ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ, ಕೊಲೆ, ಸುಲಿಗೆ ಮತ್ತು ದರೋಡೆಯಂತಹ ಗಂಭೀರ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ತೀವ್ರ ಆತಂಕಕಾರಿಯಾಗಿದೆ. ಇಂತಹ ಘೋರ ಕೃತ್ಯಗಳಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕರು ಸಹ ಭಾಗಿಯಾಗುತ್ತಿರುವುದು ಸಮಾಜದಲ್ಲಿ ಭಯ ಮತ್ತು ಅಶಾಂತಿಗೆ ಕಾರಣವಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ಹೀನ ಕೃತ್ಯಗಳನ್ನು ಎಸಗುವ ಅಪ್ರಾಪ್ತರನ್ನು ವಯಸ್ಕರೆಂದೇ ಪರಿಗಣಿಸಿ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ರಾಷ್ಟ್ರಪತಿಯವರಿಗೆ ದಾವಣಗೆರೆ ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಗಿದೆ.
ಹೆಲ್ಪ್ ಲೈನ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ಜೀವ ರಕ್ಷಕ ಸುಭಾನ್ ಸಾಬ್ ನಡಾಫ್ ಆರ್.ಡಿ ಅವರು ಈ ಪತ್ರಿಕಾ ಪ್ರಕಟಣೆ ಮೂಲಕ ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ರಾಷ್ಟ್ರಪತಿಯವರನ್ನು ಕೋರಿದ್ದಾರೆ.
ಅಪರಾಧದ ಗಾಂಭೀರ್ಯಕ್ಕೆ ಆದ್ಯತೆ: ಹೀನ ಹಾಗೂ ಕ್ರೂರ ಕೃತ್ಯಗಳನ್ನು ಎಸಗುವ ಅಪ್ರಾಪ್ತರನ್ನು ಕೇವಲ ವಯಸ್ಸಿನ ಆಧಾರದ ಮೇಲೆ ಮನ್ನಿಸಬಾರದು. ಅವರು ಮಾಡಿದ ಅಪರಾಧದ ಗಾಂಭೀರ್ಯತೆಯನ್ನು ಪರಿಗಣಿಸಿ, ವಯಸ್ಕರಂತೆ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಬೇಕು.
ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ: ಒಬ್ಬ ವ್ಯಕ್ತಿಯಲ್ಲಿ ಅತ್ಯಾಚಾರ, ಕೊಲೆಯಂತಹ ಭೀಕರ ಅಪರಾಧಗಳನ್ನು ಎಸಗುವ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಇದ್ದರೆ, ಆತನನ್ನು ಕಾನೂನಿನ ದೃಷ್ಟಿಯಲ್ಲಿ ಪ್ರಾಪ್ತವಯಸ್ಕನೆಂದೇ ಪರಿಗಣಿಸುವುದು ನ್ಯಾಯಸಮ್ಮತವಾಗಿದೆ.
ಅಂತಾರಾಷ್ಟ್ರೀಯ ಉದಾಹರಣೆ: ಇತ್ತೀಚೆಗೆ ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದಲ್ಲಿ 10 ವರ್ಷದ ಬಾಲಕನೊಬ್ಬ ತನ್ನ ತಂದೆಯನ್ನು ಕೊಂದ ಪ್ರಕರಣದಲ್ಲಿ, ಅಲ್ಲಿನ ನ್ಯಾಯಾಲಯವು "ಇದು ಅತ್ಯಂತ ಹೀನ ಕೃತ್ಯ" ಎಂದು ಅಭಿಪ್ರಾಯಪಟ್ಟು, ಬಾಲಕನನ್ನು ವಯಸ್ಕನಂತೆ ಪರಿಗಣಿಸಿ ವಿಚಾರಣೆ ನಡೆಸಲು ಮಹತ್ವದ ಆದೇಶ ಹೊರಡಿಸಿರುವುದನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಕಾನೂನು ತಿದ್ದುಪಡಿಗೆ ಆಗ್ರಹ:
ಆದ್ದರಿಂದ, ನಮ್ಮ ದೇಶದಲ್ಲಿಯೂ ಅತ್ಯಾಚಾರ, ಕೊಲೆ ಹಾಗೂ ಇತರೆ ಹೀನ ಕೃತ್ಯಗಳಲ್ಲಿ ಭಾಗಿಯಾಗುವ ಅಪ್ರಾಪ್ತರನ್ನು ವಯಸ್ಕರೆಂದು ಪರಿಗಣಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಸಂಬಂಧಿತ ಕಾನೂನುಗಳಲ್ಲಿ ಅಗತ್ಯ ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಹೆಲ್ಪ್ ಲೈನ್ ಸುಭಾನ್ ಅವರು ರಾಷ್ಟ್ರಪತಿಯವರಲ್ಲಿ ವಿನಂತಿಸಿಕೊಂಡಿದ್ದಾರೆ.



