ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ರಾಜಕಾರಣದಲ್ಲಿ ಸದ್ಯ 'ದುಬಾರಿ ವಾಚ್' ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವೆ ವಾಕ್ಸಮರ ತಾರಕಕ್ಕೇರಿದೆ.
" ಹೆಚ್ ಡಿಕೆ ಅವರ ಪಂಚೆ ಮಾತ್ರ ಸಿಂಪಲ್, ಆದರೆ ಅವರು ಕಟ್ಟುವ ವಾಚ್ ಕೋಟಿ ಬೆಲೆಯದ್ದು" ಎಂಬ ಪ್ರದೀಪ್ ಈಶ್ವರ್ ಆರೋಪಕ್ಕೆ ಕೇಂದ್ರ ಸಚಿವರು ಮಾಧ್ಯಮಗಳ ಎದುರೇ ತಮ್ಮ ಕೈಲಿದ್ದ ವಾಚ್ ತೋರಿಸಿ ಖಡಕ್ ತಿರುಗೇಟು ನೀಡಿದ್ದಾರೆ.
ಪ್ರದೀಪ್ ಈಶ್ವರ್ ಮಾಡಿದ ಗಂಭೀರ ಆರೋಪಗಳೇನು?:
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಇತ್ತೀಚೆಗೆ ಕುಮಾರಸ್ವಾಮಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ಕುಮಾರಸ್ವಾಮಿ ಅವರ ಬಳಿ ಸುಮಾರು 85 ಐಷಾರಾಮಿ ವಾಚುಗಳು ಹಾಗೂ 700 ರಿಂದ 800 ಎಕರೆ ಜಮೀನಿದೆ.
ಅವರ ಬಳಿ ಇರುವ ವಾಚ್ಗಳ ಒಟ್ಟು ಮೌಲ್ಯವೇ 10 ರಿಂದ 20 ಕೋಟಿ ರೂಪಾಯಿ ಆಗುತ್ತದೆ. "ನಾನು 80 ಲಕ್ಷದ ವಾಚ್ ಕಟ್ಟುತ್ತೇನೆ" ಎಂದು ಬಿಂಬಿಸಿಕೊಳ್ಳುವ ಅವರು, ಇಷ್ಟೊಂದು ಆಸ್ತಿಯನ್ನು ಬದನೆಕಾಯಿ ಮಾರಿ ಗಳಿಸಿದರೇ? ಎಂದು ಪ್ರಶ್ನಿಸಿದ್ದರು.
SIT ತನಿಖೆ ಮಾಡಿಸಿ; ಕುಮಾರಸ್ವಾಮಿ ಸವಾಲು:
ಈ ಆರೋಪಕ್ಕೆ ಸುದ್ದಿಗಾರರ ಮುಂದೆ ತಕ್ಷಣವೇ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ತಮ್ಮ ಕೈಲಿದ್ದ ವಾಚ್ ಅನ್ನು ಕ್ಯಾಮೆರಾಗಳಿಗೆ ತೋರಿಸಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
"ನಾನು ದುಬಾರಿ ವಾಚ್ ಕಟ್ಟುತ್ತೇನೆ ಎಂದು ಕಾಂಗ್ರೆಸ್ಸಿಗರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದರೆ ಒಮ್ಮೆ ನೋಡಿ, ನನ್ನ ಕೈಲಿರುವುದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿತ್ರವಿರುವ ಅತ್ಯಂತ ಸಾಧಾರಣ HMT ವಾಚ್. ಅವರಿಗೆ ಏನಾದರೂ ಅನುಮಾನಗಳಿದ್ದರೆ, ಅವರದ್ದೇ ಸರ್ಕಾರ ಇದೆ, ಅವರ ಬಳಿಯೇ SIT (ವಿಶೇಷ ತನಿಖಾ ದಳ) ಇದೆಯಲ್ಲ? ತನಿಖೆ ಮಾಡಿಸಿ ಆ ವಾಚ್ಗಳನ್ನು ಅವರೇ ತೆಗೆದುಕೊಂಡು ಹೋಗಲಿ" ಎಂದು ಟಾಂಗ್ ನೀಡಿದರು.
ಅಸಲಿಗೆ ಆ ವಾಚ್ ಬೆಲೆ ಎಷ್ಟು?:
ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ತೋರಿಸಿದ ಅಂಬೇಡ್ಕರ್ ಚಿತ್ರವಿರುವ ಹೆಚ್ಎಂಟಿ ವಾಚ್ನ ಮೌಲ್ಯ ಆನ್ಲೈನ್ ಮಾರುಕಟ್ಟೆಯಲ್ಲಿ ತೀರಾ ಸಾಮಾನ್ಯವಾಗಿದೆ. ವಿವಿಧ ಮಾದರಿಗಳಿಗೆ ಅನುಗುಣವಾಗಿ ಈ ವಾಚ್ಗಳ ಬೆಲೆ ಕೇವಲ 1,699 ರೂ. ನಿಂದ 2,350 ರೂಪಾಯಿ ತನಕ ಇದೆ ಎನ್ನಲಾಗಿದೆ.
ಒಟ್ಟಿನಲ್ಲಿ, ಕೋಟಿ ಕೋಟಿ ಬೆಲೆಯ ವಾಚ್ ಎಂದು ಆರೋಪಿಸಿದ್ದ ಕಾಂಗ್ರೆಸ್ಗೆ, ಕುಮಾರಸ್ವಾಮಿ ಅವರು ಬಜೆಟ್ ಫ್ರೆಂಡ್ಲಿ ಸ್ವದೇಶಿ ವಾಚ್ ತೋರಿಸುವ ಮೂಲಕ ತಿರುಗೇಟು ನೀಡಿರುವುದು ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.



