ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರಾಜಕೀಯ ಅಧಿಕಾರ ಇದ್ದಾಗ ಮಾತ್ರ ಕ್ಷೇತ್ರದ ಅಭಿವೃದ್ಧಿ ಹೊಂದಲು ಸಾಧ್ಯ, ಕೆಪಿಸಿಸಿ ಅಧ್ಯಕ್ಷರ ಆಶೀರ್ವಾದ ಸಿಕ್ಕಿದೆ. ಇನ್ನಿಬ್ಬರ ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಮುಂದಿನ ದಿನಗಳಲ್ಲಿ ಕ್ಷೇತ್ರದ ಜನತೆಗೆ ಸಿಹಿ ಸುದ್ದಿ ಕೊಡುತ್ತೇನೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಣ್ಣಚಿತ್ತಯ್ಯ ಹೇಳಿದರು.
ನಗರದ ಹೊರವಲಯದ ಹೊಸದುರ್ಗ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಉಪಚುನಾವಣೆಯ ಮುಂದಿನ ಬೆಳವಣಿಗೆ ಹಾಗೂ ಕಾರ್ಯಯೋಜನೆ ಬಗ್ಗೆ ನೂರಾರು ಪಕ್ಷಾತೀತ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಕ್ಷೇತ್ರದ ಜನತೆ ತೋರಿಸಿದ ಪ್ರೀತಿ, ಅಭಿಮಾನ ನಾನು ಎಂದಿಗೂ ಮರೆಯುವುದಿಲ್ಲ. ಈ ಕ್ಷೇತ್ರದ ಜನರ ಋಣವನ್ನ ತೀರಿಸುವ ಕೆಲಸ ನಾನು ಮಾಡುತ್ತೇನೆ. ನನಗೆ ಆತ್ಮವಿಶ್ವಾಸವಿದೆ ತಾಳಿದಾನು ಬಾಳಿಯಾನು ಎಂಬಂತೆ ನನಗೆ ಟಿಕೆಟ್ ಸಿಗಲಿದೆ. ವರಿಷ್ಠರು ಕೂಡ ಧೃತಿಗೆಡಬಾರದು ಎಂಬ ಸೂಚನೆ ನೀಡಿದ್ದಾರೆ. ನನಗೆ ಅಧಿಕಾರ ಕೊಟ್ಟೇ ಕೊಡುತ್ತದೆ ಎಂಬ ನಂಬಿಕೆ ನನಗಿದೆ. ನಾನು ಜನಸೇವೆಗೆ ಬಂದಿದ್ದೇನೆ. ನಾವು ಗುರಿ ಸಾಧಿಸುವಾಗ ರಾಜಕೀಯ ಅಧಿಕಾರ ಹಿಡಿಯಬೇಕು. ಈಗಾಗಲೇ ವರಿಷ್ಠರನ್ನು ಭೇಟಿ ಮಾಡಿದ್ದು ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿದೆ. ಇನ್ಮುಂದೆ ನಾನು ಸದಾ ಹಿರಿಯೂರಿನಲ್ಲೇ ಉಳಿಯುತ್ತೇನೆ ಎಂದರು.
ತಾಲೂಕಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಇತ್ತ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಿಸಿರುವ
ವಾಣಿವಿಲಾಸ ಸಾಗರ ಜಲಾಶಯವಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣ ಹಿರಿಯೂರಿನ ಚಿತ್ರಣ ಬದಲಾವಣೆ ಹೊಂದುವ ಕಾಲ ಸನ್ನಿಹಿತವಾಗಿದೆ.
ನವೆಂಬರ್ ಅಥವಾ ಸಂಕ್ರಾಂತಿ ವೇಳೆಗೆ ತುಂಗಾ ನದಿಯಿಂದ ಭದ್ರಾ ನದಿಗೆ 17.40 ಟಿಎಂಸಿ ನೀರು ಹರಿಯುವ ಕಾಲ ಹತ್ತಿರವಾಗಿದೆ ಎಂದು ತಿಳಿಸಿದರು.
