ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ 'ಶಕ್ತಿ' (ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ) ಯೋಜನೆಯಿಂದಾಗಿ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಆರ್ಥಿಕವಾಗಿ ಉಸಿರುಗಟ್ಟುವ ಸ್ಥಿತಿ ತಲುಪಿವೆ ಎಂದು ಜೆಡಿಎಸ್ (ಜನತಾದಳ ಜಾತ್ಯತೀತ) ಪಕ್ಷವು ತೀವ್ರ ವಾಗ್ದಾಳಿ ನಡೆಸಿದೆ. ಕೇವಲ ರಾಜಕೀಯ ಪ್ರಚಾರಕ್ಕಾಗಿ ಘೋಷಿಸಿದ ಉಚಿತ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಭಿಕ್ಷಾಪಾತ್ರೆ ಹಿಡಿಯುವ ಹಂತಕ್ಕೆ ತಲುಪಿವೆ ಎಂದು ಪಕ್ಷವು ಆಕ್ರೋಶ ಹೊರಹಾಕಿದೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಹಾಗೂ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಜೆಡಿಎಸ್, ನಿಗಮಗಳ ಸದ್ಯದ ಆರ್ಥಿಕ ಬಿಕ್ಕಟ್ಟಿನ ಆಘಾತಕಾರಿ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.
ಜೆಡಿಎಸ್ ಹೊರಿಸಿರುವ ಪ್ರಮುಖ ಆರೋಪಗಳು:
4,928 ಕೋಟಿ ರೂ. ಬಾಕಿ: ಕಳೆದ 3 ವರ್ಷಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ವೆಚ್ಚಕ್ಕೆ ಸಂಬಂಧಿಸಿದಂತೆ ಸರ್ಕಾರವು ಸಾರಿಗೆ ಸಂಸ್ಥೆಗಳಿಗೆ ಪಾವತಿಸಬೇಕಾದ ಬರೊಬ್ಬರಿ 4,928 ಕೋಟಿ ರೂಪಾಯಿ ಸಬ್ಸಿಡಿ ಹಣವನ್ನು ಬಾಕಿ ಉಳಿಸಿಕೊಂಡಿದೆ. ಇದು ಸರ್ಕಾರದ ಆರ್ಥಿಕ ಅಸಮತೋಲನಕ್ಕೆ ಸಾಕ್ಷಿ ಎಂದು ಜೆಡಿಎಸ್ ಹೇಳಿದೆ.
8,000 ಕೋಟಿ ಸಾಲದ ಹೊರೆ: ಡೀಸೆಲ್ ಹಾಕಿಸಲು ಹಣವಿಲ್ಲದೇ ಒದ್ದಾಡುತ್ತಿರುವ ಸಾರಿಗೆ ನಿಗಮಗಳ ಮೇಲೆ ಈಗಾಗಲೇ 8,000 ಕೋಟಿ ರೂಪಾಯಿ ಸಾಲದ ಬೃಹತ್ ಹೊರೆ ಬಿದ್ದಿದೆ.
ನೌಕರರ ಪಿಎಫ್ ಬಾಕಿ: ಸಾರಿಗೆ ನೌಕರರ ಭವಿಷ್ಯ ನಿಧಿ (PF) ಬಾಕಿಯೇ 2,482 ಕೋಟಿ ರೂಪಾಯಿ ತಲುಪಿದ್ದು, ನೌಕರರಿಗೆ ಸಕಾಲಕ್ಕೆ ಸಂಬಳ ನೀಡಲು ಸಾರಿಗೆ ಸಂಸ್ಥೆಗಳು ತತ್ವಾರ ಪಡುತ್ತಿವೆ.
ಗುಜರಿ ಸೇರುತ್ತಿರುವ ಬಸ್ಸುಗಳು: ಆರ್ಥಿಕ ಮುಗ್ಗಟ್ಟಿನಿಂದಾಗಿ ಹೊಸ ಬಸ್ಸುಗಳ ಖರೀದಿ ಮತ್ತು ಹಳೇ ಬಸ್ಸುಗಳ ಸೂಕ್ತ ನಿರ್ವಹಣೆ ಸಾಧ್ಯವಾಗದೆ ಬಸ್ಸುಗಳು ಗುಜರಿ ಸೇರುತ್ತಿವೆ ಎಂದು ಜೆಡಿಎಸ್ ಕಳವಳ ವ್ಯಕ್ತಪಡಿಸಿದೆ.
ಜೆಡಿಎಸ್ ನೇರ ಪ್ರಶ್ನೆ: "ಕೇವಲ ಪ್ರಚಾರಕ್ಕಾಗಿ ಯೋಜನೆ ಘೋಷಿಸಿ, ನಿಗಮಗಳಿಗೆ ಬರೊಬ್ಬರಿ 4,928 ಕೋಟಿ ರೂ. ಬಾಕಿ ಉಳಿಸಿಕೊಂಡರೆ ಸಾರಿಗೆ ಸಂಸ್ಥೆಗಳು ನಡೆಯುವುದಾದರೂ ಹೇಗೆ ಸಾರಿಗೆ ಸಚಿವ ಬೈರತಿ ಸುರೇಶ್ ಅವರೇ? ಭ್ರಷ್ಟ ಕಾಂಗ್ರೆಸ್ ಸರ್ಕಾರದ ಆರ್ಥಿಕ ಮಿಸ್-ಮ್ಯಾನೇಜ್ಮೆಂಟ್ನಿಂದಾಗಿ ಸಾರಿಗೆ ನಿಗಮಗಳ ಉಸಿರು ನಿಲ್ಲುವಂತಾಗಿದೆ."
ಉಚಿತ ಯೋಜನೆಗಳ ಅಬ್ಬರದ ನಡುವೆ ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಹಳಿ ತಪ್ಪುತ್ತಿದ್ದು, ನೌಕರರು ಮತ್ತು ಸಂಸ್ಥೆಗಳ ಹಿತರಕ್ಷಣೆಯನ್ನು ಸರ್ಕಾರ ಗಾಳಿಗೆ ತೂರಿದೆ ಎಂದು ಜೆಡಿಎಸ್ ಕಟುವಾಗಿ ಟೀಕಿಸಿದೆ.



