LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಿಕ್ಷಕರ ನೇಮಕಾತಿ ಕರಡು ನಿಯಮಗಳಿಗೆ ಆಕ್ಷೇಪ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳ (ನೇಮಕಾತಿ) (ವಿಶೇಷ) ನಿಯಮಗಳು
2026ರ ಕರಡು ಅಧಿಸೂಚನೆಗೆ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ (ಎಐಐಟಿಎ) ಕರ್ನಾಟಕ ರಾಜ್ಯ ಘಟಕ ಆಕ್ಷೇಪಣೆ ಸಲ್ಲಿಸಿದ್ದು, ಪ್ರೌಢಶಾಲಾ ಗಣಿತ ಶಿಕ್ಷಕರ ಹುದ್ದೆಗಳನ್ನು ನೇಮಕಾತಿಯಲ್ಲಿ ಸೇರಿಸುವುದು ಸೇರಿದಂತೆ ಹಲವು ತಿದ್ದುಪಡಿಗಳನ್ನು ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದೆ.

ಎಐಐಟಿಎ ರಾಜ್ಯಾಧ್ಯಕ್ಷ ಮೊಹಮ್ಮದ್ ರಜಾ ಮಾನ್ವಿ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ಮನವಿಯಲ್ಲಿ, ಜುಲೈ 14ರಂದು ಪ್ರಕಟವಾದ ಕರಡು ನಿಯಮಗಳನ್ನು ಸ್ವಾಗತಿಸುವುದಾಗಿ ತಿಳಿಸಿದ್ದು, ಕೆಲವು ಅಂಶಗಳನ್ನು ಪರಿಷ್ಕರಿಸುವಂತೆ ಕೋರಿದ್ದಾರೆ.

ಕರಡು ನಿಯಮಗಳ ಅನುಸೂಚಿ1ರಲ್ಲಿ ಪ್ರೌಢಶಾಲಾ ಸಹಾಯಕ ಶಿಕ್ಷಕರ ವೃಂದದಲ್ಲಿ ಕಲೆ, ಜೈವಿಕ ವಿಜ್ಞಾನ ಮತ್ತು ಭಾಷಾ ಶಿಕ್ಷಕರ ಹುದ್ದೆಗಳನ್ನು ಸೇರಿಸಲಾಗಿದ್ದರೂ, ಗಣಿತ ಸಹಾಯಕ ಶಿಕ್ಷಕರ ಹುದ್ದೆಗಳನ್ನು ಸೇರಿಸಿಲ್ಲ. ಇದರಿಂದ ಅರ್ಹ ಗಣಿತ ಪದವೀಧರರ ಉದ್ಯೋಗಾವಕಾಶಕ್ಕೆ ಧಕ್ಕೆಯಾಗುವುದಲ್ಲದೆ, ಸರ್ಕಾರಿ ಪ್ರೌಢಶಾಲೆಗಳಲ್ಲಿ ಗಣಿತ ಶಿಕ್ಷಕರ ಕೊರತೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಖಾಲಿ ಇರುವ ಎಲ್ಲ ಗಣಿತ ಶಿಕ್ಷಕರ ಹುದ್ದೆಗಳನ್ನು ಪ್ರಸಕ್ತ ನೇಮಕಾತಿಯಲ್ಲಿ ಸೇರಿಸಿ, ಅಗತ್ಯವಿದ್ದರೆ ತಿದ್ದುಪಡಿ ಅಧಿಸೂಚನೆ ಹೊರಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ನೇಮಕಾತಿ ವಿಧಾನಕ್ಕೆ ಸಂಬಂಧಿಸಿದಂತೆ, ಪ್ರೌಢಶಾಲಾ ಸಹಾಯಕ ಶಿಕ್ಷಕರ ಆಯ್ಕೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ (ಸಿಇಟಿ) ಶೇ.85 ಹಾಗೂ ಶೈಕ್ಷಣಿಕ ಅರ್ಹತೆಗೆ ಶೇ.13 ಅಂಕ ನಿಗದಿಪಡಿಸಿರುವುದನ್ನು ಮರುಪರಿಶೀಲಿಸಿ, ಶೈಕ್ಷಣಿಕ ಸಾಧನೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಸಂಘ ಆಗ್ರಹಿಸಿದೆ. 6ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿ ಸಿಇಟಿಗೆ ಶೇ.70 ಹಾಗೂ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿಇಟಿ) ಶೇ.20 ಅಂಕ ನಿಗದಿಪಡಿಸಿರುವ ಕ್ರಮವನ್ನು ಸಂಘ ಸ್ವಾಗತಿಸಿದೆ.

