ಚಂದ್ರವಳ್ಳಿ ನ್ಯೂಸ್, ಮೈಸೂರು :
ಪ್ರತಿದಿನವೂ ಅಮ್ಮನ ದಿನವಾಗಿದ್ದು, ತಾಯಿಯ ಲಾಲನೆ, ಪಾಲನೆ, ಪ್ರೀತಿ, ಯಿಂದ ಬೆಳೆಸುವ ಅವರಿಗೆ ಗೌರವ ಸಲ್ಲಿಸಲೇಬೇಕು. ಅಮ್ಮ ಎನ್ನುವುದು ಹೃದಯವಂತರಾಳದ ಶಬ್ದವಾಗಿದ್ದು, ಅಮ್ಮನಲ್ಲಿ ಸರ್ವಸ್ವವು ಇದೆ ಎಂದು ಜೈ ಹಿಂದ್ ಪ್ರತಿಷ್ಠಾನದ ನಿರ್ದೇಶಕಿ ಕುಸುಮ ಋಗ್ವೇದಿ ತಿಳಿಸಿದರು.
ಅವರು ಮೈಸೂರಿನ ಹೆಬ್ಬಾಳದಲ್ಲಿ ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಅಮ್ಮನ ದಿನ ಕಾರ್ಯಕ್ರಮದಲ್ಲಿ ಹಿರಿಯರಾದ ಪದ್ಮಾವತಮ್ಮ( 85) ಹಾಗೂ ರತ್ನಮ್ಮ(75)ರವರನ್ನು ಗೌರವಿಸಿ ಮಾತನಾಡಿ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ತಾಯಿ ಜಗತ್ತಿನ ವಿಶೇಷ ಶಕ್ತಿ. ಭಾರತೀಯರಿಗೆ ದೈವಿ ಸ್ವರೂಪಿ, ಮಾತೃ ಸ್ವರೂಪಿ ಯಾಗಿದ್ದಾರೆ.
ಭಾರತೀಯ ಮನಸ್ಸುಗಳಿಗೆ ತಾಯಿಯ ದಿನ ಪ್ರತಿದಿನವೂ ಆಗಿರುತ್ತದೆ. ಕುಟುಂಬ ಜೀವನ ಪದ್ಧತಿಯಲ್ಲಿ ತಂದೆ-ತಾಯಿ ಅತಿಥಿಗಳು ದೇವರ ಸಮಾನರಾಗಿದ್ದಾರೆ. ಇದು ನಮ್ಮ ಸಂಸ್ಕೃತಿಯ ದಿವ್ಯ ಮಂತ್ರವಾಗಿದೆ. ತಾಯಿಯ ಪ್ರೀತಿ ಕರುಣೆ, ವಿಶ್ವಾಸ,ಮಮಕಾರ ಸ್ಪೂರ್ತಿ ಚೈತನ್ಯ, ಅಭಿಮಾನ ಸ್ವಾಭಿಮಾನ, ಧೈರ್ಯ, ಸ್ಥೈರ್ಯ, ಶಕ್ತಿ, ಸರ್ವ ಪ್ರತೀಕವಾಗಿದೆ. ಮನೆಯ ಹಿರಿಯರನ್ನು ಗೌರವಿಸಿ ಪ್ರೀತಿಯಿಂದ ನಡೆಸಿಕೊಳ್ಳುವ ಸದ್ಭಾವ ನಮ್ಮಲ್ಲಿ ಮೂಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ ಎಂದರು.