ಉಪ್ಪಾರ ಜನಾಂಗದ ತಾಲೂಕು ಅಧ್ಯಕ್ಷ ಪದ್ಮನಾಭ ಮಾತನಾಡಿ ಸಣ್ಣಚಿತ್ತಯ್ಯನವರ ಪ್ರವಾಸ ಕ್ಷೇತ್ರದಲ್ಲಿ ಹೊಸ ಬೆಳವಣಿಗೆ ತಂದಿದೆ. 2013ರ ಚುನಾವಣೆ ಟಿಕೆಟ್ ತಿರುವು ಪಡುದುಕೊಳ್ಳದಂತೆ ನಾವು ನೋಡಿಕೊಳ್ಳಬೇಕು. ಸಣ್ಣಚಿತ್ತಯ್ಯ ಅವರಿಗೆ ಟಿಕೆಟ್ ಕೊಡುವ ಎಲ್ಲಾ ನಿರೀಕ್ಷೆ ಇದೆ. ಕಾಂಗ್ರೆಸ್ ಪಕ್ಷ ತಪ್ಪು ನಿರ್ಧಾರ ಕೈಗೊಳ್ಳಬಾರದು. ಸಣ್ಣಚಿತ್ತಯ್ಯ ಅವರಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಪಕ್ಷದ ಅಸ್ತಿತ್ವ ಉಳಿದುಕೊಳ್ಳಲು ಸಾಧ್ಯ. ಒಂದುವೇಳೆ ಬೆರೆಯವರಿಗೆ ಟಿಕೆಟ್ ನೀಡಿದರೆ ಮುಂದಿನ ಬೆಳವಣಿಗೆಗಳು ಬೇರೆ ರೀತಿಯಲ್ಲಿ ಇರುತ್ತವೆ
ಎಂದು ಪಕ್ಷದ ನಾಯಕರಿಗೆ ಎಚ್ಚರಿಸಿದರು.
ಕೃಷಿಕ ಸಮಾಜದ ನಿರ್ದೇಶಕ ಹೆಚ್ ಆರ್. ತಿಮ್ಮಯ್ಯ ಮಾತನಾಡಿ ಕ್ಷೇತ್ರದಲ್ಲಿ ಸುಧಾಕರ್ ಅವರ ಆಡಳಿತ ಉತ್ತಮವಾಗಿರಲಿಲ್ಲ. ಜಿಲ್ಲೆಯಲ್ಲಿ ಕಾಡುಗೊಲ್ಲರು ಮತ್ತು ಕುಂಚಿಟಿಗರು ರಾಜಕೀಯದಿಂದ ವಂಚಿತರಾಗಿದ್ದಾರೆ. ಸಣ್ಣ ಚಿತ್ತಯ್ಯ ಅವರು ಆಡಳಿತದಲ್ಲಿ ಚತುರತೆ ಹೊಂದಿರುವ ವ್ಯಕ್ತಿ, ಇಂತಹವರಿಗೆ ಟಿಕೆಟ್ ನೀಡಿದರೆ ಕ್ಷೇತ್ರದ ಅಭಿವೃದ್ಧಿಯತ್ತ ಸಾಗಲಿದೆ. ಸುಹಾಸ್ ಸುಧಾಕರ್ ಗೆ ಆಡಳಿತ ಚತುರತೆ ಇಲ್ಲ, ಇಪ್ಪತ್ತೇಳೆಂಟು ವರ್ಷದ ಹುಡುಗನಿಗೆ ರಾಜಕೀಯ ಅರಿವು ಇಲ್ಲ.
ಹಿರಿಯೂರು ಕ್ಷೇತ್ರ ನೀರಾವರಿ ವಂಚಿತವಾಗಿರಲು ಸುಧಾಕರ್ ಅವರೇ ನೇರ ಕಾರಣ ಎಂದು ಆರೋಪಿಸಿದರು.
ಮಾಜಿ ತಾಪಂ ಸದಸ್ಯ ಯಶವಂತ ರಾಜ್ ಮಾತನಾಡಿ ತಾಲ್ಲೂಕಿಗೆ ನೀರಿನ ವಿಚಾರದಲ್ಲಿ ಬಹುದೊಡ್ಡ ಅನ್ಯಾಯವಾಗಿದೆ. ಜೆಜಿ ಹಳ್ಳಿ ಹಾಗೂ ಐಮಂಗಲ ಹೋಬಳಿಗೆ ಕುಡಿಯುವ ನೀರಿನ ಕೊರತೆ ಇದೆ. ನಮಗೆ ತಿಳುವಳಿಕೆಯಸ್ಥ ನಾಯಕ ಬಂದರೆ ಕ್ಷೇತ್ರದಲ್ಲಿ ಬದಲಾವಣೆ ಸಾಧ್ಯ. ಅದರಲ್ಲೂ ನೀರಾವರಿಯ ವಿಚಾರದಲ್ಲಿ ಸಣ್ಣ ಚಿತ್ತಯ್ಯ ಅವರಿಗೆ ಬದ್ಧತೆ ಇದೆ. ಇಂತಹ ವ್ಯಕ್ತಿಗೆ ಟಿಕೆಟ್ ನೀಡಿದರೆ ಪಕ್ಷಾತೀತವಾಗಿ ನಮ್ಮ ಬೆಂಬಲವಿದೆ. ಭದ್ರಾ ಡ್ಯಾಂ ತುಂಬಿದೆ. ನಿಮ್ಮ ಪ್ರಯತ್ನದಿಂದ ಸರ್ಕಾರದ ಮೇಲೆ ಒತ್ತಡ ತಂದು ಮುಂದಿನ ದಿನಗಳಲ್ಲಿ ವಿವಿ ಸಾಗರ ಡ್ಯಾಂಗೆ ನೀರು ಹರಿಸಲು ಪ್ರಯತ್ನಿಸಬೇಕು. ಟಿಕೆಟ್ ತಗೊಂಡು ಬಂದರೆ ಗೆಲುವು ನಿಮ್ಮದೇ ಎಂದರು.
