ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಪರಿಶ್ರಮ ನೀಟ್ ಅಕಾಡೆಮಿ"ಗೆ ಸಿಎ ಸೈಟ್ ಹಂಚಿಕೆ ಮಾಡಿರುವ ವಿಚಾರವಾಗಿ ಹೈಕೋರ್ಟ್ ವಿವರಣೆ ಕೇಳಿರುವ ಬೆನ್ನಲ್ಲೇ, ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಆಸ್ತಿ ಹಾಗೂ ದುಬಾರಿ ವಾಚ್ಗಳ ವಿಚಾರವನ್ನು ಮುಂದಿಟ್ಟುಕೊಂಡು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್ಡಿಕೆ ಅವರ ಟ್ವೀಟ್ಗಳಿಗೆ ಖಾರವಾಗಿ ತಿರುಗೇಟು ನೀಡಿದರು.
"ಹೈಕೋರ್ಟ್ ನನಗೆ ಚಾಟಿ ಬೀಸಿಲ್ಲ, ಕೇಸ್ ಗೆಲ್ಲುತ್ತೇನೆ":
ತಮ್ಮ ಅಕಾಡೆಮಿಗೆ ಸಿಎ ಸೈಟ್ ಸಿಕ್ಕಿರುವ ಬಗ್ಗೆ ಸ್ಪಷ್ಟನೆ ನೀಡಿದ ಪ್ರದೀಪ್ ಈಶ್ವರ್, "ಹೈಕೋರ್ಟ್ ನನಗೆ ಯಾವುದೇ ಚಾಟಿ ಬೀಸಿಲ್ಲ, ಕೇವಲ ವಿವರಣೆ ಕೇಳಿದೆ ಅಷ್ಟೇ. ನ್ಯಾಯಾಲಯಕ್ಕೆ ನಾನು ಎಲ್ಲಾ ಕಾನೂನುಬದ್ಧ ದಾಖಲೆಗಳನ್ನು ಒದಗಿಸಿ, ಕೇಸ್ ಗೆಲ್ಲುತ್ತೇನೆ. ಒಂದು ಎಕರೆ ಜಾಗವನ್ನು ಲೀಸ್ ಪಡೆದುಕೊಳ್ಳಲು ನಾನು 5 ಕೋಟಿ ರೂಪಾಯಿ ಕಟ್ಟಿದ್ದೇನೆ. ಇದರಲ್ಲಿ ಯಾವುದೇ ಕಾನೂನು ಬಾಹಿರ ನಡೆದಿಲ್ಲ. ಹೀಗಿದ್ದರೂ ಕುಮಾರಸ್ವಾಮಿ ಅವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ" ಎಂದು ಕಿಡಿಕಾರಿದರು.
"ಕುಮಾರಸ್ವಾಮಿ ಪಂಚೆ ಒಂದೇ ಸಿಂಪಲ್, ಉಳಿದದ್ದೆಲ್ಲಾ ದುಬಾರಿ!" ಸುದ್ದಿಗೋಷ್ಠಿಯಲ್ಲಿ ಹೆಚ್ಡಿ ಕುಮಾರಸ್ವಾಮಿ ಅವರ ಜೀವನ ಶೈಲಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ವಾಚ್ಗಳ ಲೆಕ್ಕವನ್ನು ಬಿಚ್ಚಿಟ್ಟರು.
85 ವಾಚ್ಗಳ ಸಂಗ್ರಹ: "ಕುಮಾರಸ್ವಾಮಿ ಅವರ ಬಳಿ ಒಟ್ಟು 85 ಐಷಾರಾಮಿ ವಾಚ್ಗಳಿವೆ. ಇವುಗಳ ಒಟ್ಟು ಮೌಲ್ಯ ಸುಮಾರು 15 ರಿಂದ 20 ಕೋಟಿ ರೂಪಾಯಿ ಆಗುತ್ತದೆ!" ಎಂದು ಅವರು ಆರೋಪಿಸಿದರು.
ಲಕ್ಷಾಂತರ ಮೌಲ್ಯದ ವಾಚ್: "ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ 62 ವಿಭಿನ್ನ ವಾಚ್ಗಳನ್ನು ಕಟ್ಟಿದ್ದಾರೆ. ಅವುಗಳಲ್ಲಿ ಒಂದೊಂದರ ಕನಿಷ್ಠ ಬೆಲೆಯೇ 10 ಲಕ್ಷ ರೂಪಾಯಿ. ಕೆಲವೊಮ್ಮೆ ಅವರು 75 ಲಕ್ಷ ರೂಪಾಯಿ ಮೌಲ್ಯದ ವಾಚ್ ಕೂಡ ಧರಿಸಿದ್ದಾರೆ. ಅವರ ಪಂಚೆ ಒಂದೇ ಸಿಂಪಲ್, ಉಳಿದದ್ದೆಲ್ಲಾ ಅತ್ಯಂತ ದುಬಾರಿ" ಎಂದು ವ್ಯಂಗ್ಯವಾಡಿದರು.