ಕಂಪ್ಯೂಟರ್ ವಿಜ್ಞಾನ ಶಿಕ್ಷಕರು ನೇಮಕಗೊಂಡ ಬಳಿಕ ಐದು ವರ್ಷಗಳೊಳಗೆ ಬಿ.ಎಡ್. ಹಾಗೂ ಟಿಇಟಿ ಅರ್ಹತೆ ಪಡೆಯಲು ಅವಕಾಶ ನೀಡಿರುವ ನಿಯಮವನ್ನು ಬೆಂಬಲಿಸಿರುವ ಸಂಘ, ಕಳೆದ ಹಲವು ವರ್ಷಗಳಿಂದ ಶಿಕ್ಷಕರ ನೇಮಕಾತಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ ಎರಡು ವರ್ಷಗಳ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ಕೋರಿದೆ.

ಸ್ಪರ್ಧಾತ್ಮಕ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮವನ್ನು ಪರೀಕ್ಷೆಗೆ ಕನಿಷ್ಠ 45 ದಿನಗಳ ಮುಂಚಿತವಾಗಿ ಪ್ರಕಟಿಸಬೇಕು. ಇದರಿಂದ ಅಭ್ಯರ್ಥಿಗಳಿಗೆ ಸಮರ್ಪಕವಾಗಿ ಸಿದ್ಧತೆ ನಡೆಸಲು ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಉರ್ದು ಮಾಧ್ಯಮಕ್ಕೆ ಸಂಬಂಧಿಸಿದಂತೆ, ಎಚ್‌ಎಸ್‌ಟಿಆರ್ (HSTR) ನೇಮಕಾತಿಯಡಿ ಉರ್ದು ಮಾಧ್ಯಮದ ಸಮಾಜ ವಿಜ್ಞಾನ ಹಾಗೂ ಉರ್ದು ಭಾಷಾ ಶಿಕ್ಷಕರ ಹುದ್ದೆಗಳ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿರುವುದು ಆತಂಕಕಾರಿ ಎಂದು ಸಂಘ ಹೇಳಿದೆ. ಹಿಂದಿನ ನೇಮಕಾತಿಗಳಲ್ಲಿ ಉರ್ದು ಮಾಧ್ಯಮದ ಅಭ್ಯರ್ಥಿಗಳಿಗೆ ಉರ್ದು ಭಾಷೆಯಲ್ಲೇ ಪರೀಕ್ಷೆ ಬರೆಯಲು ಅವಕಾಶವಿದ್ದರೆ, ಹೊಸ ಕರಡು ನಿಯಮಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಿಗೆ ಮಾತ್ರ ಅವಕಾಶ ಕಲ್ಪಿಸಿರುವುದು ಉರ್ದು ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಆಕ್ಷೇಪಿಸಲಾಗಿದೆ.

 

ಇದಲ್ಲದೆ, ಈ ಹಿಂದೆ ಉರ್ದು ಭಾಷಾ ಶಿಕ್ಷಕರ ನೇಮಕಾತಿಯಲ್ಲಿ 100 ಅಂಕಗಳ ಉರ್ದು ಭಾಷಾ ಪ್ರಾವೀಣ್ಯ ಪರೀಕ್ಷೆ ಇದ್ದರೆ, ಹೊಸ ಕರಡು ನಿಯಮದಲ್ಲಿ ಅದರ ಬದಲಿಗೆ 50 ಅಂಕಗಳ ಕನ್ನಡ ಮತ್ತು 50 ಅಂಕಗಳ ಇಂಗ್ಲಿಷ್ ಪರೀಕ್ಷೆಯನ್ನು ನಿಗದಿಪಡಿಸಿರುವುದು ಉರ್ದು ಭಾಷೆಯನ್ನು ಕಡೆಗಣಿಸಿದಂತಾಗಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.

