ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೈಹಿಕ ಚಟುವಟಿಕೆಗಳಿಲ್ಲದೇ ದುಶ್ಚಟಗಳಿಂದ ಅನಾರೋಗ್ಯಗೊಳ್ಳುತ್ತಿರುವ ಇಂದಿನ ಯುವ ಜನತೆಗೆ ಯೋಗ, ವ್ಯಾಯಾಮದಂತಹ ಚಟುವಟಿಕೆಗಳು ಅಗತ್ಯವಿದ್ದು, ಶ್ರೀ ಮಾರುತಿ ವ್ಯಾಯಾಮ ಶಾಲೆಯಂತಹ ಸಂಸ್ಥೆಗಳು ಸಮಾಜಕ್ಕೆ ಬೇಕಿವೆ ಎಂದು ಪುಷ್ಪಾಂಡಜ ಆಶ್ರಮದ ಪೀಠಾಧ್ಯಕ್ಷರಾದ ದಿವ್ಯಜ್ಞಾನಾನಂದ ಸ್ವಾಮೀಜಿ ತಿಳಿಸಿದರು.
ನಗರದ ಕೆ.ಎಂ.ಎಚ್. ಕನ್ವೆಂಷನ್ ಹಾಲ್ ನಲ್ಲಿ ಶ್ರೀ ಮಾರುತಿ ವ್ಯಾಯಾಮ ಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ನಡೆದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ
ಇತ್ತೀಚಿನ ದಿನಗಳಲ್ಲಿ ಯುವಜನತೆ ಮೊಬೈಲ್ ಗೀಳಿನಿಂದ ಆಟೋಟ, ವ್ಯಾಯಾಮಗಳಿಂದ ದೂರ ಉಳಿಯುತ್ತಿದ್ದಾರೆ. ಉತ್ತಮ ಉತ್ತಮ ದೇಹವನ್ನು ಹೊಂದಿರುವ ವ್ಯಕ್ತಿಗಳು, ತಮ್ಮ ಆರೋಗ್ಯದೊಂದಿಗೆ ಸಮಾಜಕ್ಕೂ ಸೇವೆ ನೀಡುತ್ತಾರೆ ಎನ್ನವುದಕ್ಕೆ ಇತಿಹಾಸದ ಭಗತ್ ಸಿಂಗ್ ನಿದರ್ಶನ. ಮಾರುತಿ ವ್ಯಾಯಾಮ ಶಾಲೆ ಕಳೆದ ೭ದಶಕಗಳಿಂದಲೂ ಸೇವೆ ನೀಡುತ್ತಾ ಬಂದಿದೆ. ಇಲ್ಲಿನ ದೇಹದಾರ್ಢ್ಯ ಪಟುಗಳು ರಾಷ್ಟಮಟ್ಟದಲ್ಲೂ ಸಾಧನೆ ಮಾಡಿರುವುದು ವಿಶೇಷ ಎಂದು ಈ ನಿಟ್ಟಿನಲ್ಲಿ ಮಾರುತಿ ವ್ಯಾಯಾಮ ಶಾಲೆಯಂತಹ ಸಂಸ್ಥೆಗಳು ಯುವಕರಿಗೆ ವ್ಯಾಯಾಮದ ಮಹತ್ವವನ್ನು ಸಾರುವ ಕೆಲಸ ಮಾಡುತ್ತಿದೆ.
ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ಇಲ್ಲಿ ಮಾರ್ಗದರ್ಶನ ನೀಡಲಾಗುತ್ತಿದೆ. ಜತೆಗೆ ಜಂಕ್ ಫುಡ್ ಸೇರಿದಂತೆ ಆರೋಗ್ಯಕ್ಕೆ ಹಾನಿಯಾಗುವ ಆಹಾರಗಳ ಬಗ್ಗೆ ಕೂಡ ಯುವಕರಲ್ಲಿ ಅರಿವು ಮೂಡಿಸಿ, ವ್ಯಾಯಾಮದೊಂದಿಗೆ ದೇಹದಾರ್ಢ್ಯದಲ್ಲೂ ಸಾಧನೆ ಮಾಡಲು ಪ್ರೇರೇಪಿಸುವ ಕೆಲಸ ಮಾಡುತ್ತಿದೆ. ಈ ಶಾಲೆಯ ಅನೇಕರು ರಾಜ್ಯ, ರಾಷ್ಟಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಸಾಧನೆ ಮಾಡಿರುವುದು ಈ ಸಂಸ್ಥೆಯ ಗುಣಮಟ್ಟಕ್ಕೆ ಕೈಗನ್ನಡಿ. ಇಂತಹ ಸಂಸ್ಥೆಗಳು ಇನ್ನಷ್ಟು ಬೆಳವಣಿಗೆ ಹೊಂದಲಿ ಎಂದು ಆಶಿಸಿದರು.
ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಮಾತನಾಡಿ, ಆಧುನಿಕ ಜೀವನ ಶೈಲಿಯಲ್ಲಿ ವ್ಯಾಯಾಮ, ಕ್ರೀಡೆಗಳು ಅತ್ಯಂತ ಅಗತ್ಯ ಪಾತ್ರವನ್ನು ವಹಿಸುತ್ತದೆ. ಯುವಜನತೆಯು ಆರೋಗ್ಯಯುತ ಜೀವನ ನಡೆಸಲು ವ್ಯಾಯಾಮವೂ ಅತ್ಯವಶ್ಯಕವಾಗಿದೆ. ನಿರಂತರ ಅಭ್ಯಾಸದಿಂದ ದೇಹವೂ ಗಟ್ಟಿಗೊಳ್ಳುವ ಜತೆಗೆ ಮಾನಸಿಕ ಆರೋಗ್ಯಕ್ಕೂ ಇದು ಪೂರಕವಾಗಿದೆ. ಅದರಲ್ಲೂ ಮಾರುತಿ ವ್ಯಾಯಾಮ ಶಾಲೆಯೂ ಹಿರಿಯರ ಮಾರ್ಗದರ್ಶನದೊಂದಿಗೆ ಸಾಕಷ್ಟು ಯುವಕರಿಗೆ ನೆರವಾಗುತ್ತಾ ಬಂದಿದೆ. ಇದೀಗ ೭೫ನೇ ವಾರ್ಷಿಕೋತ್ಸವದ ಭಾಗವಾಗಿ ರಾಜ್ಯಮಟ್ಟದಲ್ಲಿ ದೇಹದಾರ್ಢ್ಯ ಸ್ಪರ್ಧೆಯನ್ನು ಆಯೋಜಿಸಿರುವುದು ಸಂತಸ ತಂದಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚುಹೆಚ್ಚಾಗಿ ನಡೆಯುತ್ತಿದ್ದರೆ, ಸಾಕಷ್ಟು ಯುವಕರಿಗೆ ದೇಹದಾರ್ಢ್ಯದಲ್ಲಿ ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.
ಶ್ರೀ ಮಾರುತಿ ವ್ಯಾಯಾಮ ಶಾಲಾ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಬಿ.ಗುರುದೇವ ಮಾತನಾಡಿ, ಶ್ರೀ ಮಾರುತಿ ವ್ಯಾಯಾಮ ಶಾಲೆಯೂ ನಗರದ ಹಳೆಯ ವ್ಯಾಯಾಮ ಶಾಲೆಯಲ್ಲಿ ಒಂದಾಗಿದೆ. ಪಾರಂಪರಿಕ ವ್ಯಾಯಾಮ ಸಾಧನಗಳ ಜತೆಗೆ ಆಧುನಿಕ ವ್ಯಾಯಾಮದ ಉಪಕರಣಗಳನ್ನು ಹೊಂದಿದೆ. ನೇಕಾರರು, ಕೂಲಿ ಕಾರ್ಮಿಕರು ಹೆಚ್ಚಾಗಿ ಬರುವ ಈ ವ್ಯಾಯಾಮ ಶಾಲೆಯಲ್ಲಿ ಕಡಿಮೆ ಶುಲ್ಕ ಪಡೆಯಲಾಗುತ್ತಿದ್ದು, ಲಾಭ ದೃಷ್ಟಿ ಇಟ್ಟುಕೊಳ್ಳದೆ ಜನರಿಗೆ ಆರೋಗ್ಯ , ದೇಹ ಕ್ಷಮತೆ ನೀಡುವ ಗುರಿ ಹೊಂದಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಶಿವಣ್ಣ, ವಾಣಿಜ್ಯೋದ್ಯಮಿ ಉದಯರವಿ, ಶ್ರೀ ಮಾರುತಿ ವ್ಯಾಯಾಮ ಶಾಲಾ ಟ್ರಸ್ಟ್ ಕಾರ್ಯದರ್ಶಿ ಎಂ.ಎನ್. ಶಿವಶಂಕರ್, ಖಜಾಂಜಿ ಬಿ.ಪಿ.ಪ್ರಿಯಾಂಕ,ಟ್ರಸ್ಟಿಗಳಾದ ಎಚ್.ಎಸ್.ಸನಾತನ ಮೂರ್ತಿ, ಡಿ.ಬಿ ಶ್ರೀನಾಥ್, ಆರ್.ಕೃಷ್ಣಮೂರ್ತಿ, ಎ.ವಿ ರಘು, ಎಸ್.ದುರ್ಗಾ ಪ್ರಸಾದ್, ವಿಶ್ವನಾಥ, ಎಚ್.ಲಕ್ಷ್ಮಣ, ಕಾಂತರಾಜು, ಎನ್.ಪ್ರಕಾಶ್, ಜಯರಾಮ್, ಬಾಲ ಮುರಳಿ, ಮನೋಜ್, ಡಿ.ನಟರಾಜ್, ಡಿ.ಎನ್.ಬಾಲಸುಬ್ರಹ್ಮಣ್ಯ, ಎ. ಬಾಲರಾಜು, ಕೆ.ಎನ್ ಮೋಹನ್ ಚಂದ್ರ, ವ್ಯಾಯಾಮ ಶಾಲೆಯ ಮೇಲ್ವಿಚಾರಕ ಡಿ.ಕೆ.ವೆಂಕಟೇಶ್ ಹಾಜರಿದ್ದರು.