ಒಕ್ಕಲಿಗ ನಾಯಕರನ್ನು ಬೆಳೆಸಲ್ಲ: ಡಿಕೆಶಿ ಸಿಎಂ ಆಗಬಾರದೇ?:
ಕುಮಾರಸ್ವಾಮಿ ಅವರು ಬೇರೆ ನಾಯಕರನ್ನು ಬೆಳೆಯಲು ಬಿಡುವುದಿಲ್ಲ ಎಂದು ಆರೋಪಿಸಿದ ಪ್ರದೀಪ್ ಈಶ್ವರ್, "ಅವರು ಯಾರನ್ನೂ ಸಹಿಸುವುದಿಲ್ಲ, ಅದರಲ್ಲೂ ಒಕ್ಕಲಿಗ ನಾಯಕರನ್ನು ಬೆಳೆಸುವುದಿಲ್ಲ. ಈಗ ಬಡವರ ಹಾಗೂ ಒಬಿಸಿ ಮಕ್ಕಳು ಮುನ್ನಲೆಗೆ ಬರುವುದನ್ನೂ ತಡೆಯುತ್ತಿದ್ದಾರೆ. ಮಾಜಿ ಪ್ರಧಾನಿಗಳ ಮಗ ಸಿಎಂ ಆಗಬಹುದು, ಮೊಮ್ಮಗ ಎಂಪಿ ಆಗಬಹುದು. ಆದರೆ ಒಕ್ಕಲಿಗ ಸಮುದಾಯದವರೇ ಆದ ಡಿಕೆ ಶಿವಕುಮಾರ್ ಅವರು ರಾಜ್ಯದ ಸಿಎಂ ಆಗಬಾರದೇ?" ಎಂದು ನೇರವಾಗಿ ಪ್ರಶ್ನಿಸಿದರು.
ತಮ್ಮ ಪಕ್ಷದ ಬಲವನ್ನು ಪ್ರಸ್ತಾಪಿಸಿದ ಅವರು, "ಕುಮಾರಸ್ವಾಮಿ ಅವರು ಸ್ವಂತ ಮಗನನ್ನು ಮೂರು ಬಾರಿ ಚುನಾವಣೆಗೆ ನಿಲ್ಲಿಸಿದರೂ ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಒಬ್ಬ ಅನಾಥ ಹುಡುಗನನ್ನು (ತಮ್ಮನ್ನು ಉಲ್ಲೇಖಿಸಿ) ಶಾಸಕನನ್ನಾಗಿ ಗೆಲ್ಲಿಸಿದೆ. ಇದು ನಮ್ಮ ಪಕ್ಷದ ತಾಕತ್ತು" ಎಂದರು.
"ಬದನೆಕಾಯಿ ಮಾರಿ 32 ಕೋಟಿ ಆಸ್ತಿ ಮಾಡಿದ್ರಾ?" - ಆಸ್ತಿಯ ಸೋರ್ಸ್ ಕೇಳಿದ ಶಾಸಕ:
ಹೆಚ್ಡಿಕೆ ಕುಟುಂಬದ ಆಸ್ತಿಯ ಮೂಲವನ್ನು ಪ್ರಶ್ನಿಸಿದ ಪ್ರದೀಪ್ ಈಶ್ವರ್ ಹಲವು ಗಂಭೀರ ಸವಾಲುಗಳನ್ನು ಎಸೆದರು.
"ಕುಮಾರಸ್ವಾಮಿ ಅವರ ಬಳಿ 700 ರಿಂದ 800 ಎಕರೆ ಜಮೀನಿದೆ. ಇದರ ಆದಾಯದ ಮೂಲ (Source) ಏನು? ಬಿಡದಿಯಲ್ಲಿ ಅನಿತಾ ಕುಮಾರಸ್ವಾಮಿ ಅವರ ಹೆಸರಿನಲ್ಲಿರುವ 32 ಎಕರೆ ಜಮೀನಿಗೆ ನೀಡಿದ 32 ಕೋಟಿ ರೂಪಾಯಿ ಹಣ ಎಲ್ಲಿಂದ ಬಂತು? ಈ ಭೂಮಿಯನ್ನು ತೋಟದ ಮನೆಯಲ್ಲಿ ಬದನೆಕಾಯಿ ಮಾರಿ ಖರೀದಿ ಮಾಡಿದ್ರಾ? ಅಥವಾ ಬಳ್ಳಾರಿಯಿಂದ ಬಂದಿದ್ದ ಕಿಕ್ ಬ್ಯಾಕ್ ಹಣದಿಂದ ಕೊಂಡುಕೊಂಡಿದ್ದಾ? ಇದಕ್ಕೆ ಕುಮಾರಸ್ವಾಮಿ ಅವರು ಮೊದಲು ಉತ್ತರ ನೀಡಲಿ," ಎಂದು ಪ್ರದೀಪ್ ಈಶ್ವರ್ ಸವಾಲು ಹಾಕಿದ್ದಾರೆ.



