ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಬಿಜೆಪಿಯಲ್ಲಿನ ಇಂದಿನ ಆಂತರಿಕ ಗೊಂದಲ ಮತ್ತು ಅಲ್ಲೋಲ ಕಲ್ಲೋಲಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಅವರೇ ನೇರ ಕಾರಣ ಹೊರತು ಬೇರೆ ಯಾವ ಶಾಸಕರೂ ಅಲ್ಲ," ಎಂದು ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ.ಸೋಮಶೇಖರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ನಾಯಕತ್ವ ಮತ್ತು ಆಂತರಿಕ ಕಲಹದ ಕುರಿತು ಹಲವು ಸ್ಫೋಟಕ ಆರೋಪಗಳನ್ನು ಮಾಡಿದರು.
ಶೋಭಾ ಕರಂದ್ಲಾಜೆಗೆ ಅಸೂಯೆ: ಧರ್ಮಸ್ಥಳಕ್ಕೆ ಕರೆದೊಯ್ಯಲು ಆಗ್ರಹ:
'ಅಡ್ಡ ಮತದಾನ ಮಾಡಿದ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ರಾಜೀನಾಮೆ ನೀಡಲಿ' ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿದ ಸೋಮಶೇಖರ್, "ಶೋಭಾ ಅವರಿಗೆ ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿರುವುದು ಮತ್ತು ಆರ್.ಅಶೋಕ್ ವಿರೋಧ ಪಕ್ಷದ ನಾಯಕರಾಗಿರುವುದನ್ನು ಸಹಿಸಲು ಆಗುತ್ತಿಲ್ಲ. ಈ ಇಬ್ಬರನ್ನೂ ರಾಜಕೀಯವಾಗಿ ಮುಗಿಸಿ ತಾನು ಮೇಲೆ ಬರಬೇಕೆಂಬ ಅಸೂಯೆಯ ಮನಸ್ಥಿತಿ ಅವರದ್ದು," ಎಂದು ಟೀಕಿಸಿದರು.
"63 ಜನ ಶಾಸಕರನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗುವ ಅಗತ್ಯವಿಲ್ಲ. ಮೊದಲು ಶೋಭಾ ಕರಂದ್ಲಾಜೆ ಅವರನ್ನು ಧರ್ಮಸ್ಥಳಕ್ಕೆ ಕರೆದೊಯ್ದು ಆಣೆ ಪ್ರಮಾಣ ಮಾಡಿಸಿದರೆ ಅವರ ನಿಜ ಬಣ್ಣ ಬಯಲಾಗುತ್ತದೆ. ಕೇಂದ್ರ ಸಚಿವೆಯಾಗಿದ್ದರೂ ಅವರಿಗೆ ಒಂದು ಕ್ಷೇತ್ರ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ನಮ್ಮನ್ನು ಉಚ್ಚಾಟಿಸಿರುವ ಇವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ?" ಎಂದು ಪ್ರಶ್ನಿಸಿದರು.
ಅಶೋಕ್-ವಿಜಯೇಂದ್ರ ಧರ್ಮಸ್ಥಳಕ್ಕೆ ಹೋದರೆ ಸಾಕು!:
ಪಕ್ಷದಲ್ಲಿನ ಅಡ್ಡ ಮತದಾನದ ಕುರಿತು ಟಾಂಗ್ ನೀಡಿದ ಸೋಮಶೇಖರ್, "ಆರ್.ಅಶೋಕ್ ಅವರು ವಿಜಯೇಂದ್ರ ಕಡೆಯ ಅಭ್ಯರ್ಥಿಯನ್ನು ಮತ್ತು ವಿಜಯೇಂದ್ರ ಅವರು ಅಶೋಕ್ ಕಡೆಯ ಅಭ್ಯರ್ಥಿಯನ್ನು ಸೋಲಿಸಲು ಅಡ್ಡ ಮತದಾನ ಮಾಡಿಸಿರಬೇಕು. ಇವರಿಬ್ಬರೇ ಮೊದಲು ಧರ್ಮಸ್ಥಳಕ್ಕೆ ಹೋಗಿ ಪ್ರಮಾಣ ಮಾಡಿದರೆ ಸಾಕು, ಬೇರೆ ಯಾರೂ ಹೋಗಬೇಕಾಗಿಲ್ಲ," ಎಂದರು.
ಅಲ್ಲದೆ, "ನಮಗೆ ಕಾಂಗ್ರೆಸ್ ಸರ್ಕಾರ ಕ್ಷೇತ್ರಕ್ಕೆ ಅನುದಾನ ನೀಡಿದೆ, ಹಾಗಾಗಿ ನಾವು ಬಹಿರಂಗವಾಗಿಯೇ ಅವರಿಗೆ ಮತ ಹಾಕಿದ್ದೇವೆ. ಇವರ ತಾಕತ್ತಿದ್ದರೆ ಒಳಗಿನಿಂದಲೇ ಅಡ್ಡ ಮತ ಹಾಕಿದವರು ಯಾರು ಎಂಬುದನ್ನು ಪತ್ತೆ ಹಚ್ಚಲಿ," ಎಂದು ಸವಾಲು ಹಾಕಿದರು.
