ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಗೃಹಲಕ್ಷ್ಮಿ' ಯೋಜನೆ ಕೇವಲ ಬಡ ಕುಟುಂಬಗಳ ಆಸರೆಯಾಗಿ ಉಳಿಯದೆ, ರೈತರ ಬದುಕಿಗೆ ಹೊಸ ಶಕ್ತಿ ನೀಡುವ ಸಾಧನವಾಗಿ ಬದಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಧಾರವಾಡ ಜಿಲ್ಲೆಯ ಕಲಘಟಗಿಯ ಮಹಿಳೆಯೊಬ್ಬರು ತಮಗೆ ಬಂದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು ತನ್ನ ಜಮೀನಿನಲ್ಲಿ ಬೋರ್ವೆಲ್ ಕೊರೆಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.
ಉಳಿತಾಯದ ಹಣದಲ್ಲಿ ಕೃಷಿ ಸಂಜೀವಿನಿ:
ಕಲಘಟಗಿಯ ನಿವಾಸಿ ಶ್ರೀಮತಿ ಈರವ್ವ ಭರಮಪ್ಪ ಅಂಗಡಿ ಅವರು ಪ್ರತಿ ತಿಂಗಳು ತಮಗೆ ಲಭಿಸುವ 2,000 ರೂಪಾಯಿಗಳ ಗೃಹಲಕ್ಷ್ಮಿ ಹಣವನ್ನು ಪೋಲು ಮಾಡದೆ ಎಚ್ಚರಿಕೆಯಿಂದ ಉಳಿತಾಯ ಮಾಡಿದ್ದರು. ಕೃಷಿಯನ್ನೇ ನಂಬಿಕೊಂಡಿರುವ ಈರವ್ವ, ತಮ್ಮ ಜಮೀನಿನ ನೀರಿನ ಸಮಸ್ಯೆಯನ್ನು ನೀಗಿಸಲು ಈ ಉಳಿತಾಯದ ಮೊತ್ತವನ್ನೇ ಬಂಡವಾಳವನ್ನಾಗಿಸಿಕೊಂಡು ಬೋರ್ವೆಲ್ ಕೊರೆಸಿದ್ದಾರೆ.
ಡಿ.ಕೆ. ಶಿವಕುಮಾರ್ ಅಭಿನಂದನೆ:
ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈರವ್ವ ಅವರ ಮಹತ್ಕಾರ್ಯವನ್ನು ಶ್ಲಾಘಿಸಿದ್ದಾರೆ.
"ಬಡ ಜನರ ಜೀವನದಲ್ಲಿ ಗ್ಯಾರಂಟಿಗಳು ಬದಲಾವಣೆ ತಂದಿವೆ ಎಂಬುದಕ್ಕೆ ಈರವ್ವ ಅವರೇ ಸಾಕ್ಷಿ. ಗೃಹಲಕ್ಷ್ಮಿ ಹಣವನ್ನು ಕರುನಾಡಿನ ಗೃಹಿಣಿಯರು ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಹಾಗೂ ಸ್ವಾವಲಂಬಿ ಜೀವನಕ್ಕೆ ಬಳಸುತ್ತಿರುವುದು ಹೆಮ್ಮೆಯ ಸಂಗತಿ," ಎಂದು ಅವರು ತಿಳಿಸಿದ್ದಾರೆ.
ದೇಶಕ್ಕೇ ಮಾದರಿಯಾದ ಪಂಚ ಗ್ಯಾರಂಟಿಗಳು:
ರಾಜ್ಯದಲ್ಲಿ ಜಾರಿಯಾಗಿರುವ ಪಂಚ ಗ್ಯಾರಂಟಿ ಯೋಜನೆಗಳು ಇಂದು ಇಡೀ ದೇಶಕ್ಕೆ ಮಾದರಿಯಾಗಿವೆ. ಈರವ್ವ ಅವರಂತಹ ಅನೇಕ ಮಹಿಳೆಯರು ಈ ಹಣವನ್ನು ಆರ್ಥಿಕ ಸಬಲೀಕರಣಕ್ಕಾಗಿ ಬಳಸಿಕೊಳ್ಳುತ್ತಿರುವುದು ಯೋಜನೆಯ ಯಶಸ್ಸಿಗೆ ಕನ್ನಡಿ ಹಿಡಿದಿದೆ.
ಈರವ್ವ ಅವರು ಕೃಷಿಯಲ್ಲಿ ಇನ್ನಷ್ಟು ಉತ್ತಮ ಸಾಧನೆಗೈದು ನಾಡಿನ ರೈತರಿಗೆ ಮಾದರಿಯಾಗಲಿ ಎಂದು ಸರ್ಕಾರ ಮತ್ತು ಸಾರ್ವಜನಿಕರು ಶುಭ ಹಾರೈಸಿದ್ದಾರೆ.