ಜೈ ಹಿಂದ್ ಪ್ರತಿಷ್ಠಾನದ ಉಪಾಧ್ಯಕ್ಷೆ ಹಾಗೂ ಶಿಕ್ಷಕಿ ವಿಜಯಲಕ್ಷ್ಮಿ ಪಿ ವಿ ಮಾತನಾಡಿ ತಾಯಿ ಆಶೀರ್ವಾದ ಪ್ರತಿಯೊಬ್ಬರಿಗೂ ಇರಬೇಕು. ತಂದೆ ತಾಯಿ ಮಾನವನಿಗೆ ಇರುವ ಬಹುದೊಡ್ಡ ಆಸ್ತಿ. ತಂದೆ ತಾಯಿಯನ್ನು ನೋಡಿಕೊಳ್ಳುವ, ಪ್ರೀತಿಸುವ ಗೌರವಿಸುವ ಕಾರ್ಯ ಮಾಡುವ ಗುಣಗಳು ನಮ್ಮಲ್ಲಿ ಬೆಳೆಯಬೇಕು. ಮಕ್ಕಳಿಗಾಗಿ ಸರ್ವಸ್ವವನ್ನು ತ್ಯಾಗ ಮಾಡುವ ತಾಯಿ ತನ್ನ ನೋವನ್ನು ತಾನೇ ಸಹಿಸಿಕೊಂಡು ಸುಖವನ್ನು ಮಕ್ಕಳಿಗೆ ನೀಡುವ ಕಾರ್ಯ ಮರೆಯಲಾಗದು ಎಂದರು.
ತಾಯಿ ಚೈತನ್ಯ ಅರಿಯಬೇಕು. ಭಾರತೀಯರಿಗೆ ಮಾತೃ ಸ್ವರೂಪವಾಗಿರುವ ಭಾರತಾಂಬೆ, ಕನ್ನಡಾಂಬೆ, ನಮಗೆ ಸ್ಪೂರ್ತಿ. ಮರ, ಗಿಡ,ಕಲ್ಲು, ಮಣ್ಣು, ಸಮುದ್ರ ಕೆರೆ ಕಾಲುವೆ ಸರ್ವವನ್ನು ಪ್ರೀತಿಸುವ ಗುಣ ನಮ್ಮದು. ಪ್ರತಿಯೊಬ್ಬರಲ್ಲೂ ಭಗವಂತನನ್ನು ಕಾಣಬೇಕು ಪ್ರತಿಯೊಬ್ಬರೂ ತಂದೆ ತಾಯಿಯ ಸಮಾನರಾಗಿ ನೋಡಿಕೊಂಡಾಗ ಸಮಾಜ ಅತ್ಯಂತ ಸಂತೋಷದಿಂದ ಇರುತ್ತದೆ.
ನೋವುಗಳು ಮರೆಯಾಗುತ್ತವೆ. ಆರೋಗ್ಯವಾಗಿ ಇರಲು ಸಾಧ್ಯವಿದೆ ಮೇ 10 ಮಾತೃ ದಿನವೆಂದು ಆಚರಿಸಿದರು ಭಾರತೀಯರಿಗೆ ಪ್ರತಿದಿನವೂ ಅಮ್ಮನ ದಿನವಾಗಿದೆ ಎಂದು ತಿಳಿಸಿದರು.
ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸಂಸ್ಕೃತಿ ಚಿಂತಕ ಸುರೇಶ್.ಎನ್ ಋಗ್ವೇದಿ ಅಧ್ಯಕ್ಷತೆ ವಹಿಸಿ ಮಾತನಾಡಿ ಅಮ್ಮ ಎನ್ನುವ ಶಬ್ದವೇ ಜಗತ್ತಿನಲ್ಲಿ ವಿಶಿಷ್ಟವಾದ ಶ್ರೇಷ್ಠವಾದ ಶಬ್ದ.
ಪ್ರತಿ ಕೀಟಗಳು ಅಮ್ಮನಿಂದಲೇ ಜನಿತ ವಾಗುವುದು. ಪ್ರತಿಯೊಬ್ಬವ್ಯಕ್ತಿಯ ಸಾಧನೆಗಳಲ್ಲಿ ತಾಯಿಯ ಆಶೀರ್ವಾದ ಹಾಗೂ ಮಾರ್ಗದರ್ಶನ ಇದೆ. ತಾಯಿಯಿಂದಲೇ ಜಗತ್ತು. ಜಗತ್ತು ತಾಯಿಯ ಸೃಷ್ಟಿಯಿಂದ ಆನಂದಮಯವಾಗಿ ಇದೆ ಎಂದು ತಿಳಿಸಿದರು. ಜೈ ಹಿಂದ್ ಪ್ರತಿಷ್ಠಾನದ ಸುರೇಶ್ ಜೋಶಿ, ನಾಗಶ್ರೀ ಕೃಷ್ಣ ಪ್ರಸಾದ್, ಅಧಿತಿ, ಶ್ರಾವ್ಯ ಇದ್ದರು.


