ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಬ್ಇನ್ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿ ಕಪಾಳಮೋಕ್ಷ ಮಾಡಿದ ಆರೋಪ ಎದುರಿಸುತ್ತಿರುವ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯಾಗೆ ಹಿನ್ನಡೆಯಾಗಿದೆ. ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
ತಮ್ಮ ಬಂಧನದಿಂದ ವಿನಾಯಿತಿ ಕೋರಿ ಐಶ್ವರ್ಯಾ ಅವರು ಶ್ರೀರಂಗಪಟ್ಟಣದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಪೀಠ, ಜಾಮೀನು ನೀಡಲು ಸ್ಪಷ್ಟವಾಗಿ ನಿರಾಕರಿಸಿದೆ.
ಪ್ರಕರಣದ ಹಿನ್ನೆಲೆ ಹಾಗೂ ಗಂಭೀರ ಆರೋಪಗಳು:
ಕಳೆದ ಆಗಸ್ಟ್ 12 ರಂದು 'ಭೀಮನ ಅಮಾವಾಸ್ಯೆ' ನಿಮಿತ್ತ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ 'ಅರತಿ ಉಕ್ಕಡದ ಮಾರಮ್ಮ ದೇವಾಲಯ'ದಲ್ಲಿ ಅಪಾರ ಪ್ರಮಾಣದ ಭಕ್ತರು ನೆರೆದಿದ್ದರು.
ಈ ವೇಳೆ ಸಾರ್ವಜನಿಕರ ದಟ್ಟಣೆ ನಿಯಂತ್ರಣಕ್ಕಾಗಿ ಕರ್ತವ್ಯದಲ್ಲಿದ್ದ ಮಂಡ್ಯ ಮಹಿಳಾ ಠಾಣೆಯ ಪಿಎಸ್ಐ ಸವಿತಾ ಬಿ. ಪಾಟೀಲ್ ಅವರನ್ನು ನೇಮಿಸಲಾಗಿತ್ತು.
ದೇವಸ್ಥಾನಕ್ಕೆ ಆಗಮಿಸಿದ್ದ ಶಾಸಕರ ಪುತ್ರಿ ಐಶ್ವರ್ಯಾ ಅವರು ಭಕ್ತರ ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಗರ್ಭಗುಡಿಗೆ ತೆರಳಲು ಯತ್ನಿಸಿದಾಗ ಪಿಎಸ್ಐ ತಡೆದಿದ್ದಾರೆ. ಈ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಕೋಪಗೊಂಡ ಐಶ್ವರ್ಯಾ ಪಿಎಸ್ಐ ಕಪಾಳಕ್ಕೆ ಬಾರಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಪಿಎಸ್ಐ ಸವಿತಾ ನೀಡಿದ ದೂರಿನ ಮೇರೆಗೆ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ, ಬೆದರಿಕೆ ಹಾಗೂ ಅವಮಾನದ ಹಿನ್ನೆಲೆಯಲ್ಲಿ 'ಭಾರತೀಯ ನ್ಯಾಯ ಸಂಹಿತೆ'ಯ ವಿವಿಧ ಕಠಿಣ ಸೆಕ್ಷನ್ಗಳಡಿ ಎಫ್ಐಆರ್ ದಾಖಲಿಸಲಾಗಿದೆ.
ಮತ್ತೊಂದೆಡೆ, ಐಶ್ವರ್ಯಾ ಕೂಡ ಪಿಎಸ್ಐ ವಿರುದ್ಧ ಪ್ರತಿದೂರು ನೀಡಿದ್ದು, 'ಪೊಲೀಸ್ ಅಧಿಕಾರಿಯೇ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ' ಎಂದು ಆರೋಪಿಸಿದ್ದಾರೆ. ಸದ್ಯ ಎರಡೂ ದೂರುಗಳ ಕುರಿತು ಮಂಡ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದ ಶಾಸಕ:
ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಶಾಸಕ ಸುರೇಶ್ ಗೌಡ ಅವರು ಪುತ್ರಿಯ ವರ್ತನೆಗೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. "ದೇವಾಲಯಗಳು ಶಾಂತಿಯ ಸಂಕೇತ. ಯಾರೇ ತಪ್ಪು ಮಾಡಿದ್ದರೂ ಕಾನೂನಿನ ಮುಂದೆ ಎಲ್ಲರೂ ಸಮಾನರು. ಧಾರ್ಮಿಕ ಸ್ಥಳಗಳಲ್ಲಿ 'ವಿಐಪಿ ಸಂಸ್ಕೃತಿ' ಸಂಪೂರ್ಣವಾಗಿ ಬಂದ್ ಆಗಬೇಕು. ಕಾನೂನಾತ್ಮಕವಾಗಿ ಪ್ರಕರಣ ಎದುರಿಸಲು ಸಿದ್ಧರಿದ್ದೇವೆ" ಎಂದು ಹೇಳಿಕೆ ನೀಡಿದ್ದರು.