ಮುನ್ನೆಚ್ಚರಿಕೆ ವಹಿಸುವಲ್ಲಿ ಬಿಜೆಪಿ ವಿಫಲ:
ಪರಿಷತ್ ಚುನಾವಣೆಗೂ ಮುನ್ನ ಬಿಜೆಪಿ ಶಾಸಕರನ್ನು ಒಗ್ಗೂಡಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ ಅವರು, "ಕಾಂಗ್ರೆಸ್ನಲ್ಲಿ ಶಾಸಕರಿಗೆ ಮುನ್ನೆಚ್ಚರಿಕೆಯಾಗಿ ತರಬೇತಿ ನೀಡಲಾಗುತ್ತದೆ. ಆದರೆ ಬಿಜೆಪಿಯವರು ಶಾಸಕರಿಗೆ ಸರಿಯಾಗಿ ವಿಪ್ ಕೂಡ ಜಾರಿ ಮಾಡಲಿಲ್ಲ. ಚುನಾವಣೆ ದಿನ ಬೆಳಗ್ಗೆ 8 ಗಂಟೆಗೆ ಶಾಸಕರಿಗೆ ಮಾಹಿತಿ ನೀಡಿದ್ದರು. ತಮ್ಮದೇ ಆಂತರಿಕ ಕಲಹದಿಂದ ಅಡ್ಡ ಮತದಾನವಾಗಿದ್ದರೂ, ಈಗ ನಮ್ಮನ್ನು ಸಸ್ಪೆಂಡ್ ಮಾಡಿ ನಮ್ಮ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಡದಿ ಟೌನ್ಶಿಪ್ ವಿವಾದ: ವಿಧಾನಸೌಧಕ್ಕೆ ಹೆಚ್ಡಿಕೆ ಬರಲಿ:
ಬಿಡದಿ ಟೌನ್ಶಿಪ್ ವಿಚಾರವಾಗಿ ಡಿಕೆಶಿ-ಹೆಚ್ಡಿಕೆ ಸವಾಲು-ಪ್ರತಿ ಸವಾಲುಗಳ ಕುರಿತು ಪ್ರತಿಕ್ರಿಯಿಸಿದ ಸೋಮಶೇಖರ್, "ಯಾವುದೇ ಹೋರಾಟಗಳಿದ್ದರೂ ವಿಧಾನಸೌಧದಲ್ಲೇ ಸರ್ವಪಕ್ಷ ಸಭೆ ನಡೆಸಿ ಬಗೆಹರಿಸಿಕೊಳ್ಳಬೇಕು. ಕೆಂಪೇಗೌಡ ಬಡಾವಣೆ ವಿವಾದವೂ ಇಲ್ಲೇ ಚರ್ಚೆಯಾಗಿತ್ತು. ಹೆಚ್.ಡಿ.ಕುಮಾರಸ್ವಾಮಿ ಅವರು ವಿಧಾನಸೌಧಕ್ಕೆ ಬಂದು ಮಾತನಾಡಲಿ. ಹಾಗಿದ್ದರೆ ಹೆಚ್ಡಿಕೆ ಅವರು ನೈಸ್ ರಸ್ತೆ ಸಮಸ್ಯೆಯನ್ನು ಯಾಕೆ ಬಗೆಹರಿಸಲಿಲ್ಲ? ಬಿಡದಿ ವಿಚಾರವನ್ನೂ ಇಲ್ಲೇ ಕೂತು ಬಗೆಹರಿಸಿಕೊಳ್ಳಲಿ," ಎಂದರು.
ಕಾಂಗ್ರೆಸ್ ಸೇರ್ಪಡೆ ಹಾಗೂ ಈಶ್ವರಪ್ಪಗೆ ತಿರುಗೇಟು:
ಕಾಂಗ್ರೆಸ್ ಸೇರ್ಪಡೆ: "ಮುಂದಿನ ವಿಧಾನಸಭಾ ಚುನಾವಣೆ ಇರುವುದು 2028 ರಲ್ಲಿ ಇನ್ನೂ ಎರಡು ವರ್ಷ ಬಾಕಿ ಇರುವುದರಿಂದ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಅವರು ತಿಳಿಸಿದರು.
ಈಶ್ವರಪ್ಪ ವಿರುದ್ಧ ವಾಗ್ದಾಳಿ: "ಹಿಂದೆ ಶಾಸಕರನ್ನು ಬಿಜೆಪಿ ಖರೀದಿಸಿತ್ತು ಎಂಬ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 'ಈಶ್ವರಪ್ಪ ಅವರಿಗೆ ನಾಲಿಗೆ ಸರಿಯಿಲ್ಲ, ನಾಲಿಗೆ ಬಿಗಿಹಿಡಿದು ಮಾತನಾಡಲಿ. ಅವರು ಗೌರವಯುತವಾಗಿ ಮಾತನಾಡಿದರೆ ನಾವೂ ಅವರ ವಯಸ್ಸಿಗೆ ಗೌರವ ನೀಡುತ್ತೇವೆ. ನಮ್ಮಿಂದಲೇ ಅವರು ಸಚಿವರಾದವರು, ಬಳಿಕ ತಮ್ಮದೇ ತಪ್ಪಿನಿಂದ ಸಚಿವ ಸ್ಥಾನ ಕಳೆದುಕೊಂಡರು' ಎಂದು ತಿರುಗೇಟು ನೀಡಿದರು.



