಿರುವ ೧೪೦ ಕೋಟಿ ಜನಸಂಖ್ಯೆಯಲ್ಲಿ ಶೆ. ೨೪ ರಷ್ಟು ಯುವ ಜನಾಂಗವಿದೆ. ಕೇವಲ ಅಂಕಪಟ್ಟಿಗಷ್ಟೆ ಶಿಕ್ಷಣ ಸೀಮಿತವಾಗಬಾರದು. ಭವಿಷ್ಯದ ಕಡೆ ಹಾಗೂ ದೇಶದ ಸುಭದ್ರತೆ ಕಡೆ ಚಿಂತಿಸಬೇಕಿದೆ. ಶಿಕ್ಷಣದ ಜೊತೆ ಕೌಶಲ್ಯ ಶಿಕ್ಷಣ ಪಡೆದುಕೊಂಡು ಮಲಬಾರ್ ಚಾರಿಟಬಲ್ ಟ್ರಸ್ಟ್ನವರು ಕೊಟ್ಟಿರುವ ವಿದ್ಯಾರ್ಥಿ ವೇತನವನ್ನು ಶಿಕ್ಷಣಕ್ಕೆ ಸದುಪಯೋಗಪಡಿಸಿಕೊಳ್ಳುವಂತೆ ಪ್ರೊ.ಹೆಚ್.ಗುಡ್ಡದೇಶ್ವರಪ್ಪ ವಿದ್ಯಾರ್ಥಿಗಳಿಗೆ ಸೂಚಿಸಿದರು.
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲರಾದ ಹೆಚ್.ರಾಜಣ್ಣ ಮಾತನಾಡಿ ಎಲ್ಲಾ ರಂಗಗಳಲ್ಲಿಯೂ ಪೈಪೋಟಿಯಿರುವುದರಿಂದ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನ ಕೊಡಬೇಕು. ಒಂದೊಂದು ಅಂಕಕ್ಕೂ ಪ್ರಾಮುಖ್ಯತೆಯಿರುವುದರಿಂದ ಮೊಬೈಲ್, ಟಿವಿ.ಯಿಂದ ದೂರವಿದ್ದು, ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಮಲಬಾರ್ ಚಾರಿಟಬಲ್ ಟ್ರಸ್ಟ್ನವರು ವಿತರಿಸಿರುವ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕಾಗಿ ಬಳಸಿಕೊಳ್ಳುವಂತೆ ಮನವಿ ಮಾಡಿದರು.
ನಗರಸಭೆ ಪೌರಾಯುಕ್ತೆ ಲಕ್ಷ್ಮಿ ಮಾತನಾಡಿ ಮಲಬಾರ್ ಚಾರಿಟಬಲ್ ಟ್ರಸ್ಟ್ ತನ್ನ ಆದಾಯದಲ್ಲಿ ಶೇ.೫ ರಷ್ಟು ಹಣವನ್ನು ಇಂತಹ ಪವಿತ್ರವಾದ ಕಾರ್ಯಗಳಿಗೆ ಬಳಸುತ್ತಿರುವುದು ಹೆಮ್ಮೆಯ ಸಂಗತಿ. ಖಾಸಗಿ ಕಂಪನಿಗಳು ಈ ರೀತಿಯ ಸಮಾಜ ಮುಖಿ ಕೆಲಸದಲ್ಲಿ ತೊಡಗಿರುವುದರಿಂದ ನಮ್ಮ ಮೇಲಿನ ಹೊರೆ ಸ್ವಲ್ಪ ಕಡಿಮೆಯಾಗಿದೆ. ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಪ್ರೋತ್ಸಾಹಿಸುತ್ತಿರುವುದು ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಧನೆಗೆ ಸಹಕಾರಿಯಾಗಲಿದೆ ಎಂದರು.
ಮಲಬಾರ್ ಚಾರಿಟಬಲ್ ಟ್ರಸ್ಟ್ನ ಹೈದರ್ ಪ್ರಾಸ್ತಾವಿಕವಾಗಿ ಮಾತನಾಡಿ ೧೯೯೩ ರಲ್ಲಿ ಐದು ಆಭರಣ ಅಂಗಡಿಗಳಿಂದ ಆರಂಭಗೊಂಡ ಮಲಬಾರ್ ಗೋಲ್ಡ್ ಡೈಮಂಡ್ ಕಂಪನಿ ಈಗ ಹದಿನಾಲ್ಕು ದೇಶಗಳಲ್ಲಿ ೪೨೫ ಷೋ ರೂಂಗಳನ್ನು ಹೊಂದಿದ್ದು, ಬೆಂಗಳೂರಿನಲ್ಲಿ ೨೭೫ ಷೋರೂಂಗಳನ್ನು ತೆರೆದಿದೆ. ೬೯ ಸಾವಿರ ಕೋಟಿ ರೂ.ಗಳ ವಹಿವಾಟು ನಡೆಸುತ್ತಿದ್ದು, ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಸಂದಾಯ ಮಾಡುತ್ತಿದೆ. ೧೯೯೯ ರಲ್ಲಿ ಮಲಬಾರ್ ಚಾರಿಟಬಲ್ ಟ್ರಸ್ಟ್ನ್ನು ಆರಂಭಿಸಿ ಲಾಭದಲ್ಲಿ ಶೇ.೫ ರಷ್ಟು ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಕೆ ಮಾಡುತ್ತಿದೆ ಎಂದು ವಿವರಿಸಿದರು.
ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಣ್ಣಪಾಲಯ್ಯ, ವಿಜ್ಞಾನ ಕಾಲೇಜು ಪ್ರಾಚಾರ್ಯ ರವಿಕಾಂತ, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕಿ ತನುಜಾ, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ಷೋರೂಂ ವ್ಯವಸ್ಥಾಪಕ ರಿಜ್ವಾನ್ ಸಮಾರಂಭದಲ್ಲಿ ಭಾಗವಹಿಸಿದ್ದರು.
ಜಿಲ್ಲೆಯ ಏಳು ಸರ್ಕಾರಿ ಶಾಲೆಯ ೫೦ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.