ಕೃಷ್ಣಾಪುರ ಕೃಷ್ಣಮೂರ್ತಿ ಮಾತನಾಡಿ, ಪಕ್ಕದ ತಾಲೂಕು ಚಳ್ಳಕೆರೆಯಂತೆ ಅಭಿವೃದ್ಧಿ ಹೊಂದಲು ದೈತ್ಯ ನಿವೃತ್ತ ಇಂಜಿನಿಯರ್ ಸಣ್ಣ ಚಿತ್ತಯ್ಯರವರ ಅವಶ್ಯಕತೆ ಇದೆ. ನಾನು 2008ರಿಂದ ದಿವಂಗತ ಡಿ. ಸುಧಾಕರ್ ಅವರೊಂದಿಗೆ ಇದ್ದೇನೆ ನಾನು ಯಾವುದೇ ಅಭಿವೃದ್ಧಿ ಹೊಂದಿಲ್ಲ, ಕ್ಷೇತ್ರ ಕೂಡ ಅಭಿವೃದ್ಧಿಯತ್ತ ಸಾಗಿಲ್ಲ. ಹೈಕಮಾಂಡ್ ಒಪ್ಪಿ ಸಣ್ಣ ಚಿತ್ತಯ್ಯಗೆ ಟಿಕೆಟ್ ನೀಡಿದರೆ ಇತಿಹಾಸದಲ್ಲೇ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆ. ಜೊತೆಗೆ ಹಿರಿಯೂರು ಕ್ಷೇತ್ರ ಕೂಡ ಅಭಿವೃದ್ಧಿಯತ್ತ ಸಾಗಲಿದೆ ಎಂದು ಪುನರುಚ್ಚರಿಸಿದರು.
ಎಸ್.ಟಿ. ಕೃಷ್ಣಮೂರ್ತಿ, ಕಾಡುಗೊಲ್ಲ ಸಂಘದ ಅಧ್ಯಕ್ಷ ಪಿ.ಆರ್. ದಾಸ್, ತಿಪ್ಪೇಸ್ವಾಮಿ ಕೋಡಿಹಳ್ಳಿ, ಕಲ್ಲಹಟ್ಟಿ ತಿಪ್ಪೇಸ್ವಾಮಿ, ಸದಾನಂದ, ಷರೀಫ್ ಜಾನ್, ಬಿ. ರಾಜಶೇಖರ್ ಇತರರು ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ತಿಪ್ಪೀರಯ್ಯ, ಬಿಕೆ ಉಗ್ರಮೂರ್ತಿ, ಎಸ್.ಆರ್. ತಿಪ್ಪೇಸ್ವಾಮಿ, ವಕೀಲ ಯತೀಶ್, ಧರ್ಮಪುರ ಶಿವಣ್ಣ, ನೌಶಾದ್, ಕೆಆರ್ ಹಳ್ಳಿ ರವಿ, ವಿವಿ ಪುರ ಪೆರಿಸ್ವಾಮಿ, ಜೆಜಿ ಹಳ್ಳಿ ಖಾಲಿದ್ ಹುಸೇನ್, ಮಹೇಶ್, ಗೌನಹಳ್ಳಿ ಶಿವಣ್ಣ, ಚಿಕ್ಕಣ್ಣ, ಅಮ್ಮನಹಟ್ಟಿ ಕೇಶವ್, ಸಿಗೇಹಟ್ಟಿ ದಾಸಪ್ಪ, ತಿಮ್ಮರಾಯಪ್ಪ, ಪ್ರಭು ಯಾದವ್, ಮಂಜುನಾಥ್, ಉಡುವಳ್ಳಿ ಶಂಭು, ಪರಮೇನಹಳ್ಳಿ ಗುಂಡೇಗೌಡರ ಮಗ ಶಿವಮೂರ್ತಿ,ಮಹಾಲಿಂಗಪ್ಪ, ಮೂಡ್ಲಪ್ಪ, ಮದ್ದನಕುಂಟೆ ನಾಗಪ್ಪ ಸೇರಿದಂತೆ ನೂರಾರು ಬೆಂಬಲಿಗರು ಇದ್ದರು.



