ಚಂದ್ರವಳ್ಳಿ ನ್ಯೂಸ್ ಹಿರಿಯೂರು: ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ (VJNL) ವ್ಯಾಪ್ತಿಗೆ ಒಳಪಡುವ ಐತಿಹಾಸಿಕ ವಾಣಿ ವಿಲಾಸ ಸಾಗರ (ವಿ.ವಿ. ಸಾಗರ) ಹಾಗೂ ಗಾಯತ್ರಿ ಜಲಾಶಯಗಳಿಗೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಅಣೆಕಟ್ಟುಗಳ ಸುರಕ್ಷತಾ ಕಾಯ್ದೆ-2021ರ (Dam Safety Act-2021) ನಿಯಮಾವಳಿಗಳ ಪ್ರಕಾರ, ಈ ಎರಡೂ ಜಲಾಶಯಗಳ ಸಮಗ್ರ ಅಣೆಕಟ್ಟು ಸುರಕ್ಷತಾ ಮೌಲ್ಯಮಾಪನ (Comprehensive Dam Safety Evaluation - CDSE) ಕೈಗೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸ್ವತಂತ್ರ ತಜ್ಞರ ಸಮಿತಿ (Independent Panel of Experts - IPoE) ದಿನಾಂಕ 12.08.2026 ರಿಂದ 16.08.2026 ರವರೆಗೆ ಜಲಾಶಯಗಳಿಗೆ ಭೇಟಿ ನೀಡಿ ಸ್ಥಳದಲ್ಲೇ ಸಮಗ್ರ ಪರಿಶೀಲನೆ ನಡೆಸಲಿದೆ.
ತಜ್ಞರ ತಂಡದ ಪರಿಶೀಲನೆ ಕಾರ್ಯದ ಜೊತೆಗೆ ಕೆಲವು ಅತ್ಯಂತ ತುರ್ತು ಅಣೆಕಟ್ಟು ಸುರಕ್ಷತಾ ಕಾಮಗಾರಿಗಳನ್ನೂ ಕೈಗೊಳ್ಳಲಾಗುತ್ತಿದೆ.
ಆದ್ದರಿಂದ ಸುರಕ್ಷತೆಯ ಹಿತದೃಷ್ಟಿಯಿಂದ ಆಗಸ್ಟ್ 12 ರಿಂದ ಆಗಸ್ಟ್ 16 ರವರೆಗೆ (5 ದಿನಗಳು) ಸಾರ್ವಜನಿಕರು ಮತ್ತು ವೀಕ್ಷಕರಿಗೆ ಜಲಾಶಯ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ಅವಧಿಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕಾರ್ಯಪಾಲಕ ಇಂಜಿನಿಯರ್, ವಿ.ಜ.ನಿ.ನಿ., ಭದ್ರಾ ಮೇಲ್ದಂಡೆ ಯೋಜನೆ, ವಿಭಾಗ ನಂ.07, ಹಿರಿಯೂರು ಇವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