ಈ ಎಲ್ಲ ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಗಣಿತ ಶಿಕ್ಷಕರ ಹುದ್ದೆಗಳನ್ನು ನೇಮಕಾತಿಗೆ ಸೇರಿಸುವುದರ ಜೊತೆಗೆ ಉರ್ದು ಮಾಧ್ಯಮದ ಅಭ್ಯರ್ಥಿಗಳ ಶೈಕ್ಷಣಿಕ ಹಾಗೂ ಭಾಷಾ ಹಕ್ಕುಗಳನ್ನು ಸಂರಕ್ಷಿಸುವಂತೆ ಎಐಐಟಿಎ ರಾಜ್ಯಾಧ್ಯಕ್ಷ ಮೊಹಮ್ಮದ್ ರಜಾ ಮಾನ್ವಿ ಮನವಿ ಮಾಡಿದ್ದಾರೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭರಮಗಿರಿ ಕೆರೆ ಭಾಗದ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರಿನ ಸಮಸ್ಯೆ ಪರಿಹಾರಕ್ಕೆ ₹1.25 ಕೋಟಿ ಅನುದಾನ ಕೋರಿ ಮನವಿಪತ್ರ ಸಲ್ಲಿಸಿದ ಸುಹಾಸ್ ಸುಧಾಕರ್ಮುದ್ದನಾಯ್ಕನಪಾಳ್ಯ ಗ್ರಾಮಕ್ಕೆ ಜಿಲ್ಲಾ ಪಂಚಾಯ್ತಿ ಸಿಇಒ ದಿಢೀರ್ ಭೇಟಿ ದೊಡ್ಡ ತುಮಕೂರು, ಕೊಡಿಗೇಹಳ್ಳಿ ಗ್ರಾಪಂಗೆ ಡಾ. ವಾಸಂತಿ ಅಮರ್ ದಿಢೀರ್ ಭೇಟಿಶಿರಾ–ಬಡವನಹಳ್ಳಿ ಚತುಷ್ಪಥ ರಸ್ತೆ ಕಾಮಗಾರಿಗೆ ಗ್ರೀನ್ ಸಿಗ್ನಲ್: ಕೇವಲ 4 ಗಂಟೆಗೆ ತಿರುಪತಿ ತಲುಪಲು ಸಾಧ್ಯ–ಸೋಮಣ್ಣಪಿಜಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ –10 ಮಂದಿಗೆ ಗಂಭೀರ ಗಾಯಬರ ಎದುರಿಸಲು ಸರ್ಕಾರ ಸಿದ್ಧ: ಡಿಸಿಎಂ ಜಿ. ಪರಮೇಶ್ವರ್ಪ್ರಶ್ನೆ ಪತ್ರಿಕೆ ಸೋರಿಕೆ ದೇಶದ ಭವಿಷ್ಯದ ವಿಚಾರ, ಬಿಜೆಪಿಯವರು ವೈಫಲ್ಯ ಒಪ್ಪಿಕೊಳ್ಳಲಿ: ಸಿಎಂ ಡಿ.ಕೆ. ಶಿವಕುಮಾರ್ ಆಗ್ರಹನೀಟ್‌ ಪತ್ರಿಕೆ ಸೋರಿಕೆ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ವಿಶೇಷ ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯ– ಪ್ರಧಾನಿ ಮೋದಿ ಘೋಷಣೆಸೆಮಿಕಂಡಕ್ಟರ್ ವಲಯದಲ್ಲಿ ಕರ್ನಾಟಕದ ಬೃಹತ್ ಜಿಗಿತ': ಸಚಿವ ಎಂ.ಬಿ ಪಾಟೀಲ್'ದೆಹಲಿಯಲ್ಲಿ ಸಂವಿಧಾನದ ಪಾಠ, ರಾಜ್ಯದಲ್ಲಿ ಗೂಂಡಾಗಿರಿ: ಕಾಂಗ್ರೆಸ್‌ ಮೌನಕ್ಕೆ ಅಶೋಕ್ ತೀವ್ರ ತರಾಟೆ'