ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಂಗೀತ ಶೋತೃಗಳ ಮತ್ತು ಆಸಕ್ತರ ಹೃದಯದಲ್ಲಿ ಗಾನಕೋಗಿಲೆ ಎಸ್. ಜಾನಕಿ ಅಮ್ಮನವರು ಶಾಶ್ವತವಾಗಿ ನೆಲೆಸಿರುತ್ತಾರೆ ಎಂದು ಉಪವಿಭಾಗಾಧಿಕಾರಿ ಡಾ. ಕಾಂತರಾಜ್ ಕೆ.ಜೆ. ತಿಳಿಸಿದರು.
ನಗರದ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಭವನದಲ್ಲಿ ಶುಕ್ರವಾರ ಸಂಜೆ ‘ಜನಮುಖಿ ಕಲ್ಚರಲ್ ಸೋಷಿಯಲ್ ಸೇವಾ ಸಂಘ' ವತಿಯಿಂದ ಆಯೋಜಿಸಲಾಗಿದ್ದ ದಕ್ಷಿಣ ಭಾರತದ ಗಾನಕೋಗಿಲೆ ಎಸ್. ಜಾನಕಮ್ಮನವರ ‘ಸ್ವರ ನಮನ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ಸರ್ವ ರೋಗಕ್ಕೂ ಸಿದ್ಧೌಷಧ ಇದ್ದಂತೆ. ಸಂಗೀತಗಾರರ ದೇಹಕ್ಕೆ ಸಾವಾಗಬಹುದೇ ವಿನಃ ಅವರ ಕಂಠದಿಂದ ಹೊರಹೊಮ್ಮಿದ ಗೀತೆಗಳಿಗೆ ಸಾವಿರುವುದಿಲ್ಲ. ಇಂತಹ ಮೇರು ಗಾಯಕಿಯ ಹಾಡುಗಳು ಪ್ರತಿಯೊಬ್ಬ ಸಂಗೀತಪ್ರೇಮಿಯ ಮನದಲ್ಲಿ ಚಿರಸ್ಥಾಯಿಯಾಗಿವೆ. ಜಿಲ್ಲೆಯ ಸಂಗೀತ ಕಲಾವಿದರನ್ನು ಒಗ್ಗೂಡಿಸಿ ಸಂಘಟನೆಯು 'ಸ್ವರ ನಮನ' ಶಿರ್ಷಿಕೆಯಡಿ ಕಾರ್ಯಕ್ರಮ ನಡೆಸುತ್ತಿರುವುದು ಅತ್ಯಂತ ಔಚಿತ್ಯಪೂರ್ಣ ಹಾಗೂ ಶ್ಲಾಘನೀಯ. ಇಂತಹ ವೇದಿಕೆಗಳನ್ನು ಜಿಲ್ಲೆಯ ಯುವ ಜನಾಂಗ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಜಿಲ್ಲಾ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಗಾಯಕ ಡಿ.ಒ. ಮುರಾರ್ಜಿ ಮಾತನಾಡಿ, ದೇಶದ ಸಂಗೀತ, ಸಾಹಿತ್ಯ ಹಾಗೂ ಸಂಸ್ಕøತಿಯ ಉಳಿವಿಗೆ ಶ್ರಮಿಸಿದ ಮಹನೀಯರಲ್ಲಿ ಎಸ್. ಜಾನಕಿ ಅವರು ಪ್ರಮುಖರು. ಅವರು ಪ್ರತಿಯೊಬ್ಬ ಗಾಯಕ-ಗಾಯಕಿಯರ ಪಾಲಿಗೆ ತಾಯಿಯ ಸ್ಥಾನದಲ್ಲಿದ್ದಾರೆ. ಹಿರಿಯ ಗಾಯಕ ದಿವಂಗತ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಂತಹ ದಿಗ್ಗಜರೂ ಸಹ ವೇದಿಕೆಗಳಲ್ಲಿ ಜಾನಕಮ್ಮನವರನ್ನು ಗೌರವದಿಂದ ಸ್ಮರಿಸುತ್ತಿದ್ದುದನ್ನು ನಾವು ಕೇಳಿದ್ದೇವೆ. ಇಂತಹ ಮಾತೃಸ್ವರೂಪಿಯನ್ನು ನಮ್ಮ ಜಿಲ್ಲೆಯ ಕಲಾವಿದರು ಸ್ಮರಿಸುವ ಕಾರ್ಯ ಮಾಡಿರುವುದು ಅಭಿನಂದನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಗಾಯಕ ಮನೋಹರ್ ವಹಿಸಿದ್ದರು. ಪ್ರಗತಿ ಸಮೃದ್ಧಿ ಸಹಕಾರ ಬ್ಯಾಂಕ್ ಅಧ್ಯಕ್ಷ ಅಬ್ಬೇನಹಳ್ಳಿ ಕಲ್ಲೇಶ್, ಚಲನಚಿತ್ರ ನಟ ಹಾಗೂ ಜ್ಯೂನಿಯರ್ ವಿಷ್ಣುವರ್ಧನ್ ಮಹಮ್ಮದ್ ಅಲಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ತಿಮ್ಮನಹಳ್ಳಿ ನಿಂಗರಾಜ್, ಕೋನಸಾಗರ ಶಿವು ಹಾಗೂ ರಾಯಾಪುರ ತಿಪ್ಪೇಶ್ ವಾದ್ಯ ಸಂಗೀತ ಸಂಯೋಜಿಸಿದರು. ಗಾಯಕರಾದ ಗೌಸ್ ಪೀರ್, ಎಂ.ಕೆ. ಹರೀಶ್, ಶಾಂಭವಿ ವಿನಯ್, ಭಾಗ್ಯಶ್ರೀ ಗಂಗಾಧರ್, ಪ್ರೇಮಲತಾ, ರವಿಪೂಜಾರಿ, ಮುರುಳಿಧರ, ಪ್ರವೀಣ್, ಮಂಜುನಾಥ್, ಮಲ್ಲಿಕಾರ್ಜುನ್, ಶ್ರೀಕುಮಾರ್ ಡಿ. ಮತ್ತಿತರರು ಜಾನಕಮ್ಮನವರ ಜನಪ್ರಿಯ ಗೀತೆಗಳನ್ನು ಪ್ರಸ್ತುತಪಡಿಸಿ ‘ಸ್ವರ ನಮನ’ ಸಲ್ಲಿಸಿದರು.



